Wednesday, December 7, 2011

ಓದುತ್ತ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳಬಹುದು...

ಹರೆಯ ಅಥವಾ ಯೌವನ ಜೀವನದಲ್ಲಿ ತೀರಾ ಮುಖ್ಯ. ಈ ಸಮಯದಲ್ಲಿ ಮನುಷ್ಯ ಉತ್ತಮ ಪುಸ್ತಕಗಳನ್ನು ಓದುತ್ತ ತನ್ನ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳಬಹುದು... ಅದು ಹೇಗೆ...? ಈ ಲೇಖನ ಓದಿ...

Thursday, December 1, 2011

ಮೌಡ್ಯತೆಯ ಮಡೆ ಸ್ನಾನ

ಈಗ ಮಂಡೆ ಬಿಸಿ ಮಾಡುತ್ತಿರುವುದು "ಮೌಡ್ಯತೆಯ ಮಡೆ ಸ್ನಾನ" ಇದು ಜಾತಿ ಯಾವುದೇ ಇರಲಿ ಉರುಳುವವರು ಮಾತ್ರ ಮನುಸ್ಯರು... ಇದು ಸರಿನಾ...?

Monday, May 9, 2011

ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...

"ಸತ್ಯಕ್ಕ- ಕಾಯಕಕ್ಕೆ ಮತ್ತೊಂದು ಹೆಸರು" ಸಂಶೋಧನಾ ಕೃತಿಗೆ ಸಂದ ಪುರಸ್ಕಾರ...
ತುಮಕೂರಿನಲ್ಲಿನಾನಾ ದಲಿತ ಸಂಘಟನೆಗಳು, ಬಸವ ಸಮಿತಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳ ಸಂಯೋಗದಲ್ಲಿ ನಡೆದ ಬಸವ ಜಯಂತಿ ವೇಳೆ ಪಾವಗಡ ಜಪಾನಂದ ಸ್ವಾಮೀಜಿ, ಹಾಗು ತುಮಕೂರು ಜಿಲ್ಲಾಧಿಕಾರಿ ಡಾ. ಸೋಮಶೇಖರ್ ಅವರು ನನ್ನನ್ನು ಸನ್ಮಾನಿಸಿದ್ದ ಸಮಯ...

Saturday, April 16, 2011

ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ

ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಹೊರಟಿರುವ ಕಪಟ ಜ್ಯೋತಿಷಿಗಳ ವಿರುದ್ಧ ರೂಪಿಸಲಾಗಿರುವ ಗುಂಪು ಇದು. ಹಣ, ಕೀರ್ತಿಗಾಗಿ ಸಮಾಜವನ್ನು ಭೀತಿಗೆ ಒಳಪಡಿಸುತ್ತಿರುವ, ಕಂದಾಚಾರಗಳ ಅಂಧಕಾರಕ್ಕೆ ತಳ್ಳುತ್ತಿರುವ ಈ ಡೋಂಗಿ ಜ್ಯೋತಿಷಿಗಳು ನಿಜವಾದ ಅರ್ಥದ ಸಮಾಜದ್ರೋಹಿಗಳು. ಕಪಟಿಗಳನ್ನು ಬಯಲು ಮಾಡುವ ಎಲ್ಲ ರೀತಿಯ ಚರ್ಚೆಯನ್ನೂ ಇಲ್ಲಿ ನಡೆಸೋಣ. ಎಷ್ಟು ಸಾಧ್ಯವೋ ಅಷ್ಟು ಸ್ನೇಹಿತರನ್ನು ಈ ಗುಂಪಿಗೆ ಸೇರಿಸಿ ಎಂದು ಮನವಿ ಮಾಡುತ್ತೇವೆ.
- ಸಂಪಾದಕೀಯ


www.sampadakeeya.blogspot.com

Friday, March 11, 2011

ಮತ್ತೆ ಬಾರದ, ಮರೆಯಲಾಗದ ಅನುಭವ

ಕಾಲೇಜು ಜೀವನ ನಿಜಕ್ಕೂ ಅನುಭವಿಸಲೇಬೇಕಾದ ಮಧುರ ಕ್ಷಣ. ವಿದ್ಯಾರ್ಥಿಯಾದ ಪ್ರತಿಯೊಬ್ಬರಿಗೂ ಕಾಲೇಜು ಲೈಫ್ ದಕ್ಕಲೇಬೇಕು. ಆ ಜೀವನವಿಲ್ಲದೆ ವಿದ್ಯಾರ್ಥಿ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಅದನ್ನು ಕಾಲೇಜ್ ಲೈಫ್ ಗೋಲ್ಡನ್ ಲೈಫ್ ಎನ್ನುವುದು. ಹೀಗಿರುವಾಗ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ಚಟುವಟಿಕೆಗಳನ್ನು ನೆನಪಿಸಿಕೊಂಡರೆ ‘ಛೇ.. ಆ ಕ್ಷಣ ಮತ್ತೆ ಬರಬಾರದೇ...’ ಎನಿಸಿಬಿಡುತ್ತದೆ. ಪ್ರಾಥಮಿಕ ಹಂತದಿಂದ ಕಾಲೇಜು ಜೀವನದವರೆಗೆ ಗಂಡು ಹೆಣ್ಣುಗಳೆಂಬ ಭೇದ ಬಾವವಿಲ್ಲದೆ ಎಲ್ಲರೂ ಒಟ್ಟುಗೂಡಿ ಕಲೆತು ಬೆರೆತು ಬಾಳುವವರಿಗೆ ಕಾಲೇಜಿಗೆ ಬರುತ್ತಿದ್ದಂತೆ ಮೈಮನದೊಳಗೆ ಹೊಸ ಹೊಸ ಆಸೆ, ಕನಸುಗಳು ನವಿರಾಗಿ ಚಿಗುರೊಡೆಯುತ್ತವೆ.
ಮೈ ಹರೆಯಕ್ಕೆ ಕಾಲಿಡುತ್ತಿದ್ದಂತೆ ಚೈತನ್ಯ ಎನ್ನುವುದು ಮೊಗ್ಗಾಗಿರುತ್ತದೆ. ಮನದಾಳದಲ್ಲಿ ಎಲ್ಲವನ್ನೂ ಜಯಿಸುವ, ನವ ನವೀನವಾದ ಕನಸುಗಳ ಗೋಪುರ ಕಟ್ಟುತ್ತ ಅವುಗಳನ್ನು ಒಂದೊಂದಾಗಿ ನನಸಾಗಿಸುವ ಕಾಲ ಅದು. ಹೀಗಿರುವಾಗ ಕಾಲೇಜು ಕ್ಯಾಂಪಸ್‌ನ ಹಾಸುಗಲ್ಲಿನ ಮೇಲೆ ಕುಳಿತು ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈ ಹಾಕಿಕೊಂಡು ತರಲೆ ಮಾಡುತ್ತ ಎಲ್ಲವನ್ನು ಹರವಿಕೊಳ್ಳುವ ಸುಮಯವದು...
ಕುಗ್ರಾಮವೊಂದರಿಂದ ಬೆಳೆದು ಬಂದ ನಾನು ಶಿವಮೊಗ್ಗದ ಡಿವಿಎಸ್(ದೇಶೀಯ ವಿದ್ಯಾ ಶಾಲೆ) ಕಾಲೇಜಿಗೆ ಪದವಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದೆ. ಹಳ್ಳಿಯಲ್ಲಿ ನಮ್ಮದೇ ಆದ ಜಂಜಡದ ನಡುವೆ ಬೆಳೆದ ನನಗೆ ಸಾಮಾನ್ಯವಾಗಿ ಶಿಕ್ಷಕನಾಗಬೇಕು ಎಂಬ ಹಂಬಲವಿತ್ತು. ಆ ಕಾರಣಕ್ಕಾಗಿಯೇ ಪಿಯುಸಿಯಲ್ಲಿ ಶಿಕ್ಷಣ ವಿಷಯವನ್ನು ಆರಿಸಿಕೊಂಡಿದ್ದೆ. ಆದರೆ ಮನೆಯ ಆರ್ಥಿಕ ಕಾರಣಗಳಿಂದ ಅದು ಕೈಗೂಡದೆ ಮತ್ತೆ ಪದವಿ ಮಾಡಲು ಹಾತೊರೆದು ಡಿವಿಎಸ್‌ಗೆ ಬಂದು ಬಿದ್ದಿದ್ದೆ.
ಆಗ ಮುಂದೆ ಯಾವುದನ್ನು ಓದಬೇಕು ಎಂಬುದೇ ಗೊಂದಲ ಶುರುವಾಗಿತ್ತು. ಆ ಹೊತ್ತಿನಲ್ಲಿ ಕೃಷ್ಣಮೂರ್ತಿ ಎಂಬ ಪ್ರಾಧ್ಯಾಪಕರು ‘ಕನ್ನಡ ಐಶ್ಚಿಕ ವಿಷಯ ತೆಗೆದುಕೊಂಡರೆ ಒಳ್ಳೆಯದು...’ ಎಂದ ಮಾತು ಕಿವಿಗೆ ಬಿದ್ದು, ಇದೇ ಇರಲಿ ಎಂದು ಅಚಾನಕ್ಕಾಗಿ ಅದಕ್ಕೇ ಗುರುತು ಹಾಕಿ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಿದ್ದೆ. ಸೀಟು ಸಲೀಸಾಗಿಯೇ ಸಿಕ್ಕಿತು. ಆದರೆ ವಸತಿಯದು ದೊಡ್ಡ ಸಮಸ್ಯೆಯಾಯಿತು. ಆದರೆ ಆ ಕ್ಷಣದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇದ್ದಿದ್ದರಿಂದ ಎದೆಗುಂದದೆ ಒಂದು ಕಡೆ ಸಂಜೆ ಕೆಲಸಕ್ಕೆ ಸೇರಿ ಚಿಕ್ಕದೊಂದು ರೂಮ್ ಮಾಡಿಕೊಂಡು ವಿದ್ಯಾಬ್ಯಾಸ ಆರಂಬಿಸಿದೆ. ಸಂಜೆ ಕೆಲಸ ಆ ವಯಸ್ಸಿಗೆ ಬೇಸರ ತರಿಸಿದರೂ ಬೆಳಗ್ಗೆಯಿಂದ ಸಂಜೆ ವರೆಗೆ ಕಾಲೇಜಿನಲ್ಲಿರುತ್ತಿದ್ದರಿಂದ ಆ ಎಲ್ಲ ಬೇಸರ, ನೋವು, ಹತಾಷೆಗಳು ಮಾಯವಾಗುತ್ತಿದ್ದವು.
ಹೇಳಿಕೇಳಿ ನನ್ನದು ಕನ್ನಡ ಐಶ್ಚಿಕ ವಿಷಯ. ಅಲ್ಲಿ ನನ್ನ ಜತೆಗೆ ಆ ವಿಷಯಕ್ಕೆ ಪ್ರವೇಶ ಪಡೆದಿದ್ದು ಕೇವಲ ೧೨ ಮಂದಿ. ಅವರಲ್ಲಿ ಇಬ್ಬರು ಮಾತ್ರ ಹುಡುಗಿಯರು! ಹೀಗಾಗಿ ನಮಗೆ ಪ್ರಾಧ್ಯಾಪಕರ ಜತೆಗೆ ಒಡನಾಟ ಇಟ್ಟುಕೊಳ್ಳಲು ಸುಲಭ ಮಾರ್ಗ ದೊರೆತ್ತಿತ್ತು. ಆದರೆ ತರಗತಿಯಿಂದ ಹೊರಗೆ ಬಂದ ನಂತರ ಕಾಲೇಜು ನಿಜಕ್ಕೂ ದೊಡ್ಡ ಸಾಗರ. ಒಂದೇ ಕಾಲೇಜಿನಲ್ಲಿ ಹಲವು ವಿಭಾಗಗಳು. ಆ ವಿಭಾಗಗಳಲ್ಲಿ ಒಂದನೇ ತರ
ಗತಿಯಿಂದ ಪದವಿ ವರೆಗೆ ಹತ್ತಾರು ಸೆಕ್ಷನ್‌ಗಳು. ಇದರಿಂದ ಆ ಕಾಲೇಜು ಕ್ಯಾಂಪಸ್ ಸದಾ ಕಲರ್‌ಫುಲ್ ಜಗತ್ತು.
ಎಲ್ಲಿ ನೋಡಿದರಲ್ಲಿ ಹುಡುಗ-ಹುಡುಗಿಯರ ಬಣ್ಣದ ಲೋಕ. ಅಲ್ಲಿ ಪ್ರೇಮಿಗಳು ಯಾರೊ? ಸ್ನೇಹಿತರು ಯಾರೊ? ಸೋದರ ಸೋದರಿಯರ‍್ಯಾರೋ? ಒಂದು ತಿಳಿಯುತ್ತಿರಲಿಲ್ಲ. ಅಲ್ಲಿದ್ದ ಮರಗಳ ಮೇಲೆ ಹಕ್ಕಿಗಳ ಕಲರವ. ಕೆಳಗೆ ಈ ಹಕ್ಕಿಗಳು... ಒಂದಂತೂ ಸತ್ಯ ಅಲ್ಲಿ ಪ್ರೇಮಿಗಳು ಹಾಗೂ ಸ್ನೇಹಿತರ ಸಂಖ್ಯೆಯೇ ಹೆಚ್ಚಾಗಿತ್ತು. ವಿಶಾಲವಾದ ಕ್ಯಾಂಪಸ್‌ನಲ್ಲಿ ಅವರು ಅವರದ್ದೇ ಆದ ಜಗತ್ತಿನಲ್ಲಿ
ಮೈಮರೆತು ಕಾಲ ಕಳೆಯುತ್ತಿದ್ದರು. ಗಲಾಟೆಗಳು, ಹೊಡೆದಾಟಗಳೂ ಕೂಡ ಇದ್ದವು! ಆದರೆ ಅವುಗಳು ಎಲ್ಲೋ ಒಮ್ಮೊಮ್ಮೆ ನಡೆಯುತ್ತಿದ್ದವು. ಆದರೆ ಅವುಗಳ ನಡುವೆ ರ‍್ಯಾಗಿಂಗು ಹೆಚ್ಚಾಗಿತ್ತು. ಅಮಾಯಕ ಹುಡುಗಿಯರು ಸೈಲೆಂಟಾಗಿ ಬರುತ್ತಿದ್ದರೆ ಸೀನಿಯರ್ ಹುಡುಗರು ಅವರನ್ನು ರೇಗಿಸುತ್ತಿದ್ದರು. ಕೆಲವು ತೀರಾ ಸೌಮ್ಯ ಸ್ವಭಾವದ ಹುಡುಗಿಯರು ಅಳುತ್ತ ಓಡಿದರೆ ಮತ್ತೆ ಕೆಲವು ಹುಡುಗಿಯರು ರೇಗಿಸಿದ ಹುಡುಗರೇ ಅಳುವಂತೆ ಮಾಡುತ್ತಿದ್ದರು!!
ಹಾಗಂತ ಕಾಲೇಜಂದರೆ ಇವಿಷ್ಟೇ ಅಲ್ಲ, ಸ್ನೇಹಕ್ಕೆ ಅಲ್ಲಿ ಪ್ರಮುಖ ಸ್ಥಾನ. ಅದಿಲ್ಲದೆ ಅಲ್ಲಿ ಯಾವುದೂ ನಡೆಯುತ್ತಿರಲಿಲ್ಲ. ರ‍್ಯಾಂಗಿಂಗ್ ಕೆಲವೊಮ್ಮೆ ಅತಿರೇಕ ಎನಿಸಿದರೂ ಅಲ್ಲಿಂದಲೇ ಎಷ್ಟೋ ಸಾರಿ ಹೊಸ ಸ್ನೇಹ ಚಿಗುರೊಡೆದಿದ್ದೂ ಉಂಟು. ಆ ಕಾಲದ ಸ್ನೇಹದಲ್ಲಿ ಯಾವು
ದೇ ಮುಚ್ಚುಮರೆಯಿಲ್ಲ. ಅಶ್ಲೀಲತೆ, ಗೌಪ್ಯತೆ ಎಂಬ ಯಾವುದೇ ಭೇದ ಕೂಡ ಅಲ್ಲಿರುತ್ತಿರಲಿಲ್ಲ. ಇದರಿಂದಾಗಿ ಎಲ್ಲವೂ ನಿಸ್ಸಂಕೋಚವಾಗಿ ಹಂಚಿಕೆಯಾಗುತ್ತಿದ್ದವು. ಒಳ್ಳೆಯದು, ಕೆಟ್ಟದ್ದು ಎಲ್ಲವೂ ವಿನಿಮಯವಾಗುತ್ತಿದ್ದರಿಂದ ಸ್ನೇಹ ಮತ್ತಷ್ಟು ಗಟ್ಟಿಕೊಳ್ಳಿತ್ತು.
ಬದುಕು ಹೊಸ ದಿಕ್ಕಿಗೆ ತೆರೆದುಕೊಳ್ಳುತ್ತಿತ್ತು. ಸ್ವಲ್ಪ ಎಚ್ಚರ ತಪ್ಪಿದ್ದರೂ ಆ ಕ್ಯಾಂಪಸ್ ಬಾಳ ಹಾದಿಯ ಗುರಿಯನ್ನೇ ದಿಕ್ಕು ತಪ್ಪಿಸುವ ಸಾಧ್ಯತೆಯೂ ಇತ್ತು. ಆದರೆ ಹಾಗಾಗಲಿಲ್ಲ... ಹಾಗಾಗಿ ನಿಜಕ್ಕೂ ಅದು ಮತ್ತೆ ಬಾರದ ಮರೆಯಲಾಗದ ಅನುಭವ.

ಮಕ್ಕಳ ಮನೋಭಾವಕ್ಕೆ ನೀರೆರೆದು ನೋಡಿ...

ಮಕ್ಕಳು ಪ್ರಾಜೆಕ್ಟ್ ವರ್ಕ್ ಮಾಡುವಾಗ ‘ಅದು ಪ್ರಯೋಜನವಿಲ್ಲದ್ದು, ಅದನ್ನು ಮಾಡುತ್ತಾ ಕುಳಿತು ಟೈಮ್ ವೇಸ್ಟ್ ಮಾಡ್ಬೇಡ... ಹೋಗಿ ಓದು...’ ಎಂದು ಗದರಿಸಬೇಡಿ. ಅದು ಕೇವಲ ಪ್ರಾಜೆಕ್ಟ್ ಅಲ್ಲ, ಅವರ ಮನೋಬಲವನ್ನು ಹೆಚ್ಚಿಸುವ ಜತೆಗೆ ಕೌಶಲ ವೃದ್ಧಿಸುವ ಕಾಯಕ. ಕ್ರಿಯಾಶೀಲತೆ ಬೆಳೆಸುವ ಸ್ಫೂರ್ತಿಯ ಚಿಲುಮೆ. ನಿಮ್ಮಿಂದ ಅದಕ್ಕೆ ಪ್ರೇರಣೆ ಒದಗಿಸಲು ಸಾಧ್ಯವಾದರೆ ಜತೆಗೆ ನಿಂತು ಸಹಾಯ ಮಾಡಿ. ಇಲ್ಲದೇ ಹೋದರೆ ಅವರ ಪಾಡಿಗೆ ಅವರನ್ನು ಬಿಟ್ಟು ನೋಡುತ್ತ ಸುಮ್ಮನಿದ್ದುಬಿಡಿ. ಅವರನ್ನು ನಿರಾಶರನ್ನಾಗಿ ಮಾಡಿ ನಿರುತ್ಸಾಹಗೊಳಿಸಬೇಡಿ...

ಮಕ್ಕಳಿಗೆ ಇತ್ತೀಚೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರಾಜೆಕ್ಟ್ ವರ್ಕ್‌ಗಳನ್ನು ಮನೆಗೆಲಸಕ್ಕೆ ಕೊಡುವ ಪ್ರವೃತ್ತಿ ಹೆಚ್ಚುತ್ತಿದೆ. ಅದಕ್ಕೆ ಕಾರಣ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸುವ ಪ್ರಯತ್ನ ಅಷ್ಟೆ. ಆದರೆ ಮಗುವಿನ ತಾಯಿಯೂ ಸೇರಿದಂತೆ ಬಹುತೇಕ ಪೋಷಕರು ಇದೊಂದು ನಿಷ್ಪ್ರಯೋಜಕ ಕೆಲಸವೆಂದು ತಿಳಿದುಕೊಂಡು, ಮಕ್ಕಳು ಮಾಡುವ ಆ ಪ್ರಾಜೆಕ್ಟ್ ವರ್ಕ್‌ಗೆ ಅಡ್ಡಿಪಡಿಸುವ ಪ್ರವೃತ್ತಿ ನಿರಂತರವಾಗಿ ಮುಂದುವರಿಸುತ್ತಾರೆ.
ಮಕ್ಕಳಿಗೆ ಈ ರೀತಿ
ಯ ಕೆಲಸ ನೀಡುವುದರಿಂದ ಅವರ ಅಲೋಚನಾ ಶಕ್ತಿ ಕೂಡ ಹೆಚ್ಚುತ್ತದೆ. ಜತೆಗೆ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದ್ದು, ಇದು ಮಕ್ಕಳ ಮನಸ್ಸನ್ನು ಪ್ರಭುದ್ಧಗೊಳಿಸುತ್ತದೆ ಎನ್ನುವ ಉದ್ದೇಶದಿಂದ ಶಿಕ್ಷಕರು ಪ್ರಾಜೆಕ್ಟ್ ಕೆಲಸ ನೀಡುತ್ತಾರೆ. ಆದರೆ ಪೋಷಕರು ಇದರಿಂದ ಮಕ್ಕಳು ಸಮಯ ಹಾಳು ಮಾಡುತ್ತಾರೆ, ಇದರಿಂದ ಯಾವುದೇ ಉಪಯೋಗವಿಲ್ಲ. ಹೆಚ್ಚು ಓದಿಕೊಂಡರೆ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಹೆಚ್ಚು ಅಂಕ ಪಡೆಯಬಹುದು ಎಂದು ಯೋಚಿಸಿ ಮಕ್ಕಳನ್ನು ‘ಆ ಪ್ರಾಜೆ
ಕ್ಟ್ ಬಿಟ್ಟು ಹೋಗಿ ಓದ್ಕೋ...’ ಎಂದು ಗದರಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಮಕ್ಕಳು ಖುಷಿಯಿಂದ ಮಾಡುವ ಈ ಪ್ರಾಜೆಕ್ಟ್ ಕೆಲಸಕ್ಕೆ ಪೋಷಕರು ಅಡ್ಡಿಪಡಿಸುವುದರಿಂದ ಮಕ್ಕಳು ತಮ್ಮ ಅಭಿಲಾಷೆಗೆ ಪ್ರೇರಣೆ ಅಥವಾ ಪ್ರೋತ್ಸಾಹವೇ ಇಲ್ಲ ಎಂದುಕೊಂಡು ಖಿನ್ನತೆಗೆ ಒಳಗಾಗುವ ಅಥವಾ ಹೊಸತನದ ಬಗ್ಗೆ ಚಿಂತಿಸದೇ ಹೋಗುವ ಸಾಧ್ಯತೆ ಹೆಚ್ಚಿದೆ.
ಆದರೆ ಪೋಷಕರು ಅವರ ಕೆಲಸಕ್ಕೆ ಬೆಂಬಲವಾಗಿ ನಿಲ್ಲಬೇಕು. ಇದೂ ಕೂಡ ಮಕ್ಕಳ ಓದಿಗೆ ಪೂರಕ. ಪೋಷಕರು ಮಕ್ಕಳ ಪ್ರಾಜೆಕ್ಟ್ ವರ್ಕ್ ಏನು ಎಂಬುದನ್ನು ತಿಳಿದು, ಅದಕ್ಕೆ ಪೂರಕವಾಗಿ ಕೆಲವು ಸಲಹೆ ನೀಡಬಹುದು. ಇಲ್ಲವೇ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಹೊಸ ಪ್ರಯೋಗಗಳ ಬಗ್ಗೆ ಇಂಟರ್‌ನೆಟ್ ಅಥವಾ ಇನ್ನಾವುದೇ ಮೂಲಗಳಿಂದ ಹುಡುಕಿ ತೋರಿಸಬೇಕು. ಜತೆಗೆ ಅವರ ಪ್ರಾಜೆಕ್ಟ್‌ಗೆ ಬೇಕಾದ ವಸ್ತುಗಳ
ನ್ನು ಹೊಂದಿಸಿಕೊಡಬೇಕು. ಇಲ್ಲವೇ ಅವರ ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಅದನ್ನು ಮತ್ತಷ್ಟು ಉತ್ತಮಗೊಳಿಸಿಕೊಡಬೇಕು. ಹೀಗಾದಾಗ ಮಕ್ಕಳು ಮತ್ತಷ್ಟು ಭಿನ್ನವಾಗಿ ಅಥವಾ ವೈವಿಧ್ಯಪೂರ್ಣವಾಗಿ ಯೋಚಿಸಲು ಸಾಧ್ಯವಾಗುತ್ತದೆ.
ಇದು ಮಕ್ಕಳ ಓದಿನ ಸಮಯವನ್ನು ಕೊಲ್ಲುವುದಿಲ್ಲ. ಬ
ದಲಿಗೆ ಇದೊಂದು ಪಠ್ಯೇತರ ಚಟುವಟಿಕೆ ಅಷ್ಟೆ. ಇದರಿಂದ ಮಕ್ಕಳು ಓದಿನಲ್ಲಿ ಮತ್ತಷ್ಟು ಆಸಕ್ತಿ ತೋರಲು ಪ್ರೇರಣೆ ನೀಡುತ್ತದೆ. ಜತೆಗೆ ಅವರ ಕೌಶಲ ಶಕ್ತಿ ಕೂಡ ವೃದ್ಧಿಸುತ್ತದೆ. ಅಲ್ಲದೇ ಅವರೇ ಪ್ರಾಜೆಕ್ಟ್ ಮಾಡುವ ವಿಚಾರದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದೂ ತಪ್ಪುತ್ತದೆ. ಇದೆಲ್ಲದರ ಜತೆಗೆ ಮಕ್ಕಳಿಗಾಗುವ ಮತ್ತೊಂದು ಉಪಯೋಗವೆಂದರೆ ಅವರು ಸದಾ ಉಲ್ಲಾಸದಿಂದ ಇರುವುದರೊಂದಿಗೆ ಮುಂದಿನ ತರಗತಿಗಳಲ್ಲೂ ಅದೇ ಚೈತನ್ಯದಿಂದ ಓದು ಹಾಗೂ ಹೊಸ ಪ್ರಾಜೆಕ್ಟ್‌ನ ಕಡೆಗೆ ಮಗನಹರಿಸುತ್ತಾರೆ. ಇದರಿಂದ ಅ
ವರು ಹೆಚ್ಚು ಅಂಕ ಗಳಿಸಲು ಕೂಡ ಪೂರಕವಾಗುತ್ತದೆ.
ಕ್ರಿಯಾಶೀಲ ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರ ಮುಂದಿರುವುದಿಲ್ಲ, ಬದಲಿಗೆ ಅವರು ಯಾವಾಗಲೂ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಾರೆ. ಅಂಥ ಮಕ್ಕಳು ಮೈದಾನದಲ್ಲಿ ಆಡುತ್ತಾರೆ, ಇಲ್ಲವೇ ಅದೇ ಮೈದಾನದಲ್ಲಿ ಒಂದು ಬ್ಲೇಡ್, ಗಮ್ ಹಾಗೂ ದಪ್ಪನೆಯ ಕಾಗದದೊಂದಿಗೆ ಕುಳಿತು ಏನಾದರೊಂದು ಭಿನ್ನವಾದ ಚಿತ್ರ, ಇಲ್ಲವೆ ಹಸ್ತ ಕೌಶಲದ ಮೂಲಕ ಹೊಸ ವಸ್ತು
ವನ್ನು ತಯಾರಿಸುವ ನಿಟ್ಟಿನಲ್ಲಿ ಆಲೋಚಿಸುತ್ತಿರುತ್ತಾರೆ. ಹೀಗಾಗಿ ಅವರು ಅದನ್ನೇ ಬಿಡುವಿನ ಸಮಯ ಎಂದುಕೊಂಡು ಸದಾ ಹೊಸತನಕ್ಕೆ ಹಪಹಪಿಸುವ ಮನೋಸ್ಥಿತಿ ಬೆಳೆಸಿಕೊಳ್ಳುತ್ತಾರೆ.
ಇಂಥ ಸಂದರ್ಭದಲ್ಲಿ ಮಕ್ಕಳ ಮುಂದೆ ಪೋಷಕರು ಅದರ ಬಗ್ಗೆ ಸಲ್ಲದ ರೀತಿಯಲ್ಲಿ ಹೇಳಿಕೆಗಳನ್ನು ನೀಡಿ ಅವರನ್ನು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡಬಾರದು. ಇದು ಅವರ ಮಾನಸಿಕ ಮನೋಬಲದ ಮೇಲೆ ವಾಸಿಯಾಗದ ರೀತಿಯಲ್ಲಿ ಗಾಯ ಮಾಡಿಬಿಡುತ್ತದೆ.
ಮೊದಲು ಶಾಲೆಗಳಲ್ಲಿ ಇಂಥ ಪ್ರಾಜೆಕ್ಟ್ ವರ್ಕ್‌ಗಳು ತುಂಬಾ ಕಡಿಮೆ ಇದ್ದವು. ಈಗ ಶಿಕ್ಷಣದ ಕ್ರಮ ಬದಲಾಗಿದ್ದರಿಂದ ಇಂಥ ಮನೆಗೆಲಸಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಪಠ್ಯಕ್ಕಿಂತ ಇಂಥ ಪಠ್ಯೇತರ ಚಟುವಟಿಕೆಗಳಿಂದಲೇ ಮಕ್ಕಳು ಉತ್ತಮ ಬೌದ್ಧಿಕ ಮಟ್ಟ ಪಡೆಯತ್ತಾರೆ. ಜತೆಗೆ ಇವು ಮಕ್ಕಳ ಬಾಲ್ಯವನ್ನು ಅವರಿಗೆ ಧಕ್ಕಿಸಿಕೊಡುವ ಜತೆಗೆ ಅವರಿಗೆ ಅವು ತುಂಬಾ ಸಿಹಿಯಾದ ನೆನಪಿನ ಬುತ್ತಿಗಳು ಎನ್ನುತ್ತಾರೆ ಶಿಕ್ಷಣ ತಜ್ಞರು.
ಹೀಗಿರುವಾಗ ಪೋಷಕರಾದ ನಾವು ಆ ಮುಗ್ದ ಮಕ್ಕಳ ಮನೋಬಲಕ್ಕೆ ಅದು ಬೇಡ, ಇದು ಬೇಡ, ನಾವು ಹೇಳಿದ್ದನ್ನೇ ಮಾಡಿ ಎಂದು ತಣ್ಣೀರೆರಚುವ ಬದಲು ಅವರ ಆಸಕ್ತಿಗೆ ಅನುಗುಣವಾಗಿ ಬೆಂಬಲವಾಗಿ ನಿಂತು ಮಕ್ಕಳ ಸಾಮರ್ಥ್ಯಕ್ಕೆ ಮತ್ತಷ್ಟು ನೀರೆರೆದು ಪೋಷಿಸೋಣ ಅಲ್ಲವೆ?

Wednesday, March 9, 2011

ವಿಶ್ವ ಕನ್ನಡ ಸಮ್ಮೇಳನಕ್ಕೆ ಮೂರ್ತಿ ಬರಲಿ, ಉದ್ಘಾಟನೆ ಬೇರೆಯವರಿಂದಾಗಲಿ

ಬರೊಬ್ಬರಿ ಇಪ್ಪತ್ತೈದು ವರ್ಷಗಳ ನಂತರ ‘ವಿಶ್ವ ಕನ್ನಡ ಸಮ್ಮೇಳನ’ ನಡೆಯುತ್ತಿದೆ, ಸಂತಸ. ಆದರೆ ಅದು ಗೊಂದಲದ ಗೂಡಾಗಿರುವುದು ಮಾತ್ರ ವಿಪರ್ಯಾಸ. ನಿಜ ಹೇಳಬೇಕೆಂದರೆ ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರಕಾರ. ಇಲ್ಲಿ ಗೊಂದಲ ಉಂಟಾವಾಗಿರುವುದು ಈ ಸಮ್ಮೇಳನವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಉದ್ಘಾಟಿಸಬೇಕೆ? ಬೇಡವೇ? ಎನ್ನುವುದರಲ್ಲಿ. ನಾರಾಯಣ ಮೂರ್ತಿ ಕನ್ನಡಿಗರೆ. ಅವರೇನು ಹೊರಗಿನವರಲ್ಲ. ಜತೆಗೆ ಅವರನ್ನು ಸಮ್ಮೇಳನಕ್ಕೆ ಕರೆಸಲೇಬಾರದು ಎನ್ನುವುದೂ ಅಲ್ಲ. ಆದರೆ ಉದ್ಘಾಟನೆ ಅವರಿಂದ ಆಗುವುದು ಬೇಡ ಎಂಬುದಷ್ಟೆ. ಒಂದು ಸಾಮಾನ್ಯ ಕಾರ್ಯಕ್ರಮವಾದರೆ ಯಾರನ್ನು ಬೇಕಾದರೂ ಕರೆಸಿ ಉದ್ಘಾಟಿಸಬಹುದು. ಅದರಲ್ಲಿ ತಪ್ಪಿಲ್ಲ ಏಕೆಂದರೆ ಇಲ್ಲಿ ಎಲ್ಲರೂ ಕನ್ನಡಿಗರೆ. ಆದರೆ ಇಲ್ಲಿ ಈ ವಿವಾದಕ್ಕೆ ಮೂಲ ಪ್ರೇರಣ ಮೂರ್ತಿಯವರನ್ನು ಕರೆಯುವಲ್ಲಿ ಸರಕಾರದ ಹಿಂದಿರುವ ಉದ್ದೇಶ!
ನಿಜ, ಮೂರ್ತಿಯವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡವರು. ಅವರಿಂದ ಸಮ್ಮೇಳನ ಉದ್ಘಾಟನೆಗೊಂಡರೆ ವಿಶ್ವ ಮಟ್ಟದಲ್ಲಿ ಈ ಸಮ್ಮೇಳನ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಅದರಿಂದ ವಿಶ್ವದ ಮೂಲೆ ಮೂಲೆಯ ಬಂಡವಾಳಶಾಹಿಗಳು ಬೆಂಗಳೂರು ಅಥವಾ ಕರ್ನಾಟಕದತ್ತ ಮುಖ ಮಾಡುತ್ತಾರೆ ಎನ್ನುವುದು ಇಲ್ಲಿನ ಸರಕಾರದ ಉದ್ದೇಶ. ಹಾಗಾದರೆ ಐಶ್ವರ್ಯ ರೈ ಕನ್ನಡವಳು. ಜಾಗತಿಕ ಮಟ್ಟದಲ್ಲಿ ಆಕೆಯೂ ಹೆಸರು ಮಾಡಿದ್ದಾಳೆ. ಅವಳು ಬಂದರೆ ಜಗತ್ತೇ ಇತ್ತ ತಿರುಗಿ ನೋಡುತ್ತದೆ. ಅವಳನ್ನು ಕರೆಸಿ ಉದ್ಘಾಟಿಸಬಹುದಲ್ಲ? ಅವಳಿರಲಿ, ಶಿಲ್ಪಾಶೆಟ್ಟಿ ಅವಳೂ ಕೂಡ ಕನ್ನಡಿಗಳೇ, ಅವಳು ಕನ್ನಡದಲ್ಲಿ ಹಲವು ಚಿತ್ರದಲ್ಲಿ ನಟಿಸಿದ್ದಾಳೆ. ಅವಳನ್ನಾದರೂ ಕರೆಸಿ ಉದ್ಘಾಟಿಸಬಹದಲ್ಲ!
ಹೀಗೆ ಕೇವಲ ಪ್ರಚಾರ, ಅಥವಾ ಇನ್ನಾವುದೇ ಬಂಡವಾಳದ ಆಸೆ ಆಮಿಷಗಳಿಂದ ಯಾರ‍್ಯಾರಿಂದಲೋ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುತ್ತ ಹೋದರೆ ಅದು ಕನ್ನಡ ಸಮ್ಮೇಳನವಾಗಿ ಉಳಿಯುವುದಿಲ್ಲ. ಎಲ್ಲ ‘ಮಾರಿ ಜಾತ್ರೆ’ಗಳಂತೆ ಅದೂ ಒಂದು ಜಾತ್ರೆಯಾಗಿ ಮೂರೇ ದಿನದಲ್ಲಿ ಮರೆತು ಹೋಗುತ್ತದೆ. ದಿನಗಳೆದಂತೆ ಕನ್ನಡ ಸಾಹಿತ್ಯ ಸಮ್ಮೇಳನಗಳೇ ಕೇವಲ ಜಾತ್ರೆಗಳಾಗುತ್ತಿವೆ. ಅದಕ್ಕೆ ಸ್ಪಷ್ಟ ಉದಾಹರಣೆ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ೭೭ನೇ ಸಾಹಿತ್ಯ ಸಮ್ಮೇಳನ. ಇಲ್ಲಿ ಸಮ್ಮೇಳನ ನಡೆದಾಗ ಕೇವಲ ಚಾಮರಾಜಪೇಟೆ, ಬಸವನಗುಡಿ, ಕಾರ್ಪೋರೇಷನ್, ಮೆಜೆಸ್ಟಿಕ್ ಬಿಟ್ರೆ ಬೇರೇಲ್ಲೂ ಸಾಹಿತ್ಯ ಸಮ್ಮೇಳನದ ಗಾಳಿಯು ಸೋಕಿರಲಿಲ್ಲ. ಇಂಥ ಪರಿಸ್ಥಿತಿ ಹೀಗೇ ಮುಂದುವರಿದರೆ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್‌ಗಳಿಗೆ ಹೋಗುವುದು ಒಂದೇ; ಕನ್ನಡ ಸಮ್ಮೇಳನ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗುವುದೂ ಒಂದೆಯಾಗಿ ಬಿಡುತ್ತದೆ.
ನಾರಾಯಣ ಮೂರ್ತಿ ಮಧ್ಯಮ ಕುಟುಂಬದಿಂದ ಬಂದವರು, ಕರ್ನಾಟಕದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನಿಜ, ಅದನ್ನು ಯಾರೂ ಅಲ್ಲಗಳೆಯುವ ಹಾಗಿಲ್ಲ. ಇನ್ಫೋಸಿಸ್ ಸ್ಥಾಪನೆ ಮಾಡಿದ ನಂತರ ಬೆಂಗಳೂರು ಗುರುತಿಸಿಕೊಳ್ಳುವಂತಾಯಿತು, ಜಗತ್ತೇ ಇತ್ತ ತಿರುಗಿನೋಡುವಂತಾಗಿದೆ, ಕನ್ನಡಿಗರೆ ಉದ್ಯೋಗ ದೊರೆತಂತಾಗಿದೆ ಎನ್ನುವುದರಲ್ಲಿ ಹುರುಳಿಲ್ಲ. ಮೊದಲು ಬೆಂಗಳೂರು ‘ಉದ್ಯಾನ ನಗರಿ’ಯಾಗಿ ಹೆಸರು ಮಾಡಿತ್ತು. ಆನಂತರ ನಾರಾಯಣ ಮೂರ್ತಿ ಸೇರಿದಂತೆ ಅನೇಕ ಉದ್ಯಮಿಗಳು ಐಟಿಬಿಟಿ ಸೆಂಟರ್‌ಗಳನ್ನು ನಿರ್ಮಾಣ ಮಾಡಿದ್ದರಿಂದ ಬೆಂಗಳೂರು ಕಾಸ್ಮೋಪಾಟನ್ ಸಿಟಿಯಾಯಿತು (ಅಲ್ಲಿ ಕೆಲಸ ನೆಚ್ಚಿಕೊಂಡು ಹೋದ ಅನೇಕರ ಸ್ಥಿತಿ ಈಗ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ). ನೈರ್ಮಲ್ಯವೇ ಮಾಯವಾಯಿತು. ಐಟಿ ಸಿಟಿಯ ಜತೆಗೆ ಕೊಳಕು ನಗರ ಎನ್ನುವ ಕಳಂಕಬರಿತ ಹಣೆಪಟ್ಟಿಯನ್ನೂ ಜಾಗತಿಕ ಮಟ್ಟದಲ್ಲಿಯೇ ಪಡೆದುಕೊಳ್ಳುತ್ತಿದೆ. ಈ ಹಣೆ ಪಟ್ಟಿಯನ್ನೂ ನಾರಾಯಣಮೂರ್ತಿಯೊಬ್ಬರಿಗೇ ಅಂಟಿಸಿಬಿಡೋಣವೇ?
ಸುಖಾಸುಮ್ಮನೆ ಈಗ ನಾರಾಯಣ ಮೂರ್ತಿಯವರ ಒಂದೊಂದೇ ವಿಚಾರಗಳು ಹೊರಗೆ ಬರುತ್ತಿವೆ. ಅವರು ಸಹ ಎಂದೂ ಸುಮ್ಮನೆ ಕುಳಿತವರಲ್ಲ. ಕನ್ನಡ, ನಾಡು ನುಡಿ ವಿಚಾರ ಬಂದಾಗಲೆಲ್ಲ ಅದಕ್ಕೆ ವಿರುದ್ಧವಾಗಿ ನಿಂತವರು ಮೂರ್ತಿ. ಅದು ಒಂದನೇ ತರಗತಿಯಿಂದ ಕನ್ನಡ ಕಲಿಸುವುದಾಗಲಿ, ನಾಡ ಗೀತೆ ವಿಚಾರದಲ್ಲಾಗಲಿ. ಕನ್ನಡದ ಪರವಾಗಿದ್ದವರಲ್ಲವೇ ಅಲ್ಲ. ಜತೆಗೆ ತೆರಿಗೆ ವಿನಾಯಿತಿ ಸಿಕ್ಕಿದ್ದರೂ ಸರಕಾರಕ್ಕೆ ಸರಿಯಾದ ಲೆಕ್ಕ ಪತ್ರ ನೀಡದೆ ೪೫೦ಕೋಟಿ ರೂ. ತೆರಿಗೆ ಹಣ ವಂಚಿಸಿದ್ದ ಬಗ್ಗೆಯೂ ಆರೋಪಗಳಿವೆ. ಅದಕ್ಕೆ ಅವರು ಹೊಣೆಯೇ ಅಲ್ಲ, ಬೃಹತ್ ಕಾರ್ಪೋರೇಷನ್ ಕಂಪನಿಗಳಲ್ಲೆಲ್ಲಾ ಇದು ಸಾಮಾನ್ಯ ಎಂದು ಸುಮ್ಮನಿರಲಾಗುತ್ತದೆಯೇ? ಕನ್ನಡ ಭಾಷೆ, ಕನ್ನಡ ಸಾಹಿತ್ಯಕ್ಕೆ ಭ್ರಷ್ಟಾಚಾರವನ್ನು ತಡೆಯುವ ಶಕ್ತಿ ತಕ್ಷಣಕ್ಕೆ ಇಲ್ಲದಿರಬಹುದು. ಆದರೆ ನಿಧಾನವಾಗಿ ತಡೆಯುವ ಶಕ್ತಿ ಖಂಡಿತಾ ಇದೆ. ಆ ಕೆಲಸವನ್ನು ಕನ್ನಡಿಗರೆನಿಸಿಕೊಳ್ಳುವ ನಾವು ನೀವು ಮಾಡಬೇಕಷ್ಟೇ... ‘ಹೋಗಲಿ ಬಿಡಿ...’ ಎಂದು ಕುಳಿತರೆ ಅದು ಹೆಮ್ಮರವಾಗುತ್ತದೆ. ಜತೆಗೆ ನಾರಾಯಣ ಮೂರ್ತಿಯವರು ೧೦ -೧೫ ಸಾವಿರ ಕನ್ನಡ ಮಂದಿಗೆ ಉದ್ಯೋಗ ನೀಡಿದ್ದಾರೆಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಲಕ್ಷಾಂತರ ಕನ್ನಡಿಗರಿಗೆ ಕೆಲಸ ನೀಡಿದ್ದಾರೆ ಎಂದು ಬರೆಯುತ್ತಾರೆ. ಆದರೆ ನಿಜಕ್ಕೂ ವಸ್ತುಸ್ಥಿತಿ ಏನು ಎಂಬುದನ್ನು ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರೇ ಸ್ಪಷ್ಟ ಅಂಕಿ ಅಂಶಗಳ ಮೂಲಕ ಬಹಿರಂಗಪಡಿಸಲಿ ನೋಡೋಣ. ಅದು ಅವರಿಗೆ ಸಾಧ್ಯವಾ?
ನಾರಾಯಣ ಮೂರ್ತಿಯವರು ಜಾಗತಿಕ ಮಟ್ಟದಲ್ಲಿ ಇಷ್ಟು ಸಾಧನೆ ಮಾಡಿದ್ದರಲ್ಲಿ ಅನುಮಾನವಿಲ್ಲ. ಆದರೆ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಇಲ್ಲಿನ ಸರಕಾರ. ರೈತರ ಹಾಗೂ ಸರಕಾರದ ಭೂಮಿಯನ್ನು ಅನಾಮತ್ತಾಗಿ ಅವರಿಗೆ ನೀಡಿದ್ದಲ್ಲದೆ ಸರಕಾರಿ ತೆರಿಗೆಯಲ್ಲೂ ವಿನಾಯಿತಿ ನೀಡಿದ್ದರಿಂದ ನಾರಾಯಣ ಮೂರ್ತಿ ಅವರು ಅಷ್ಟು ಬೇಗ ಬೆಳೆಯಲು ಸಾಧ್ಯವಾಯಿತು. ಸರಕಾರ ಅವರೊಬ್ಬರಿಗೇ ನೀಡಿಲ್ಲ, ಅಂಥ ಬಹಳಷ್ಟು ಉದ್ಯಮಿಗಳಿಗೆ ಇದೇ ರೀತಿ ನೀಡಿದೆ! ಇರಲಿ.
ಆದರೆ ಕನ್ನಡ ಸಮ್ಮೇಳನ ಸಾಹಿತ್ಯ ಸಮ್ಮೇಳನವಲ್ಲ, ನಿಜ. ಆದರೆ ಕನ್ನಡ ಒಂದು ಭಾಷೆ. ಸಾಹಿತ್ಯವಿಲ್ಲದೆ ಭಾಷೆ ಇಲ್ಲ, ಭಾಷೆ ಇಲ್ಲದೆ ಸಾಹಿತ್ಯವಿಲ್ಲ. ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಚರ್ಚೆಯಾಗಬೇಕು, ರೂಪುರೇಷೆ ಸಿದ್ಧಪಡಿಸಬೇಕೆ ಹೊರತು, ಇಂಗ್ಲಿಷ್ ಪ್ರೇಮಿಗಳನ್ನು, ಕನ್ನಡ ಭಾಷಾ ವಿರೋಧಿಗಳನ್ನು ಕಟ್ಟಿಕೊಂಡು ಈ ‘ಜಾತ್ರೆ’ ಮಾಡುವ ಅಗತ್ಯವಿಲ್ಲ. ಹಾಗಂತ ಇಲ್ಲಿ ೧೯೮೫ರ ಹಾಗೆ ಯಾರೂ ‘ವಿಶ್ವಕನ್ನಡ ಸಮ್ಮೇಳನ ವಿರೋಧಿ ಒಕ್ಕೂಟ’ ಕಟ್ಟಿಕೊಂಡು ಯಾರೂ ಹೋರಾಟ ನಡೆಸುತ್ತಿಲ್ಲ. ನಾರಾಯಣ ಮೂರ್ತಿ ಕನ್ನಡ ಭಾಷೆಯ ಪರ ಕೆಲಸ ಮಾಡಿದವರಲ್ಲ. ಆದರೂ ಅವರೂ ಸಮ್ಮೇಳದಲ್ಲಿ ಭಾಗವಹಿಸಲಿ. ಆದರೆ ಉದ್ಘಾಟನೆಯನ್ನು ಅವರನ್ನು ಬಿಟ್ಟು ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಹೋರಾಟ ಮಾಡಿದವರು, ಸೇವೆ ಸಲ್ಲಿಸಿದವರು ರಾಜ್ಯದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರಲ್ಲಿ ಯಾರಾದರೊಬ್ಬರನ್ನು ಕರೆಸಿ ಉದ್ಘಾಟಿಸಿ ಎನ್ನುದು ಕನ್ನಡಪರ ಕಾಳಜಿಯುಳ್ಳವರ ಒತ್ತಾಯ.
ಕೆಲವು ‘ಸದಾ ಎದ್ದೆತ್ತಿನ ಬಾಲ ಹಿಡಿದು ಹೋಗುವ ಹೋರಾಟಗಾರ’ರು ಕೇವಲ ಹೆಸರು ಗಳಿಸುವುದಕ್ಕಾಗಿ, ಪ್ರಭಾವಿಯಾಗಿ ಬೆಳೆಯುವುದಕ್ಕಾಗಿ ಎಲ್ಲೆಂದಲ್ಲಿ ಕನ್ನಡದ ಬಾವುಟ ಪ್ರದರ್ಶಿಸಿ ಕೆಲಸವಾದ ಕೂಡಲೇ ಅದನ್ನು ಅಲ್ಲಿಯೇ ಬಿಸಾಡಿ ಬರುತ್ತಿದ್ದಾರೆ. ಇಂಥ ಹೋರಾಟಗಾರರಿಂದಲೂ ಈ ನಾಡಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕೇವಲ ಉದ್ಯೋಗ ಸೃಷ್ಠಿ ಮಾಡಿದ ಮಾತ್ರಕ್ಕೆ ನಾರಾಯಣ ಮೂರ್ತಿ ಶ್ರೇಷ್ಠ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಅಂಥ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಇಂದು ಕೋಲಾರದ ಗುಲಾಬಿಗೆ, ತುಮಕೂರಿನ ತೆಂಗಿಗೆ, ಮಲೆನಾಡು ಶಿವಮೊಗ್ಗ ಭಾಗದ ಅಡಿಕೆಗೆ ಜಾಗತಿಕ ಮಟ್ದಲ್ಲಿ ಉತ್ತಮ ಬೆಲೆಯಿದೆ. ಅದನ್ನು ಮಾಡಿದವರು ನಮ್ಮ ರೈತರು. ಅವರಿಗಿಂತ ಇವರು ಶೇಷ್ಠವೇ? ನಮ್ಮ ತಾಯಿಯನ್ನು ನಾವೇ ಪೋಷಿಸದೆ ಬೇರೊಬ್ಬರ ವೃದ್ಧಾಶ್ರಮದಲ್ಲಿ ಬಿಟ್ಟು ಕೇವಲ ನಮ್ಮ ಸ್ವಾರ್ಥ ನೋಡಿಕೊಳ್ಳುವುದು ಹೆತ್ತ ತಾಯಿಗೆ ಮಾಡಿದ ದ್ರೋಹ. ಇಂಥ ನಿಲುವುಗಳನ್ನು ಕೈ ಬಿಟ್ಟು ನಮ್ಮ ಭಾಷೆ, ನೆಲ, ಜಲದ ಬಗ್ಗೆ ಸಹಜವಾದ ಅಭಿಮಾನ ಬೆಳಸಿಕೊಂಡರೆ ತನ್ನಷ್ಟಕ್ಕೆ ತಾನೆ ಉದ್ಯೂಗ, ಭದ್ರತೆ ಎಲ್ಲವೂ ದೊರೆಯುತ್ತದೆ. ವಿಶ್ವದಲ್ಲಿ ಕೇವಲ ಏಳೆಂಟು ರಾಷ್ಟ್ರಗಳಲ್ಲಿ ಮಾತನಾಡುವ, ಅಂಥ ಯಾವುದೇ ಇತಿಹಾಸವಿಲ್ಲದ ಇಂಗ್ಲಿಷ್ ಭಾಷೆ ಇಂದು ಜಗತ್ತನ್ನೇ ವ್ಯಾಪಿಸಲು ಹೊರಟಿದೆ. ಅದಕ್ಕೆ ಮೂಲ ಕಾರಣ ಇಂಗ್ಲೆಂಡ್ ಹಾಗೂ ಅಮೆರಿಕ ಮತ್ತು ಅಲ್ಲಿನ ಜನರ ಛಲ, ವಿಶ್ವಾಸ. ಆದರೆ ಅಂಥ ವಿಶ್ವಾಸ, ಅಭಿಮಾನ, ಛಲ ಶತಮಾನಗಳ ಇತಿಹಾಸ ಹೊಂದಿರುವ ಕನ್ನಡವನ್ನು ಮಾತನಾಡುವ ನಮ್ಮಲ್ಯಾಕಿಲ್ಲ?
೧೯೮೫ರ ಡಿಸೆಂಬರ್‌ನಲ್ಲಿ ಡಾ.ಶಿವರಾಮ ಕಾರಂತರ ಅಧ್ಯಕ್ಷತೆಯ ನಡುವೆ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದ್ದ ಕವಿ ಕುವೆಂಪು ‘ಕರ್ನಾಟಕದಲ್ಲಿ ಮೊದಲನೇ ತರಗತಿಯಿಂದಲೇ ಕನ್ನಡ ಶಿಕ್ಷಣ ಮಾಧ್ಯಮವಾದಾಗ ಮಾತ್ರ ಕನ್ನಡ ನಾಡು ನುಡಿಯ ಏಳಿಗೆ’ ಎಂದಿದ್ದರು. ಆದರೆ ಕೇವಲ ೨೫ ವರ್ಷಗಳ ಅಂತರದಲ್ಲಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ, ಅವರು ಬರೆದ ನಾಡ ಗೀತೆಗೆ ಅಪಮಾನ ಮಾಡಿದ ವ್ಯಕ್ತಿಯನ್ನೇ ವಿಶ್ವಕನ್ನಡ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡುವುದು ಕನ್ನಡಿಗರ ದೌಭಾರ್ಗ್ಯವೇ ಸರಿ. ಒಟ್ಟಾರೆ ಬಿಜೆಪಿ ಸರಕಾರದ ಅವಧಿಯಲ್ಲಿ ಕನ್ನಡ ನಾಡು, ನುಡಿ ವಿಚಾರದಲ್ಲಿ ಭಾಷೆ, ನೆಲ ಜಲಕ್ಕಿಂತ ಅಧಿಕಾರಶಾಹಿತನ ಹಾಗೂ ಲಾಭದಾಯಕ ರಾಜಕೀಯ ನೀತಿಯೇ ಮೇಲುಗೈ ಸಾಧಿಸುತ್ತಿರುವುದು ಸ್ಪಷ್ಟ...
ಸರಕಾರ ಈಗಾಗಲೇ ಈ ಸಮ್ಮೇಳನಕ್ಕೆ ೩೦ ಕೋಟಿ ರೂ. ಬಿಡುಗಡೆ ಮಾಡಿದೆ. ದೇಶ ವಿದೇಶದಿಂದ ಬರುವ ಗಣ್ಯರಿಗೆ ರತ್ನಗಂಬಳಿ ಹಾಸಿ, ವಸತಿ, ರೈಲು, ವಿಮಾನ ವ್ಯವಸ್ಥೆ ಮಾಡಿಯಾಗಿದೆ. ಇನ್ನೂ ಕಾಲ ಮಿಂಚಿಲ್ಲ. ಸರಕಾರ ತನ್ನ ನಿಲುವುದು ಬದಲಿಸಿ ಸೂಕ್ತ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ವಿಶ್ವ ಕನ್ನಡ ಸಮ್ಮೇಳನವನ್ನು ಜರುಗಿಸಲಿ. ಆ ಮೂಲಕ ಕನ್ನಡದ ಕಂಪು ವಿಶ್ವದಾಧ್ಯಂತ ಪಸರಿಸುವಂತಾಗಲಿ.

Monday, March 7, 2011

ಅದ ಮರೆತೇವೆಂದರೆ ಬದುಕುವುದ್ಹೆಂಗ...!?

ಭಾರತದಲ್ಲಿ ಶೇ.೫೧ರಷ್ಟು ಮಕ್ಕಳು, ರಾಜ್ಯದಲ್ಲಿ ೯,೪೪೬ ಮಕ್ಕಳು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಶೇ.೪೬ ಮಕ್ಕಳಿಗೆ ಕೇವಲ ಆರು ತಿಂಗಳಿಗೇ ಕುಡಿಯಲು ಎದೆ ಹಾಲು ಸಿಗುತ್ತಿಲ್ಲ. ವಿಶ್ವದ ೩೩ ದೇಶಗಳಲ್ಲಿ ಹಸಿವು ರೌದ್ರ ನರ್ತನ ಮಾಡುತ್ತಿದ್ದು, ಭಾರತ ಕೂಡ ಅದರಲ್ಲೊಂದು. ಭಾರತದ ೧೭ರಾಜ್ಯಗಳಲ್ಲಿ ಸರಾಸರಿ ಶೇ.೯೫ ಮಂದಿ ಹೊಟ್ಟೆಗೆ ಅನ್ನ ಗಂಜಿಯೂ ಇಲ್ಲದೆ ನಿತ್ಯ ಬದುಕಿಗಾಗಿ ಪರಿತಪಿಸುತ್ತಿದ್ದಾರೆ...
ಇದರ ಅರ್ಥ ಎಲ್ಲೆಡೆ ಆಹಾರದ ಅಭದ್ರತೆ ಕಾಡುತ್ತಿದೆ ಎಂಬುದು. ಎಲ್ಲೋ ಒಂದು ಕಡೆ ನಾವು ಅಭಿವೃದ್ಧಿ, ನಾಗರಿಕತೆ, ಸಂಸ್ಕೃತಿಯ ಪಲ್ಲಟಗಳ ನೆಪದಲ್ಲಿ ಹೊಟ್ಟೆಗೆ ಹಿಟ್ಟು ನೀಡುವ ನೆಲವನ್ನು ಮರೆತಿದ್ದೇವೆ ಎನ್ನುವುದು ಇವುಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’. ಆದರೆ ನಾವು ಬಟ್ಟೆಯ ಜತೆಗೆ ಬೇರೆ ಬೇರೆ ಅಗತ್ಯಗಳ ಕಡೆ ಗಮನ ಹರಿಸುತ್ತಿದ್ದೇವೆಯೇ ಹೊರತು, ನಿತ್ಯ ಚೈತನ್ಯ ನೀಡುವ ಹೊಟ್ಟೆಯ ಬಗ್ಗೆ, ಹೊಟ್ಟೆಗೆ ಹಿಟ್ಟು ಒದಗಿಸುವ ಕೃಷಿಯ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿಲ್ಲ ಎನ್ನುವುದನ್ನು ನಾವೆಲ್ಲ ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲೇಬೇಕಿದೆ.
ಭಾರತ ಶೇ.೭೨ರಷ್ಟು ಕೃಷಿ ಭೂಮಿಯನ್ನು ಹೊಂದಿದೆ. ಆದರೆ ಇತ್ತೀಚೆಗೆ ಅದರ ಪ್ರಮಾಣ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ! ಜತೆಗೆ ಕೃಷಿ ಭೂಮಿ ಇದ್ದೂ ಆಹಾರ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗೆಯೇ ಅವುಗಳ ದರ ಕೂಡ ಗಗನಕ್ಕೇರುತ್ತಿದೆ. ಈ ವರ್ಷ ೨೧೦೮.೩೬ಮೆಟ್ರಿಕ್ ಟನ್ ಈರುಳ್ಳಿ ಬೆಳೆದಿದ್ದರೂ ಅದು ಸಾಕಾಗದೆ ಅಭಾವ ಸೃಷ್ಟಿಯಾಗಿ(ಮಳೆಯಿಂದಲೂ ಇಳುವರಿ ಕುಂಠಿವಾಗಿದೆ) ಇದರ ದರ ಪ್ರತಿ ಕೆಜಿ. ೭೦ರ ಗಡಿ ದಾಟಿದೆ.
ಈ ವರ್ಷ ಭಾರತದಲ್ಲಿ ೧,೬೩,೪೩೫.೧೮ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಇಷ್ಟಾದರೂ ೧೭ರಾಜ್ಯಗಳಲ್ಲಿ ಸಾಮಾನ್ಯ ಜನರಿಗೆ ತಿನ್ನಲೂ ಗಂಜಿಯೂ ಗತಿ ಇಲ್ಲ ಎಂದರೆ ಈ ದೇಶದ ಕೃಷಿ ಎತ್ತ ಸಾಗುತ್ತಿದೆ ಎನ್ನುವುದನ್ನು ಅರಿಯಲೇಬೇಕು. ಕರ್ನಾಟಕ, ಬಿಹಾರ, ಜಾರ್ಕಂಡ್, ಮಧ್ಯ ಪ್ರದೇಶ ತೀರಾ ಬಡತನದಲ್ಲಿ ಬದುಕುತ್ತಿವೆ. ಇದ್ದುದರಲ್ಲಿ ಪಂಜಾಬ್, ಕೇರಳ, ಓರಿಸ್ಸಾ ರಾಜ್ಯಗಳ ಪರಿಸ್ಥಿತಿ ಪರವಾಗಿಲ್ಲ ಎನ್ನುತ್ತವೆ ಪ್ರಸಕ್ತ ವರ್ಷದ ಸಮೀಕ್ಷೆಗಳು. ಹೀಗಿದ್ದೂ ಸರಕಾರಗಳು ಕೃಷಿ ಪ್ರಗತಿ ಹಾಗೂ ಅವುಗಳ ಉತ್ತೇಜನಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತವೇ ಸರಿ.
ದೇಶದ ಪ್ರಗತಿ ಎಂದರೆ ಕೇವಲ ಕೈಗಾರಿಕೆಗಳ ಅಭಿವೃದ್ಧಿ ಎನ್ನುವಂತಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎಲ್ಲ ಯೋಜನೆಗಳೂ ರೈತರ ಜಮೀನಿಗೇ ಹೋಗಿ ನಿಲ್ಲುತ್ತಿವೆ. ಇದರಿಂದ ನಿತ್ಯ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಆಹಾರ ಅಭದ್ರತೆ ದಿನೇದಿನೇ ಹೆಚ್ಚಾಗಿ ಕಾಡುತ್ತಿದೆ. ೧೯೬೦ರಲ್ಲಿ ಆಹಾರ ಸಮಸ್ಯೆ ಕೇವಲ ಭಾರತವನ್ನು ಮಾತ್ರವಲ್ಲ ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ಆಗ ಕೃಷಿ ಪ್ರಗತಿಯ ಬಗ್ಗೆ ಕೇವಲ ಶೇ.೨೦ ಮಂದಿ ಮಾತ್ರ ಚಿಂತನೆ ನಡೆಸಿದರು. ಆಹಾರ ಉತ್ಪಾದನೆಯ ಕಡೆ ಹೆಚ್ಚು ಗಮನಹರಿಸಿದ್ದರಿಂದ ತತಕ್ಷಣದಲ್ಲಿಯೇ ಆಹಾರ ಉತ್ಪಾದನೆ, ಅವುಗಳ ಮಾರಾಟ, ಸರಬರಾಜು ಹೀಗೆ ಎಲ್ಲೆಂದರಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯವಾಯಿತು. ಇದರಿಂದ ಎಲ್ಲೆಡೆ ತುಸು ಪ್ರಗತಿ ಕಂಡಿತಾದರೂ ನಂತರದ ದಿನಗಳಲ್ಲಿ ಅದು ಮತ್ತೆ ದಿಕ್ಕು ತಪ್ಪಿತು. ಅದರ ಪರಿಣಾಮ ಮತ್ತೆ ಆಹಾರ ಸಮಸ್ಯೆ ಸೃಷ್ಟಿಯಾಗುತ್ತಿದೆ.
ಕರ್ನಾಟಕ ಒಂದರಿಂದಲೇ ಈ ಬಾರಿ ೮,೦೮೫.೪೦ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಇಷ್ಟಾದರೂ ಆಹಾರ ಸಾಕಾಗುತ್ತಿಲ್ಲ. ಅದಕ್ಕೆ ಕಾರಣ ಒಂದೆಡೆ ಜನಸಂಖ್ಯಾ ಸ್ಫೋಟ ಮತ್ತೊಂದೆಡೆ ಕೃಷಿ ಬಗೆಗಿನ ನಿರ್ಲಕ್ಷ್ಯ. ಒಬ್ಬ ರೈತ ಒಂದು ದಿನ ಕೃಷಿ ಬಿಟ್ಟು ಹೊರ ನಡೆದರೆ ಅಂದು ಕನಿಷ್ಠ ಹತ್ತು ಮಂದಿ ಉಪವಾಸ ಮಲಗಬೇಕು! ಹೀಗಿರುವಾಗ ರೈತರ ಮಕ್ಕಳು ವಿದ್ಯಾವಂತರಾದ ತಕ್ಷಣ ರೈತಾಪಿಯನ್ನು ಬಿಟ್ಟು ಬೇರೆ ದುಡಿಮೆ ಹುಡುಕುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಕೃಷಿ ಬಗ್ಗೆ ಒಲವಿಲ್ಲ ಎಂದಲ್ಲ, ಬದಲಿಗೆ ಅದರಲ್ಲಿ ಯಾವುದೇ ಲಾಭವಿಲ್ಲ; ಬದುಕು ಅಸಾಧ್ಯ ಎನ್ನುವ ಸ್ಥಿತಿಯನ್ನು ಸರಕಾರಗಳು ಸೃಷ್ಟಿಸಿರುವುದು. ಒಂದು ಚಿಕ್ಕ ಚಾಕೋಲೇಟ್ ತಯಾರಿಸುವವನು ಕೂಡ ಅದರ ಬೆಲೆಯನ್ನು ಆತನೇ ನಿರ್ಧರಿಸುತ್ತಾನೆ. ಆದರೆ ರೈತನಿಗೆ ಆ ಹಕ್ಕು ಇಲ್ಲವೇ ಇಲ್ಲ. ಸರಕಾರವಾದರೂ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುತ್ತದೆ ಎಂದರೆ ಊಹೂಂ... ಅದೂ ಸಿಗುತ್ತಿಲ್ಲ, ಒಂದುವೇಳೆ ಅಲ್ಪಸ್ವಲ್ಪ ಬೆಲೆ ಸಿಗಬೇಕು ಎಂದರೂ ಆತ ಬೀದಿಗೆ ಬಂದು ತನ್ನ ಉತ್ಪನ್ನಗಳನ್ನು ಸುರಿದು ಪ್ರತಿಭಟಿಸಬೇಕು. ಹೀಗಿರುವಾಗ ಯಾವ ರೈತ ತಾನೆ ತನ್ನ ಮಗ ರೈತನಾಗಬೇಕೆಂದು ಬಯಸುತ್ತಾನೆ?
ಇದರ ನಡುವೆ ಒಂದಿಲ್ಲೊಂದು ಕಾರಣ ನೀಡಿ ರೈತರಿಗೆ ಹಣದಾಸೆ ತೋರಿಸಿ ಅವರ ಜಮೀನುಗಳನ್ನು ಒಣ ಭೂಮಿಯ ಹೆಸರಿನಲ್ಲಿ ಮುಟ್ಟುಗೋಲು ಹಾಕಿಕೊಂಡು ಪುಡಿಗಾಸು ನೀಡಿ ಕೃಷಿ ಬಿಡಿಸಿದರೆ ಈ ದೇಶದಲ್ಲಿ ಆಹಾರ ಅಭದ್ರತೆ ಕಾಡದೆ ಇನ್ನೇನಾದೀತು? ಅದಕ್ಕಾಗಿಯೇ ಮಹಾತ್ಮಾ ಗಾಂಧೀಜಿ ‘ಅದು ಯಾವುದೇ ಸಮಾಜವಾಗಲಿ ಅಲ್ಲಿ ಮನುಷ್ಯ ಮುಖ್ಯವಾಗಬೇಕು. ಯಂತ್ರಗಳಲ್ಲ!’ ಎಂದಿದ್ದರು.
ಆದರೆ ಆ ರೀತಿ ಚಿಂತನೆಗಳೇ ಇಲ್ಲ. ಬದಲಿಗೆ ‘ರೈತ ದೇಶದ ಬೆನ್ನೆಲುಬು’ ಎನ್ನುತ್ತಲೇ ಆತನನ್ನು ಜಾಗತಿಕರಣವೆಂಬ ಜೇಡರ ಬಲೆಯಲ್ಲಿ ಸಿಕ್ಕಿಸಿ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ. ಸಾವಲ್ಲದೆ ಆತನಿಗೆ ಬೇರೆ ದಾರಿ ಕಾಣದಂತ ಸ್ಥಿತಿಗೆ ಆತನನ್ನು ದೂಡಲಾಗುತ್ತಿದೆ. ಮೊದಲೇ ಕೃಷಿ ಮಳೆಯೊಂದಿಗಿನ ಜೂಜಾಟ. ಅದರಲ್ಲಿ ನಿತ್ಯ ರೈತ ಸೋಲುತ್ತಲೇ ಅದರಲ್ಲೇ ಬದುಕು ಕಂಡುಕೊಳ್ಳಲು ಶತಪ್ರಯತ್ನ ನಡೆಸುತ್ತಲೇ ಇರುತ್ತಾನೆ. ಆದರೆ ಅದ್ಯಾವುದನ್ನೂ ಯಾವುದೇ ಸರಕಾರಗಳು ಅರ್ಥ ಮಾಡಿಕೊಳ್ಳದೆ ಅವನ ಭೂಮಿ ಹಾಗೂ ಆತನ ಬದುಕು ಎರಡನ್ನೂ ನುಂಗಿ ನೀರು ಕುಡಿಯಲು ಯತ್ನಿಸುತ್ತವೆ.
ಭುವಿಯ ಬಗ್ಗೆ ಹೀಗೆಯೇ ನಿರ್ಲಕ್ಷ್ಯ ತೋರುತ್ತಾ ಬಂದರೆ ಈಗಿರುವ ವಾತಾವರಣವೇ ೨೦೫೦ ವೇಳೆಗೆ ಸಂಪೂರ್ಣವಾಗಿ ಬದಲಾಗಲಿದೆ ಎಂಬ ಮಾತುಗಳು ವಿeನ ವಲಯದಲ್ಲಿ ಕೇಳಿಬರುತ್ತಿವೆ. ಅದು ನಿಜವಾದರೆ ಆಹಾರ ಉತ್ಪಾದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ.೭.೬ರಿಂದ ಶೇ.೧೨.೧ರಷ್ಟು ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ.೬.೮ರಿಂದ ಶೇ.೧೨.೨ರಷ್ಟು ತಾನೇ ತಾನಾಗಿ ಕಡಿಮೆಯಾಗುತ್ತದೆ. ಇದರಿಂದ ಆಹಾರ ಉತ್ಪಾದನೆಯ ಪ್ರಮಾಣ ಸಂಪೂರ್ಣವಾಗಿ ಕುಸಿದು ಬೀಳುತ್ತದೆ. ಆಗ ಎಲ್ಲ ರಾಷ್ಟ್ರಗಳೂ ಆಹಾರಕ್ಕಾಗಿ ಪರಿತಪಿಸಬೇಕಾಗುತ್ತದೆ. ಮುಂದೊಂದು ದಿನ ಮನುಷ್ಯನೇ ಮುನುಷ್ಯನನ್ನು ಕೊಂದು ತಿನ್ನುವ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ...
ಆದ್ದರಿಂದ ಮೊದಲು ‘ಅಭಿವೃದ್ಧಿ’ಯ ಬಗೆಗಿನ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ. ಅಭಿವೃದ್ಧಿ ಎಂದರೆ ಕೃಷಿಯ ಪ್ರಗತಿ. ಕೃಷಿ ಕ್ಷೇತ್ರದಲ್ಲಿ ಮನುಷ್ಯನಿಗೆ ಕೈತುಂಬ ಕೆಲಸ ಹಾಗೂ ಹೊಟ್ಟೆ ತುಂಬಾ ಆಹಾರ ಪ್ರದಾರ್ಥ ಸಿಗುವಂತಾಗಲು ಯಾವ ರೀತಿಯ ಯೋಜನೆ ರೂಪಿಸಬೇಕೋ ಅದನ್ನು ಮಾಡಬೇಕಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಎನ್ನುವುದನ್ನು ಮರೆತು ಮನುಷ್ಯನಲ್ಲಿರುವ ಬಡತನ ನಿವಾರಣೆ ಮಾಡಿ, ಸಾಮಾಜಿಕ ಭದ್ರತೆ, ಉತ್ತಮ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ಸಿಗುವಂತೆ ಮಾಡುವಂತಾಗಬೇಕು.
ಈ ನಿಟ್ಟಿನಲ್ಲಿ ಯೋಚಿಸುತ್ತ ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಬೇಕಿದೆ. ಆಗ ಆರ್ಥಿಕ ಭದ್ರತೆ ಹಾಗೂ ಇನ್ನಿತರ ಸವಲತ್ತುಗಳು ತಾನೇ ತಾನಾಗಿ ದೊರೆಯುತ್ತವೆ. ಅದು ಬಿಟ್ಟು ಕೇವಲ ಯಂತ್ರಗಳ ಹಿಂದೆ ಬಿದ್ದು ಕೃಷಿಯನ್ನೇ ಮರೆತು ಧಿಕ್ಕರಿಸಿ ನಿಂತರೆ ನಾಳೆ ಹೊಟ್ಟೆಗೆ ತಿನ್ನುವುದಾದರೂ ಏನನ್ನ? ಬದುಕು ನಡೆಸುವುದಾರೂ ಹೆಂಗ?

Saturday, January 22, 2011

ಮಾನಗೆಟ್ಟ ಸಿ.ಎಂ. : ಮರ್ಯಾದೆ ಮರೆತ ಮತದಾರ.

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಬಹಳ ವರ್ಷಗಳಿಂದ ಹೊಸ ಬದಲಾವಣೆಯನ್ನು ಬಯಸುತ್ತಿದ್ದ ಕರ್ನಾಟಕಕ್ಕೆ ಇಂಥ ಹೀನ ಸ್ಥಿತಿ ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ರಾಜ್ಯದಲ್ಲಿ ಎಲ್ಲ ಬಗೆಯ ಸರಕಾರಗಳನ್ನು ನೋಡಿ ಆಗಿದೆ ಇನ್ನು ಬಿಜೆಪಿಯನ್ನು ಒಮ್ಮೆ ನೋಡಿ ಬಿಡೋಣ ಎಂದು ಕುತೂಹಲಬರಿತನಾಗಿ ಬೆಮ್ಬಲಿಸಿದ್ದ ಮತದಾರೆ ಈಗೆ ಬಾಯಿ ಬಿಗಿ ಹಿಡಿದು ಕೂರುವ ಸ್ಥಿತಿ ನಿಮಾನವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ... ಆದ್ರೆ ಆ ಎಲ್ಲ ಕಾರಣಗಳನ್ನು ನೋಡಿದರೆ ಅವೆಲ್ಲವೂ ಕುಖ್ಯಾತಿ...!!
ನಿಜ ಹೇಳಿ ಇಂಥ ಸರಕಾರ ಬೇಕಿತ್ತಾ...!? ಖಂಡಿತಾ ಇಲ್ಲ ಎನಿಸದಿರದು. ಸತತ 30 ವರ್ಷಗಳಿಂದ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿದಿಸುತ್ತಲೇ ವಿರೋಧ ಪಕ್ಷದ ನಾಯಕನಾಗಿ ಮೆರೆದ ಯಡಿಯೂರಪ್ಪ ಆರಂಭದಿಂದಲೂ ರೈತರ ಹೆಸರನ್ನೇ ಹೇಳಿಕೊಂಡು ಬೆಳೆದವರು. ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಪಾದಯಾತ್ರೆ ಮಾಡುವ ಮೂಲಗೆ ಶೈನ್ ಆದ ಯಡಿಯೂರಪ್ಪ ಎಂದು ಶಿಕಾರಿಪುರದ ಅಭಿರುದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ...
ಆದರೆ ಉಪ ಮುಖಮಂತ್ರಿಯಾದ ಮೇಲೆ ಕೇವಲ ಶಿಕಾರಿಪುರ ಮಾತ್ರವಲ್ಲ ಶಿವಮೊಗ್ಗ ಜಿಲ್ಲೆಯನ್ನೇ ಕೊಂಚ ಅಭಿರುದ್ಧಿಯ ದಿಕ್ಕಿನತ್ತ ಕೊಂಡೊಯ್ದಿದ್ದು ನಿಜ. ಆದರೆ ಅಲ್ಲೂ ಭ್ರಷ್ಟತನ ಮೆರೆದಿದ್ದು ಅಷ್ಟೇ ಸತ್ಯ. ಆದ್ರೆ ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆ ಇನ್ನೂ ಹಾಗೆ ಇದೆ.
ಈ ನಡುವೆ ರಾಜ್ಯಾದ್ಯಂತ ತಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಯಡಿಯೂರಪ್ಪ ಸಿಕ್ಕ ಸಿಕ್ಕಲ್ಲೆಲ್ಲ ತಿಂದು ತೆಗಿದ್ದಾರೆ. ಈ ಹಿಂದೂ ಕಾಂಗ್ರೆಸ್ ಹಾಗು ಜೆಡಿಎಸ್ ಸರಕಾರಗಳು ತಿಂದು ತೆಗಿವೆ ನಿಜ. ಆದ್ರೆ ಯಡಿಯೂರಪ್ಪನಷ್ಟುನುಂಗಿ ನೀರು ಕುಡಿದಿಲ್ಲ. ಆ ಎರಡು ಪಕ್ಷಗಳು ಸೇರಿ 60 ವರ್ಷ ತಿಂದಿದ್ದನ್ನ ಯಡಿಯೂರಪ್ಪ ಕೇವಲ ಎರಡೂವರೆ ವರ್ಷದಲ್ಲಿ ನುಂಗಿದ್ದಾರೆ. ಅದು ಸ್ಪಷ್ಟವಾಗಿ ಜನರ ಕಣ್ಣಿಗೆ ರಾಚುತ್ತಿದೆ.
ಇದಕ್ಕಾಗಿ ಶಿವಮೊಗ್ಗದವರೇ ಅದ ಸಿರಾಜಿನ್ ಬಾಷಾ ಹಾಗು ಬಾಲರಾಜ್ ಸೇರಿ ರಾಜ್ಯಪಾಲರಿಗೆ ಮುಖ್ಯ ಮಂತ್ರಿಗಳ ವಿರುದ್ಧ ಪ್ರಾಶಿಕ್ಯುಶನ್ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರಿಂದ ಆವರ ದಾಖಲೆಗಳನ್ನು ನೋಡಿ 20 ದಿನಗಳ ಕಾಲ ಪರಿಶೀಲಿಸಿ ರಾಜ್ಯಪಾಲ ಹನ್ಸರಾಜ್ ಭಾರದ್ವಾಜ್ ಕೇಸು ದಾಖಲಿಸಲು ಒಪ್ಪಿಗೆ ನೀಡಿದ್ದಾರೆ. ಅವರು ಮಾಡಿದ್ದರಲ್ಲಿ ಯಾವ ತಪ್ಪು ಇಲ್ಲ.. ಆಡಳಿತ ಪಕ್ಷದ ಆಟಾಟೋಪ ನೋಡಿಕೊಂಡು ಕೂರಲು ಅವರೇನು ಪ್ರತಿಪಕ್ಷದ ಮುಖಂಡರಲ್ಲ. ನಿಜ ಹೇಳಬೇಕೆಂದರೆ ಇಲ್ಲ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗು ಜೆಡಿಎಸ್ ಕೂಡ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿವೆ.
ಆದರೆ ಜನರ ಪರವಾಗಿ ರಾಜ್ಯಪಾಲರು ಸರಿಯಾದ ನಿರ್ಧಾರ ತೆಗೆದುಕೊಂಡು ಕೇಸು ದಾಖಲಿಸಲು ಅವಕಾಶ ನೀಡಿದ್ದರಿಂದ ರಾಜ್ಯ ಸರಕಾರ ತನ್ನ ಬಿಜೆಪಿ ಪಾಳಯಕ್ಕೆ ಹೇಳಿ ಅನಾವಶಕವಾಗಿ ಬಂದ್ ನಡೆಸಿ 65 ಕ್ಕೂ ಹೆಚ್ಚು ಬಸ್ಗಳಿಗೆ ಕಲ್ಲು ಹೊಡೆಸಿದೆ. ಕೇವಲ ಸಾರಿಗೆ ಬಸ್ ಸಂಚಾರ ನಿಲ್ಲಿಸಿದ್ದರಿಂದ ಸರಕಾರಕ್ಕೆ 4.5 ಲಕ್ಷ ರೂ. ನಷ್ಟವಾಗಿದೆ. ಇದಕ್ಕೆಲ್ಲ ಕಾರಣ ಯಡಿಯೂರಪ್ಪ.
ಬಂದ್ ನಿಂದ ರಾಜ್ಯದ ನಾನ ಜಿಲ್ಲೆಗಳಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುಂಡಾಗಿರಿ ಮೆರೆದರು ಯಡಿಯೂರಪ್ಪ ಮಾತ್ರ "ಜನ ಸ್ವಯಂಪ್ರೇರಿತರಾಗಿ ಬಂದ್ ನಡೆಸಿದ್ದಾರೆ " ಎಂದು ಹೇಳಿ ತಿಪ್ಪೆ ಸಾರಿಸಿದ್ದಾರೆ. ಇಂತ ಹೇಸಿಗೆ ರಾಜಕಾರಣಕ್ಕೆ ಇಳಿದಿರುವ ಯಡಿಯೂರಪ್ಪನಿಗೆ ಜನ ಕೂಡ ಪ್ರತಿಕ್ರಯಿಸದೆ ಸುಮ್ಮನೆ ಕುಳಿತು ನೋಡುತ್ತಿರುವುದು ಮಾತ್ರ ದುರಂತವೇ ಸರಿ.
ಜನ ಹೀಗೆ ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿಯನ್ನು ಮುಂದುವರಿಸಿದರೆ ಯಡಿಯೂರಪ್ಪ ಮುಂದೊಂದು ದಿನ ಈ ರಾಜ್ಯವನ್ನು ಅಡವಿಟ್ಟರು ಆಶ್ಚರ್ಯವಿಲ್ಲ... ಕರ್ನಾಟಕ ಕಂಡರಿಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ರಾಜ್ಯದಲ್ಲೇ ಮೊದಲ ಬಾರಿಗೆ ಸರಕಾರವೇ ಮುಂದೆ ನಿಂತು ಬಂದ್ ಆಚರಿಸಿದ ಕುಖ್ಯಾತಿಗೂ ಪಾತ್ರರಾಗಿದ್ದಾರೆ. ಪ್ರಜಾಪ್ರಭುತ್ವವನ್ನೇ ಅರಿಯದೆ ಹೀಗೆ ಪ್ರಜೆಗಳ ಸಮಸ್ಯೆ ಹಾಗು ಅವರ ಕಷ್ಟಗಳನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಲಜ್ಜೆಗೆಟ್ಟು ಅಧಿಕಾರ ದಾಹ ತೋರುತ್ತ ಜನರ ಕಣ್ಣಿಗೆ ಮನ್ನೆರೆಚಿ ಸ್ವ ಹಿತಾಸಕ್ತಿ ಮೆರೆಯುವ ಇಂಥ ಮಾನಗೇಡಿ ಮುಖ್ಯಮಂತ್ರಿಯನ್ನು ಮತದಾರ ರಾಜ್ಯದ ಮರ್ಯಾದೆಯನ್ನು ಮನದಲ್ಲಿಟ್ಟುಕೊಂಡು ಮನೆಗೆ ಕಳಿಸದೇಹೋದರೆ ಮುಂದೆ ಇನ್ನು ಮಾನ ಕಳೆದುಕೊಳ್ಳಬೇಕಾಗುತ್ತದೆ...ಜತೆಗೆ ಸಾಮಾನ್ಯರು ಕೂಡ ಯದಿಯುರಪ್ಪನನ್ನೇ ಅನುಸರಿಸುತ್ತ "ಮೂರು ಬಿಟ್ಟವರು ಊರಿಗೆ ದೊಡ್ಡವರು'' ಎನ್ನುವ ಗಾದೆಯನ್ನ ಪಾಲಿಸಿದರು ಅಚ್ಚರಿಪಡಬೇಕಾಗಿಲ್ಲ. ಇದು ಸತ್ಯ....

ಕತ್ತು ಹಿಸುಕುವ ಕುಲಾಂತರಿ ತಳಿಯ ಅಗತ್ಯವೇ ಇಲ್ಲ

ಸಿನೇರಿಯಾ ಬ್ಯಾಕ್ಟೀರಿಯ ವಿಷಯುಕ್ತವಾದದ್ದು. ಇದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲೂ ದುಷ್ಪರಿಣಾಮಗಳಾಗುತ್ತವೆ. ಬಿಟಿ ತಳಿಯ ಆಹಾರ ಉತ್ಪನ್ನಗಳು ಒಮ್ಮೆ ಮಾರುಕಟ್ಟೆ ಪ್ರವೇಶಿಸಿದರೆ ನಾಟಿ ಮತ್ತು ಬಿಟಿ ನಡುವಿನ ವ್ಯತ್ಯಾಸ ಕಂಡುಹಿಡಿಯುವುದೇ ತುಂಬಾ ಕಷ್ಟ. ಅದರಲ್ಲೂ ಇದನ್ನು ಸೇವಿಸಿದರೆ ಆಗುವ ದುಷ್ಪರಿಣಾಮವನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ ಎಂಬ ಜಾಗತಿಕ ತ್ಯದ ಅರಿವಿದ್ದರೂ ಐಸಿಎಆರ್ ವಿe ಕೇಂದ್ರಗಳಂತ ಕೆಲವು ಸಂಸ್ಥೆಗಳನ್ನು ಬಳಸಿಕೊಂಡು ಜಾಗತಿಕ ಕಂಪನಿಗಳು ದೇಶಾದ್ಯಂತ ಅಲ್ಲಲ್ಲಿ ಪ್ರಯೋಗದ ಹೆಸರಿನಲ್ಲಿ ಕುಲಾಂತರಿ ತಳಿಗಳನ್ನು ನುಸುಳಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ.

ಕುಲಾಂತರಿ ಎಲ್ಲ ಸಸ್ಯಗಳನ್ನು ವಿಷಯುಕ್ತವಾಗಿಸುತ್ತದೆ. ಆದ್ದರಿಂದ ಇದನ್ನು ಬಳಸಲು ಸಹಜವಾಗಿಯೇ ಭಯವಾಗುತ್ತದೆ. ಇದನ್ನು ಬಳಸುವುದರಿಂದ ನಮ್ಮಷ್ಟಕ್ಕೇ ನಾವೇ ಗುಂಡಿ ತೋಡಿಕೊಂಡ ರೀತಿ. ಅತೀ ಬುದ್ದಿವಂತರು ಎಂದು ಹೇಳಿಕೊಳ್ಳುವ ವಿeನಿಗಳು ಬಿಟಿಯನ್ನು ಬಳಸುವುದರಿಂದ ಹಾನಿಯಾಗುತ್ತದೆ ಎಂಬುದು ಗೊತ್ತಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಅದನ್ನು ಮುಚ್ಚಿಡುತ್ತಾರೆ ಎನ್ನುವುದು ಅನುವಂಶಿಕತೆ ಶಾಸ್ತ್ರಜ್ಞ(ಜೆನೆಟಿಕ್ಸ್) ಡಾ.ಡೇವಿಡ್ ಸುಜುಕಿ ಅವರ ವಾದ.
ಬಿಟಿ ತಳಿಯಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಜತೆಗೆ ಅನುವಂಶಿಕತೆ ಮೇಲೂ ಪರಿಣಾಮವಾಗುತ್ತದೆ. ಇದರ ಬಳಕೆಯಿಂದ ಮಕ್ಕಳಾಗುವ ಸಾಧ್ಯತೆ ಕೂಡ ಕಡಿಮೆ ಎನ್ನುತ್ತಾರೆ ಇಂಡಿಯನ್ ಬಯೋಡೈವರ್ಸಿಟಿ ಫೋರಂ ಅಧ್ಯಕ್ಷ ಡಾ.ಎಸ್.ಫೈಜಿ.
ಕುಲಾಂತರಿ ತಂತ್ರಜ್ಞಾನದಿಂದ ಪರಿಸರದ ಹಾಗೂ ಜೀವ ಸಂಕುಲದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂದು ಖಚಿತವಾಗಿ ಹೇಳಲಾಗದು. ಇದರಿಂದಾಗುವ ದುಷ್ಪರಿಣಾಮ ಅಷ್ಟು ಸುಲಭವಾಗಿ, ಬೇಗ ತಿಳಿಯದು. ಅದರಿಂದ ಜೀವ ಸಂಕುಲದ ಚಕ್ರದ ಮೇಲೆ ವ್ಯತಿರಿಕ್ತವಾದ ಪರಿಣಾಮವಾಗಿ ಇಡೀ ವ್ಯವಸ್ಥೆಯೇ ಬದಲಾಗಿಬಿಡುತ್ತದೆ. ಡಿಎನ್‌ಎ ಅನ್ನು ಬಳಸಿ ಅಭಿವೃದ್ಧಿಪಡಿಸುವ ಜೀವತಂತುವನ್ನು ಸಂಪೂರ್ಣವಾಗಿ ಅರ್ಥೈಸಲು ಇದೂವರೆಗೆ ಆಗಿಲ್ಲ. ಜತೆಗೆ ಅದರಿಂದಾಗುವ ದುಷ್ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ (೧೯೯೦) ಎನ್ನುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಮುಖ್ಯಸ್ಥರಾದ (ಜೆನಿಟಿಕ್ಸ್) ಪ್ರೊ.ರಿಚರ್ಡ್ಸ್ ಲಿವೋಂಟಿನ್ ಅವರ ಅಭಿಪ್ರಾಯ.
ಹೀಗೆ ಬಯೋಟೆಕ್ನಾಲಜಿ ಬಗ್ಗೆ ಚೆನ್ನಾಗಿ ತಿಳಿದವರೆ ಕುತಾಂತರಿ ತಂತ್ರeನದ ಬಗ್ಗೆ ಬಹಳಷ್ಟು ಸತ್ಯಗಳನ್ನು ಬಹಿರಂಗಪಡಿಸಿದ ಮೇಲೂ ಮಾನ್ಸಂಟೋ ಕಂಪೆನಿ ತಮ್ಮ ಏಜೆಂಟರನ್ನು ಬಿಟ್ಟು ಭಾರತದ ರೈತರ ಮೇಲೆ ಕುಲಾಂತರಿ ತಳಿಗಳನ್ನು ಹೇರುವ ಪ್ರಯತ್ನ ನಡೆಸುತ್ತಲೇ ಇದೆ.
ಸಿನೇರಿಯಾ ಬ್ಯಾಕ್ಟೀರಿಯಾ ವಿಷಯುಕ್ತವಾದದ್ದು. ಇದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲೂ ದುಷ್ಪರಿಣಾಮಗಳಾಗುತ್ತವೆ. ಬಿಟಿ ತಳಿಯ ಆಹಾರ ಉತ್ಪನ್ನಗಳು ಒಮ್ಮೆ ಮಾರುಕಟ್ಟೆ ಪ್ರವೇಶಿಸಿದರೆ ನಾಟಿ ಮತ್ತು ಬಿಟಿ ನಡುವಿನ ವ್ಯತ್ಯಾಸ ಕಂಡುಹಿಡಿಯುವುದೇ ತುಂಬಾ ಕಷ್ಟ. ಅದರಲ್ಲೂ ಇದನ್ನು ಸೇವಿಸಿದರೆ ಆಗುವ ದುಷ್ಪರಿಣಾಮವನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ ಎಂಬ ಜಾಗತಿಕ ಸತ್ಯದ ಅರಿವಿದ್ದರೂ ಐಸಿಎಆರ್ ವಿeನ ಕೇಂದ್ರಗಳಂತ ಕೆಲವು ಸಂಸ್ಥೆಗಳನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ದೇಶಾದ್ಯಂತ ಅಲ್ಲಲ್ಲಿ ಪ್ರಯೋಗದ ಹೆಸರಿನಲ್ಲಿ ಕುಲಾಂತರಿ ತಳಿಗಳನ್ನು ನುಸುಳಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ. ಹಣದಾಸೆಗೆ ಬಲಿಯಾಗಿ ಕೆಲವು ವಿವಿಗಳು ಕೂಡ ರೈತರ ನೆಲದಲ್ಲಿ ಈ ಪ್ರಯತ್ನ ನಡೆಸುತ್ತಿವೆ. ಇಂಥ ಪ್ರಯತ್ನದ ಹಿಂದಿರುವ ಏಕೈಕ ಇರಾದೆ ಭಾರತದ ದೇಸಿ ಕೃಷಿ ವ್ಯವಸ್ಥೆ ಹಾಗೂ ರೈತಕುಲದ ಸ್ವಾವಲಂಬನೆಯನ್ನು ಸರ್ವನಾಶ ಮಾಡಿ ಅದರ ಮೇಲೆ ತಮ್ಮ ಹಿಡಿತ ಸಾಸುವುದಾಗಿದೆ...
ಬಹುರಾಷ್ಟ್ರೀಯ ಕಂಪೆನಿಗಳು ಭಾರತದ ಕೃಷಿ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಇದೇ ಮೊದಲಲ್ಲ, ೧೯೫೦ರಿಂದಲೂ ಇಂಥ ಪ್ರವೃತ್ತಿಗಳು ನಡೆಯುತ್ತಲೇ ಇವೆ. ಭಾರತದ ಕೊಬ್ಬರಿ ಎಣ್ಣೆ ತನ್ನ ಉತ್ಕೃಷ್ಟತೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಜನತೆಯ ಗಮನ ಸೆಳೆದಿದ್ದ ಸಮಯದಲ್ಲಿ ಅಮೆರಿಕದ ಸೋಯಾಬೀನ್ ಅಸೋಸಿಯೇಷನ್ ತನ್ನ ಸೋಯಾಬೀನ್ ಹಾಗೂ ಜೋಳದ ಎಣ್ಣೆಗೆ ಜಾಗತಿಕ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲಿಕ್ಕಾಗಿ ಭಾರತದ ತೆಂಗಿನ ಎಣ್ಣೆ ಹೃದಯಕ್ಕೆ ಮಾರಕ ಎಂದು ಬಿಂಬಿಸಿ ಶೇ.೯೦ ಮಂದಿ ತೆಂಗಿನ ಎಣ್ಣೆಯನ್ನು ಬಳಸದಂತೆ ಮಾಡಿತ್ತು!
ಅಲ್ಲಿಂದ ಇಲ್ಲಿ ವರೆಗೆ ಕೊಬ್ಬರಿ ಉದ್ಯಮ ಚೇತರಿಸಿಕೊಳ್ಳಲಾಗಿಲ್ಲ. ನೀರಾ, ಪನೆ ಬೆಲ್ಲ, ಎಳೆನೀರು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತದ ಕೃಷಿಯನ್ನು ಜಾಗತಿಕ ಕಂಪೆನಿಗಳು ಹತ್ತಿಕ್ಕುತ್ತಲೇ ಬಂದವು. ಇದರಿಂದಾಗಿ ಇಡೀ ಕೃಷಿ ನೀತಿಯೇ ಬದಲಾಗಿ, ರೈತರು ಹೆಜ್ಜೆ ಹೆಜ್ಜೆಗೂ ಆತ್ಮಹತ್ಯೆ ದಾರಿ ತುಳಿಯುವಂತಾಯಿತು. ಹೀಗಾಗಿ ಆಹಾರ ಭದ್ರತೆ, ಬೀಜ ಶೇಖರಣೆ ಸಂಸ್ಕೃತಿ ಎಲ್ಲವೂ ನಾಶವಾಗಿ ಇಡೀ ದೇಶದ ಕೃಷಿ ವ್ಯವಸ್ಥೆಯೇ ಇಂದು ಜಾಗತಿಕ ಕಂಪೆನಿಗಳ ಕಪಿಮುಷ್ಟಿಗೆ ಸಿಲುಕಿದೆ. ಅದರ ನಡುವೆ ಈಗ ಈ ‘ಬಿಟಿ ತಂತ್ರಜ್ಞಾನದ ಹೊಸ ವರಸೆ’. ಭಾರತದ ಕೃಷಿ ಅಭಿವೃದ್ಧಿಗೆ ಕುಲಾಂತರಿ ತಳಿ ತಂತ್ರಜ್ಞಾನವೊಂದೇ ಮುಖ್ಯವಲ್ಲ. ಕಳೆದ ಫೆಬ್ರುವರಿಯಲ್ಲಿ ಬಿಟಿ ಬದನೆ ಬಗ್ಗೆ ದೇಶಾದ್ಯಂತ ದೊಡ್ಡ ಚರ್ಚೆ ನಡೆದಾಗ ರೈತರು ವಿರೋಸಿದ್ದು ಬದನೆಯನ್ನು ಮಾತ್ರವಲ್ಲ, ಇಡೀ ಕುಲಾಂತರಿ ತಂತ್ರeನವನ್ನು.
ಕುಲಾಂತರಿ ತಂತ್ರeನದಿಂದಾಗುವ ದುಷ್ಟಪರಿಣಾಮಗಳನ್ನು ಅರಿಯಲು ಕನಿಷ್ಠ ೨೦ ವರ್ಷ ಬೇಕು. ಅಂತಹದ್ದರಲ್ಲಿ ಕೇಂದ್ರದ ಯುಪಿಎ ಸರಕಾರ ಅದಕ್ಕೊಂದು ಬಯೋಟೆಕ್ನಾಲಜಿ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ(ಬಿಆರ್‌ಎಐ) ಸ್ಥಾಪಿಸುವ ಹೇಳಿಕೆ ನೀಡಿ ಕುಲಾಂತರಿ ಬಗ್ಗೆ ಎದ್ದ ಬಿಸಿಯನ್ನು ತಣ್ಣಗೆ ಮಾಡಿತು ಅಷ್ಟೇ. ಆದರೆ ಈ ಕಂಪೆನಿಗಳು ಅದಕ್ಕೂ ಕೂಡ ಕಾಯದೆ ಆತುರಾತುರವಾಗಿ ಬಿಟಿ ತಂತ್ರಜ್ಞಾನಕ್ಕೆ ಪರವಾನಗಿ ಬೇಕು ಎಂದು ಬೊಬ್ಬೆ ಹೊಡೆಯುತ್ತಿವೆ. ಇವುಗಳ ಹಿಂದಿನ ಉದ್ದೇಶವಾದರೂ ಏನು? ಅಂದರೆ ಇವುಗಳಿಗೆ ಅಷ್ಟೂ ವ್ಯವದಾನವಿಲ್ಲ, ಬೇಗ ಕೃಷಿ ವ್ಯವಸ್ಥೆಯನ್ನು ತಮ್ಮ ಕೈವಶ ಮಾಡಿಕೊಂಡು ಕುಳಿತುಕೊಳ್ಳುವ ದುರುದ್ದೇಶ ಇಲ್ಲಿ ಎದ್ದು ಕಾಣುತ್ತದೆ. ನಾಳೆ ಬಿಆರ್‌ಎಐ ಸ್ಥಾಪಿಸಿದ ನಂತರ ಸಂಪೂರ್ಣವಾಗಿ ಬಿಟಿಯನ್ನು ಇಡೀ ದೇಶವೇ ತಿರಸ್ಕರಿಸಿದರೆ ಕಂಪೆನಿಯ ತಂತ್ರಗಳೆಲ್ಲಾ ತಲೆಕೆಳಗಾಗುತ್ತವೆ ಎನ್ನುವ ಭಯ ಕೂಡ ಕಾಡುತ್ತಿದೆ.
ಈಗ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ದಿಲ್ಲಿ ಹಾಗೂ ಹೈದರಾಬಾದ್ ಮೂಲದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್ ಸೇರಿದಂತೆ ಏಳು ‘ಅತ್ಯನ್ನತ ಅಕಾಡೆಮಿಗಳು’ ‘ಇಂಟರ್ ಅಕಾಡೆಮಿ ರಿಪೋರ್ಟ್ ಆನ್ ಜಿ.ಎಂ. ಕ್ರಾಪ್ಸ್’ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ನಿಜ. ಆದರೆ ಕುಲಾಂತರಿ ತಂತ್ರeನದಲ್ಲಿ ಎಲ್ಲವೂ ಸರಿಯಾಗಿವೆ ಅದಕ್ಕಾಗಿ ‘ಕುಲಾಂತರಿ ತಳಿಗೆ ಜೈ ಹೋ’ ಎಂದಿಲ್ಲ! ಬದಲಿಗೆ ‘ಕುಲಾಂತರಿ ತಳಿಗಳು ಕೆಲವು ಅಪಾಯಗಳನ್ನು ತಂದೊಡ್ಡುತ್ತವೆ. ಆದರೆ ವಿಜ್ಞಾನ ಅವುಗಳ ಹಿಂದೆ ನಿಂತರೆ ಆ ಆತಂಕದಿಂದ ದೂರಾಗಬಹುದು’ ಎಂದು ಅಭಿಪ್ರಾಯಪಟ್ಟಿವೆ. ಹಾಗೇಯೇ ‘ಯಾವುದೇ ಪದಾರ್ಥ ಶೇ.೧೦೦ಕ್ಕೆ ನೂರರಷ್ಟು ಸುರಕ್ಷಿತವಲ್ಲ, ಹಾಗಾಗಿ ಬಿಟಿ ಬದನೆಯನ್ನು ಮಾತ್ರ ದೂರುವುದು ಸರಿಯಲ್ಲ’ ಎಂದು ಹೇಳಿವೆ.
ಅಂದರೆ ಈ ‘ಅತ್ಯುನ್ನತ ವಿಜ್ಞಾನ ಅಕಾಡೆಮಿಗಳು’ ಕೂಡ ರೈತರ ವಿಚಾರದಲ್ಲಿ ‘ಸುರಕ್ಷಿತವಲ್ಲ’ ಎನ್ನುವುದು ಇಲ್ಲಿ ಸ್ಪಷ್ಟ. ಈ ವರದಿ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗಿದೆ. ‘ಕುಲಾಂತರಿ ತಳಿಯಿಂದ ಸಾಮಾಜಿಕ ಮತ್ತು ಆರ್ಥಿಕ ಗಂಡಾಂತರಗಳು ಒದಗಲಿವೆಯೋ ಅಥವಾ ಲಾಭಕರವೋ ಎಂಬ ವಿಷಯವನ್ನು ನಿರ್ಧರಿಸಬೇಕಾದದ್ದು ಎನ್‌ಜಿಒಗಳ ಗುಂಪಲ್ಲ’.
ನಿಜ, ಆದರೆ ಅದನ್ನು ನಿರ್ಧರಿಸಬೇಕಾದದ್ದು ಜಾಗತಿಕ ಕಂಪೆನಿಗಳೂ ಅಲ್ಲ. ಅದು ‘ರೈತರ ಹಕ್ಕು’.
ರೈತನು ಬೆಳೆದ ಸರಕು ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ನಿರ್ಧಾರವಾಗುತ್ತಿವೆ. ಅದೇ ಈ ದೇಶದ ರೈತರನ್ನು ಬಡತನದಲ್ಲಿ ಬಳಲುವಂತೆ ಮಾಡಿದ್ದು ಎಂಬುದು ಅಕ್ಷರಶಃ ಸತ್ಯ. ರೈತ ಬೆಳೆದ ಪ್ರತಿ ಬೆಳೆಗೂ ಅವನೇ ದರ ನಿಗದಿಪಡಿಸುವ ಹಕ್ಕನ್ನು ಅವನಿಂದ ಕಸಿದುಕೊಳ್ಳದೆ ಹೋಗಿದ್ದರೆ ಇಂದು ಜಾಗತಿಕ ಕಂಪೆನಿಗಳು, ಅವುಗಳ ಪರ ಬೊಬ್ಬಿಡುವ ಸ್ವಯಂಘೋಷಿತ ವಿಜ್ಞಾನಿಗಳು ಇಂದು ರೈತರ ವಿರುದ್ಧ ಬಡಬಡಿಸುವ ಪ್ರಮೆಯವೇ ಬರುತ್ತಿರಲಿಲ್ಲ, ಅದಕ್ಕೆ ಅವಕಾಶವೂ ಇರುತ್ತಿರಲಿಲ್ಲ; ಜತೆಗೆ ರೈತರು ಆತ್ಮಹತ್ಯೆ ದಾರಿಯನ್ನೂ ತುಳಿಯುತ್ತಿರಲಿಲ್ಲ...
ಇಲ್ಲಿ ನಿಜವಾಗಿಯೂ ಆತಂಕ ಪಡುತ್ತಿರುವವರು ರೈತರು. ಅವರ‍್ಯಾರೂ ಕೆಲಸಬಿಟ್ಟು ಮನವಿ ಹಿಡಿದು ವಿeನಿಗಳು ಅಥವಾ ಸರಕಾರದ ಬಳಿ ಬರುವುದಿಲ್ಲ. ಕಾರಣ ಇಷ್ಟೇ ಅವರೆಲ್ಲ ಒಂದು ದಿನ ಉತ್ತುವುದು, ಬಿತ್ತುವುದು ಅಥವಾ ಬೆಳೆಗಳ ನಡುವೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಈ ದೇಶದ ಅದೆಷ್ಟೋ ಲಕ್ಷ ಜನ ಅನ್ನವಿಲ್ಲದೆ ಪರದಾಡಬೇಕಾಗುತ್ತದೆ!!
ಜಾಕತಿಕ ಕಂಪೆನಿಗಳು ಈ ರೀತಿ ಮತ್ತೆ ಮತ್ತೆ ‘ಕಿತಬಿ’ ತೆಗೆಯುತ್ತಿರುವುದರಿಂದ ರೈತರು ಬೀದಿಗಿಳಿಯುತ್ತಿದ್ದು, ಅದರಿಂದಾಗಿ ಭಾರತದಲ್ಲಿ ಆಹಾರ ಅಭದ್ರತೆ ನಿತ್ಯ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ೬ ವರ್ಷಗಳಿಂದೀಚೆಗೆ ಈ ಅಭದ್ರತೆ ಎಲ್ಲೆ ಮೀರಿದೆ. ಆದ್ದರಿಂದಲೇ ಜಾಗತಿಕ ಕಂಪೆನಿಗಳ ಇಂಥ ಹುನ್ನಾರಗಳನ್ನು ಅರಿತು ಈ ನೆಲದ ಜನ ಆಗಾಗ ರೈತರ ಬೆನ್ನಿಗೆ ನಿಲ್ಲುವ ಮೂಲಕ ಅನ್ನದ ಋಣ ತೀರಿಸುತ್ತಿದ್ದಾರೆ ಅಷ್ಟೇ...
ಆಗಾಗ ಅಭಿವೃದ್ಧಿ, ಆಧುನಿಕತೆ, ಜಾಗತಿಕರಣ, ಖಾಸಗಿಕರಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಜತೆಗೆ ‘ನಮ್ಮದೇ ಸರಕಾರಗಳು’ ಇನ್ನಿಲ್ಲದ ಹುನ್ನಾರ ನಡೆಸುತ್ತಿವೆ. ಭೂಮಿಯನ್ನು ಕಸಿದುಕೊಳ್ಳುವುದರ ಜತೆಗೆ ಇದ್ದ ತುಸು ಜಾಗದಲ್ಲಾದರೂ ಬೆಳೆ ಬೆಳೆಯೋಣವೆಂದು ರೈತರು ಅಣಿಯಾದಾಗ ಜಾಗತಿಕ ಕಂಪೆನಿಗಳು ಹೀಗೆ ಮತ್ತೆ ಮತ್ತೆ ಈ ದೇಶದ ಸ್ವಾವಲಂಬನೆಯನ್ನು ಅಡವಿಟ್ಟುಕೊಳ್ಳಲು ಕುಂತಂತ್ರ ನಡೆಸತ್ತಲೇ ಇವೆ. ಆದ್ದರಿಂದ ಈ ಮಣ್ಣಿನಲ್ಲಿ ಬೆಳೆದು ಇದೇ ಮಣ್ಣಿನಲ್ಲಿಯೇ ಬದುಕಬೇಕಿರುವ ನಾವು ಇಂಥ ಹುನ್ನಾರಗಳ ಬಗ್ಗೆ ಸದಾ ಜಾಗೃತರಾಗಿರಬೇಕು...
Powered By Blogger