Sunday, July 29, 2012

ಮಾನಗೆಟ್ಟ ಹಿಂದೂ ಜಾಗರಣ ವೇದಿಕೆ ಮತ್ತು ಲಜ್ಜೆಗೆಟ್ಟ ಸರಕಾರ

ಈ ಫೋಟೋ ನೋಡಿದರೆ ಸಾಕು "ಹಿಂದೂ ಜಾಗರಣ ವೇದಿಕೆ" ಕಾರ್ಯಕರ್ತರು ಎಂಥ ಹೀನಾಯ ಹಾಗು ಕೀಳು ಮನೋಸ್ಥಿತಿಯವರು ಎಂಬುದು ಅರ್ಥವಾಗುತ್ತದೆ. ಸಮಾಜದಲ್ಲಿ ಯಾವುದೇ ಕೆಟ್ಟ ವ್ಯವಸ್ಥೆ ಇದ್ದರೂ ಅದರ ವಿರುದ್ಧ ಪ್ರತಿಭಟಿಸಲು ಅದರದ್ದೇ ಆದ ವೇದಿಕೆ ಇರುತ್ತದೆ. ಅದು ಬಿಟ್ಟು ಹೀಗೆ ಏಕಾಏಕಿ ನುಗ್ಗಿ ದಾಳಿ ಮಾಡಿ ಅಮಾನುಷವಾಗಿ ಹಾಗು ಅಸಹ್ಯವಾಗಿ ನಡೆದುಕೊಳ್ಳುವುದು ತೀರಾ ನಾಚಿಕೆಗೇಡು. ಬಿಜೆಪಿ ಸರಕಾರ ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡುತ್ತೇವೆ ಎಂದು ಹೇಳುತ್ತಲೇ ಇದೆ. ಹಾಗೆಂದರೆ ಇದೆ ಮಾದರಿ ರಾಜ್ಯನ..? ವ್ಯವಸ್ಥೆ ಕೆಟ್ಟಿದೆ ನಿಜ, ಆದರೆ ಅದನ್ನು ಸರಿಪಡಿಸಲು ಹೀಗೆ ದಾಳಿ ಮಾಡುವುದಲ್ಲ... ಅಲ್ಲಿ ರೇವು ಪಾರ್ಟಿ ಮಾಡುತ್ತಿರಲಿಲ್ಲ ಹುಟ್ಟು ಹಬ್ಬದ ಸಂಬ್ರಮಾಚರಣೆ ಇತ್ತು ಎಂದು ಪಕ್ಕದ ನಿವಾಸಿಗಳು ಹೇಳುತ್ತಾರೆ. ಸರಕಾರವೇ ಉಡುಪಿ-ದಕ್ಷಿಣ ಕನ್ನಡದ ಸಮುದ್ರ ತೀರದಲ್ಲಿ ರೇವು ಪಾರ್ಟಿಗೆ ಪ್ರವಾಸೋದ್ಯನದ ಹೆಸರಿನಲ್ಲಿ ಅವಕಾಶ ನೀಡಿತ್ತಲ್ಲ ಆಗ ಎಲ್ಲಿ ಹೋಗಿದ್ದರು ಈ ಹಿಂದೂ ರಕ್ಷಕರು? ಮಂತ್ರಿಗಳೇ ಪವಿತ್ರವಾದ ವಿಧಾನ ಸೌಧದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದರಲ್ಲ ಆಗ ಎಲ್ಲಿ ಹೋಗಿದ್ದರು ಇವರೆಲ್ಲ? ಆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿ ತಿಪ್ಪೆ ಸಾರಿಸಿದರಲ್ಲ ಆಗ ಎಲ್ಲಿ ಎಲ್ಲಿ ಹೋಗಿದ್ದರು ಈ ಹಿಂದೂ ಸಂಸ್ಕೃತಿಯ ರಕ್ಷಕರು...? ಈ ಸಂಘಟನೆಯ ಕಾರ್ಯ ವೈಕರಿ ನೋಡಿದರೆ ಇದು ಕೇವಲ ನಾಟಕ ಹಾಗು ತಮ್ಮ ತೆವಲು ತೀರಿಸಿಕೊಳ್ಳಲು ಬಳಸುತ್ತಿರುವ ತಂತ್ರ ಎನ್ನುವುದು ಸ್ಪಷ್ಟವಾಗುತ್ತದೆ...
ಕಳೆದ ಬಾರಿ ಕೂಡ ಇದೆ ರೀತಿ ಅಮಾಯಕ ಯುವಕ ಯುವತಿಯರ ಮೇಲೆ ದಾಳಿ ನಡೆದಿತು. ಆಗ ಈಗಿನ ಜೆಡಿಎಸ್ ಮುಖಂಡ ಮಹೇಂದ್ರಕುಮಾರ್ ನೇತೃತ್ವ ವಹಿಸಿದ್ದರು. ಇಂದು ಅವರೇ ಇದರ ವಿರುದ್ಧ ಮಾತನಾಡಿದ್ದಾರೆ. ಅಂದರೆ ಅಲ್ಲಿಗೆ ಈ ವೇದಿಕೆ ರಾಜಕಾರಣಕ್ಕೆ ಇಲ್ಲವೇ ಅಲ್ಲಿನ ಕೆಲವು ಪುಂಡು ಪೋಕರಿಗಳಿಗೆ ಸಮಾಜದಲ್ಲಿ ದಿಡೀರ್ ಹೆಸರು ಪಡೆದುಕೊಳ್ಳಲು ಇದು ವೇದಿಕೆ ಆಗುತ್ತಿದೆ. ಇದಕ್ಕೆ ಅಮಾಯಕ ಯುವಕ ಯುವತಿಯರು ಮಾತ್ರ ಬಲಿಯಾಗುತ್ತಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಉಡುಪಿ-ಮಂಗಳೂರಿನ ಸಮುದ್ರ ತೀರದಲ್ಲಿ  ಸರಕಾರವೇ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ರೇವು ಪಾರ್ಟಿಗೆ ಅವಕಾಶ ನೀಡಿ ಮೋಜು ಮಸ್ತಿಗೆ ಅನುವು ಮಾಡಿಕೊಟ್ಟಿತ್ತು. ಆಗ ಈ ಕಾರ್ಯಕರ್ತರು ಮಾತ್ರ ಅಂಡು ಸುಟ್ಟ ಬೆಕ್ಕಿನ ಹಾಗೆ ಕೂತಿದ್ದರು. ಇದೆಲ್ಲ ನೋಡಿದರೆ ಸರಕಾರದ ಕೃಪಾಪೋಷಿತ ನಾಟಕ ನಡೆಸುತಿದೆ ಎನಿಸುತ್ತದೆ.
ಹಿಂದೂ ಧರ್ಮದ ಹೆಸರಿನಲ್ಲಿ ತಾವೇ ಧರ್ಮ ರಕ್ಷಕರು ಎನ್ನುವ ಈ ಹಿಂದೂಪರ ಸಂಘಟನೆಗಳು ಮುಸ್ಲಿಂ ಹಾಗು ಕ್ರಿಶ್ಚಿಯನ್ ಸಂಘಟನೆಗಳನ್ನು ನಿಂದಿಸುತ್ತವೆ. ಹಾಗಾದರೆ ಇವರು ಮಾಡುತ್ತಿರುವುದು ಏನು? ಮತ್ತೊಂದು ತಾಲಿಬಾನ್ ಸಂಸ್ಕೃತಿ ಹುಟ್ಟು ಹಾಕುವುದಾ? ಇದು ಮನುಷ್ಯ ಸಂಸ್ಕೃತಿಯ...? ನೀ ಅತ್ತಂತೆ ಮಾಡು ನಾ ಸತ್ತಂತೆ ಮಾಡುತ್ತೇನೆ ಎನ್ನುತ್ತಿದೆ ಸರಕಾರ. ಇತ್ತ ಹಿಂದೂ ಜಾಗರಣಾ ವೇದಿಕೆಗೆ ಮಾನ ಮರ್ಯಾದೆ ಇಲ್ಲ... ಅತ್ತ ಬಿಜೆಪಿ ಸರಕಾರ ಕೂಡ ಲಜ್ಜೆಗೆಟ್ಟು ಕೂತಿದೆ... ನಿಜಕ್ಕೂ ಇವರೇನು ಆಧುನಿಕ ದುಷ್ಯಾಸನರೋ ಇಲ್ಲ ಆಧುನಿಕ ರಾವನರೋ...?
Powered By Blogger