Saturday, March 20, 2010

ವೈದ್ಯ ಲೋಕಕ್ಕೆ ಬರುತ್ತಿದೆ ವಿ- ಸ್ಕ್ಯಾನ್ !

( ಬೆಂಗಳೂರಿನ ಸೆಂಟ್ ಆನ್ಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಎಂ. ಶಿಲ್ಪಾಬರೆದಿದ್ದಾಳೆ.)
ಇನ್ನು ಸ್ಟೆಥಸ್ಕೋಪ್‌ಗೆ ಜಾಗವಿಲ್ಲ...
ಇಷ್ಟು ದಿನ ವೈದ್ಯರ ಕೈ ಹಿಡಿದಿದ್ದ ಸ್ಟೆಥಸ್ಕೋಪ್ ೨೧ನೇ ಶತಮಾನಕ್ಕೆ ವಿ ಸ್ಕ್ಯಾನ್ ಆಗಿ ಬದಲಾಗುತ್ತಿದೆ. ವೈದ್ಯಕೀಯ ಲೋಕಕ್ಕೆ ದಿನೇ ದಿನೆ ಹೊಸ ಹೊಸ ಯಂತ್ರಗಳು ಕಾಲಿಡುತ್ತಲೇ ಇವೆ. ಆ ಮೂಲಕ ರೋಗಿಗಳ ರೋಗ ಪತ್ತೆ ಹಾಗೂ ಚಿಕಿತ್ಸೆ ನೀಡುವ ವಿಧಾನ ಕೂಡ ಸುಲಭ ಹಾಗೂ ಸರಳಗೊಳ್ಳುತ್ತಲೇ ಇದೆ. ಇಂಥದ್ದರ ನಡುವೆಯೇ ಈಗ ಮತ್ತೊಂದು ಸಾಧನ ಈ ವಿಸ್ಮಯ ಲೋಕಕ್ಕೆ ಕಾಲಿಡುತ್ತಿದೆ. ಅದರ ಹೆಸರೇ ವಿ-ಸ್ಕ್ಯಾನ್! ಇದು ತಕ್ಷಣವೇ ಕಾಯಿಲೆ ಅಥವಾ ತೊಂದರೆಯನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚಿ, ಅದಕ್ಕೆ ಯಾವ ರೀತಿಯ ಚಿಕಿತ್ಸೆ ಬೇಕು ಎಂಬುದನ್ನು ತಿಳಿಯಲು ವೈದ್ಯರಿಗೆ ಸಹಕಾರಿಯಾಗಲಿದೆ. ಇದನ್ನು ಕಂಡುಹಿಡಿದವರು ಸ್ಯಾನ್ ಫ್ರಾನ್ಸಿಸ್ಕೋನ ವೆಬ್ ೨.೦ ಸುಮೀತ್ ಸಂಸ್ಥೆಯ ಸಿಇಒ ಜಿಫ್ ಇಮ್ಲೆಟ್. ಇದು ನೋಡಲು μಪ್ ಒಪನ್ ಮೊಬೈಲ್‌ಗೆ ಐ-ಪಾಡ್ ಜೋಡಿಸಿದಂತೆ ಕಾಣುತ್ತದೆ. ವಿ ಸ್ಕ್ಯಾನ್ ಒಂದು ಪೌಂಡ್ ತೂಕವಿದ್ದು, ಪ್ರಪಂಚದಲ್ಲೆ ಅತಿ ಚಿಕ್ಕ ಅಲ್ಟ್ರಾ ಸೌಂಡ್ ಉಪಕರಣವೆಂದು ಹೆಸರು ಪಡೆದಿದೆ. ಈಗಾಗಲೇ ಇದರ ಬಳಕೆಯ ಬಗ್ಗೆ ಏಷ್ಯಾ, ಯೂರೋಪ್ ಹಾಗೂ ಅಮೆರಿಕದಲ್ಲಿ ಪ್ರಯೋಗ ನಡೆಯುತ್ತಿದೆ. ಇಷ್ಟು ದಿನ ವೈದ್ಯರು ರೋಗಿಗಳನ್ನು ಸ್ಟೆಥಸ್ಕೋಪ್ ಮೂಲಕ ಪರೀಕ್ಷೆ ಮಾಡಿ ಅವರ ಹೃದಯಬಡಿತ, ನಾಡಿ ಮಿಡಿತಗಳನ್ನು ಪತ್ತೆ ಹೆಚ್ಚುತ್ತಿದ್ದರು. ಆ ಮೂಲಕವೇ ರೋಗಿಯ ಪರೀಕ್ಷೆ ನಡೆಯುತ್ತಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಅವಕಾಶವೇ ಇಲ್ಲ! ಅದರ ಜಾಗವನ್ನು ವಿ ಸ್ಕ್ಯಾನ್ ಅಲಂಕರಿಸಲಿದೆ.
ವಿ ಸ್ಕ್ಯಾನ್ ವೈಶಿಷ್ಟ್ಯ :
ಕ್ಯಾಲಿರ್ಫೋನಿಯಾ ವಿಶ್ವ ವಿದ್ಯಾಲಯದ ಡಾ.ಆಂಥೊನಿ ಎನ್. ಡಿಮರಿಯಾ ಅವರ ಪ್ರಕಾರ ಹೊರ ರೋಗಿಗಳಿಗೂ ಮತ್ತು ಆಂಬ್ಯುಲೆನ್ಸ್‌ನಲ್ಲಿ ಕರೆತರುವ ರೋಗಿಗಳಿಗೂ ವಿ-ಸ್ಕ್ಯಾನ್ ಉಪಯುಕ್ತ. ಈ ಉಪಕರಣದ ಬ್ಯಾಟರಿಯನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಒಬ್ಬ ರೋಗಿಯ ಪರೀಕ್ಷೆಗೆ ಎರಡು ನಿಮಿಷದ ಹಾಗೆ ೩೦ರಿಂದ ೩೫ ರೋಗಿಯನ್ನು ಪರೀಕ್ಷೆ ಮಾಡಬಹುದು. ಈ ರೀತಿ ಪರೀಕ್ಷೆ ಮಾಡಿದ ಮಾಹಿತಿಯನ್ನು ಪೆನ್‌ಡ್ರೈವ್ ಮೂಲಕವೂ ಸಂಗ್ರಹಿಸಿ ಟ್ಟುಕೊಳ್ಳಬಹುದು. ಒಂದ ವೇಳೆ ಹಿಂದಿನ ಮಾಹಿತಿ
ಇಲ್ಲವಾಗಿದ್ದರೆ ಆನ್‌ಲೈನ್ ಮೂಲಕವೂ ಅದನ್ನು ಪಡೆದುಕೊಳ್ಳಬಹುದು.
ಜಾಗತೀಕರಣದಿಂದಾಗಿ ಇಡೀ ವಿಶ್ವವೇ ಒಂದು ಹಳ್ಳಿಯಂತಾಗುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಈ ‘ವಿ ಸ್ಕ್ಯಾನ್’ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ವೈದ್ಯರ ಕೈ ಹಿಡಿದಿದ್ದ ಸ್ಟೆಥಸ್ಕೋಪ್ ೨೧ನೇ ಶತಮಾನಕ್ಕೆ ವಿ ಸ್ಕ್ಯಾನ್ ಆಗಿ ಬದಲಾಗುತ್ತಿದೆ. ಜತೆಗೆ ನಾಲ್ಕು ಹೆಜ್ಜೆ ಮುಂದೆ ಹೋಗಿ ಸ್ಥಳದಲ್ಲೇ ವೈದ್ಯರು ರೋಗಿಗೆ ಯಾವ ಚಿಕಿತ್ಸೆ ಬೇಕು ಎಂಬುದನ್ನು ನಿಸ್ಸಂಕೋಚವಾಗಿ ಹೇಳಲು ಇದರಿಂದ ಸಹಕಾರಿವಾಗಲಿದೆ.
ಉಪಯೋಗಗಳು :
*ಪ್ರಥಮ ಚಿಕಿತ್ಸಾ ಕ್ರಮಕ್ಕೆ ತುಂಬಾ ಅನುಕೂಲ.
*ಅಲ್ಟ್ರಾ ಸೌಂಡ್ ಮಾಡುವಂಥ ಕೆಲಸವನ್ನು ವಿ-ಸ್ಕ್ಯಾನ್ ತುಂಬಾ ಬೇಗನೆ ಮಾಡುತ್ತದೆ.
*ವಿ-ಸ್ಕ್ಯಾನ್‌ನಿಂದ ಮನುಷ್ಯನ ದೇಹದ ಯಾವುದೇ ಭಾಗವನ್ನು ಪರೀಕ್ಷಿಸಬಹುದು.
*ಇದರಿಂದ ಹೃದಯ ಸಂಬಂ ಕಾಯಿಲೆ ಮತ್ತು ಭ್ರೂಣ ಚಿಕಿತ್ಸೆಗೂ ಸಹಕಾರಿ.
* ರೋಗಿಯ ರೋಗದ ಬಗೆಗಿನ ಮಾಹಿತಿಯನ್ನು ಅದರಲ್ಲಿಯೇ ಶೇಖರಿಸಿಡಲೂಬಹುದು.
*ರೋಗಿಯ ದೇಹದಲ್ಲಾಗುವ ಚಲನವಲನಗಳು ವೀಡಿಯೋ ಶಬ್ದದ ತೀವ್ರತೆ ಕೂಡ ಇದರಲ್ಲಿ ದಾಖಲಾಗುತ್ತದೆ.
*ಹಳ್ಳಿಗಳು ಅಥವಾ ಪ್ರಕೃತಿ ವಿಕೋಪದಂಥ ಪರಿಸ್ಥಿತಿಗಳಲ್ಲಿ ಇದು ಹೆಚ್ಚು ಉಪಯುಕ್ತ.

ಸುಮಂಗಲೆ (ನ್ಯಾನೋ ಕಥೆ )

( ನ್ಯಾನೋ ಕಥೆಗಳ ಜನಕ ಗೆಳೆಯ ಚ.ಹ.ನಟೇಶ್ ಬಾಬು ಹುಟ್ಟಿಸಿದ ಗೀಳು ಅಷ್ಟಿಷ್ಟಲ್ಲ. ಅವನಿಂದ ಸ್ಫೂರ್ತಿ ಪಡೆದ ನಾನು ಕೆಲವು ನ್ಯಾನೋ ಕಥೆಗಳನ್ನ ಬರೆದಿದ್ದೇನೆ ಓದಿ ಆನಂದಿಸಿ, ಹಿಡಿಸದಿದ್ದರೆ ಬೈದಾದರು ಸರಿ ಅಭಿಪ್ರಾಯ ತಿಳಿಸಿ ನಿಮ್ಮ ಎಲ್ಲ ಪ್ರತಿಕ್ರಿಯೆಗಳಿಗೆ ಹೃದಯ ಪೂರ್ವಕ ಸ್ವಾಗತ...)

ಸುಮಂಗಲೆ:

ಸುಮಂಗಲಾ ಆಗತಾನೆ ಪದವಿ ಮುಗಿಸಿದ್ದಳು. ಕಿತ್ತು ತಿನ್ನುವ ಬಡತನದ ನಡುವೆಯೂ ಓದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಹಳ್ಳಿಯಲ್ಲಿ ಏನಾದರೂ ಮಾಡಬೇಕೆಂದಿದ್ದವಳಿಗೆ ಅಪ್ಪ ಸುಮ್ಮನಿರಲಾರದೆ ಮದುವೆ ಮಾಡಿದ್ದ. ‘ನೀನು ಹುಡ್ಗಿ, ನೀನು ದುಡ್ದು ನಮ್ಮನ್ನ ಸಾಕೋದ್ ಬ್ಯಾಡ, ನಾನಿನ್ನೂ ಗಟ್ಟಿ ಇದ್ದೀನಿ’ ಎಂದಿದ್ದ. ಹಾಗೇ ಹೇಳಿ ವರ್ಷಕ್ಕೇ ಅವನು ಮಣ್ಣು ಸೇರಿದ್ದ. ಇತ್ತ ಅಪ್ಪನ ಒತ್ತಾಯಕ್ಕೆ ಕಟ್ಟುಬಿದ್ದು ಪೇಟೆಯ ಹುಡುಗನನ್ನು ಮದುವೆಯಾದ ಸುಮಂಗಲಾ ಗಂಡನ ದಾಸಿಯಾಗಿದ್ದಳು. ಅವನೊ ಹೈಟೆಕ್ ಪಿಂಪ್, ಮದುವೆ ನೆಪದಲ್ಲಿ ಆಕೆಯನ್ನು ತಂದು ಮಾಂಸದಡ್ಡೆಗೆ ಬಿಟ್ಟಿದ್ದ. ಎಷ್ಟೇ ಗೋಳಾಡಿದರೂ ಆ ಜಾಲದಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ. ಆತ್ಮಹತ್ಯೆಯ ದಾರಿಯೂ ಅವಳನ್ನು ಕಂಡು ದೂರ ಓಡಿತ್ತು. ಇನ್ನೇನು ಮನೆಯಲ್ಲಿದ್ದ ವಿಧವೆ ಅಮ್ಮ, ಮುಗ್ದ ತಮ್ಮನಿಗಾಗಿ ಗಂಡನಿದ್ದೂ ‘ನಿತ್ಯ ಸಮಂಗಲಿ’ಯಾಗಿದ್ದಳು. ಊರಿಗೆ ಬಂದಾಗ ಎಲ್ಲರೂ ಆಕೆಯನ್ನು ಆರತಿ ಎತ್ತಿ ‘ಹೀಗೇ ಸುಮಂಗಲಿಯಾಗಿರು...’ ಎಂದು ಹರಸಿದ್ದರು !

ಪ್ರೀತಿಯ ಬೆಂಕಿ:
ಹರೆಯಕ್ಕೆ ಕಾಲಿಟ್ಟ ಮಧು ಹಾಗೂ ಮನು ಇಬ್ಬರೂ ಪ್ರೀತಿಯಲ್ಲಿ ಜಾರಿ ಬಿದ್ದಿದ್ದರು. ಹಾಗೇ ಬಿದ್ದಿದ್ದರಿಂದಲೇ ಅವಳಿಗೀಗ ಮೂರು ತಿಂಗಳು ತುಂಬಿತ್ತು. ಇದನ್ನು ಮನೆಯವರಲ್ಲಿ ಹೇಳಲೂ ಮಧುಗೆ ಧೈರ್ಯವಿರಲಿಲ್ಲ; ಅವನಿಗೂ. ಅದೇ ವಿಚಾರದಲ್ಲಿ ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದರು. ಮಧು ‘ಎಲ್ಲ ಮಾಡಿದವನು ನೀನೆ, ಈಗ ಹಿಂಗೆ ಮಾತನಾಡಿದ್ರೆ ಹೆಂಗೆ?’ ಎಂದಳು. ಅದಕ್ಕವನು ‘ಆಗಿದ್ದೆಲ್ಲಾ ನಿನ್ನಿಂದ್ಲೇ ನೀನು ನನ್ನ ಜೀವನದಲ್ಲಿ ಬರದಿದ್ದರೆ ನಾನು ನೆಮ್ಮದಿಯಾಗಿರುತ್ತಿದ್ದೆ’ ಎಂದ. ಮಾರನೇ ದಿನ ಆಕೆ ಎಲ್ಲವನ್ನೂ ಬರೆದಿಟ್ಟು ಲೋಕವನ್ನು ಬಿಟ್ಟು ಹೋದಳು. ಮರುಕ್ಷಣವೇ ಅವರಿಬ್ಬರ ಮನೆಗೂ ಬೆಂಕಿ ಬಿದ್ದಿತ್ತು. ಮನೆ ಮನಗಳೆರಡೂ ಧಗಧಗಿಸಿ ಉರಿಯುತ್ತಿದ್ದವು.


ಮಕ್ಕಳಾಗದಿರಲಿ ಮನೆ ತುಂಬಾ:
ಆತ ಕುಟುಂಬ ಕಲ್ಯಾಣ ಇಲಾಖೆಯ ಅಕಾರಿ. ಹೆಸರು ಶರಣಪ್ಪ. ‘ಮನೆಗೊಂದು ಮಗು ಸಾಕು’ ಎಂದು ಹೋದ ಹೋದಲ್ಲೆಲ್ಲ ಬಾಷಣ ಬಿಗಿಯುತ್ತಿದ್ದ. ಮದುವೆಯಾಗಿತ್ತು. ವರ್ಷವಾದ ಬಳಿಕ ಇಬ್ಬರು ಅವಳಿಜವಳಿ ಮಕ್ಕಳಾಗಿದ್ದರು. ಅದಾಗಿ ವರ್ಷಕ್ಕೇ ಮತ್ತೊಬ್ಬಳು ಸುಂದರಿಗೆ ಅವ ಶರಣಾಗಿದ್ದ. ಹೋದಲ್ಲೆಲ್ಲ ಎಲ್ಲರನ್ನೂ ಮಾತಿನಲ್ಲಿ ಸೋಲಿಸಿ ಕುಟುಂಬ ಕಲ್ಯಾಣದ ಪಾಠ ಹೇಳುತ್ತಿವ ಹುಡುಗಿಯ ವಿಷಯದಲ್ಲಿ ಸೋತ. ಅದರಿಂದಾಗಿ ಮದುವೆಯಾಗದೇ ಅವಳಿಗೂ ಒಂದು ಮಗುವಾಗಿತ್ತು...!


ಜವ್ಬಾದಾರಿ:
ಮನೆ ಹೊರಗಡೆ ಚಿನ್ನು ಮತ್ತು ಚಿಂಟು ಇಬ್ಬರೂ ಆಟವಾಡುತ್ತಿದ್ದರು. ಒಳಗಡೆ ಅಮ್ಮ ಗೊಣಗುತ್ತಿದ್ದಳು. ‘ಈ ಮಕ್ಳಿಗೆ ಒಂದಿಷ್ಟೂ ಬುದ್ದಿ ಇಲ್ಲ, ಯಾವಾಗ್ ನೋಡೀದ್ರೂ ಆಟ ಆಟ... ಮುಂದಿನ್ ಜೀವ್ನದ್ ಬಗ್ಗೆ ಸ್ವಲ್ಪಾದ್ರೂ ಖಬರ್ ಐತೆನೋ ನೋಡು’ ಎನ್ನುತ್ತಿದ್ದರೆ ಅಪ್ಪ ಹೇಳಿದ ‘ಖಬರ್ ಇದ್ದಿದ್ರ ಅವರ‍್ಯಾಕ್ ಹಂಗ್ ಆಡ್ತಿದ್ರು ? ಖಬರ್ ಇರಾಕ್ ಅವ್ರೇನ್ ನೀನಾ? ಇಲ್ಲಾ ನಾನ?’ ಮಕ್ಕಳಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ಎರಡು ಮನೆ ಕಟ್ಟಿ ‘ಇದು ನಿಂಗೆ ಅದು ನಂಗೆ’ ಎನ್ನುತ್ತಿದ್ದರು.

Powered By Blogger