Monday, January 19, 2009

ಕನ್ನಡಿಗರೇ ಓಡೋಡಿ ಬನ್ನಿ

ಕಸ್ತೂರಿ ಕನ್ನಡಕೆ
ಕೊಡಲಿ ಪೆಟ್ಟು ಬಿದ್ದೈತೆ
ಹೃದಯದಾ ಮಾತು
ಮರೆಯಾಗಿ ಹೊಂಟೈತೆ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನೂರಾರು ವರ್ಷ ಆಳಿದಾ ಪರಕೀಯರು
ಮಾಡಲಿಲ್ಲ ಕನ್ನಡಕೆ ದ್ರೋಹ.
ಸ್ವಾತಂತ್ರ್ಯ ಬಂದ ಮರು ಕ್ಷಣವೆ
ಆಯ್ತು ಕನ್ನಡ ಛಿದ್ರ ಛಿದ್ರ
ವಿಚಿತ್ರ ಜನರಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನಗರದಲ್ಲಿ ನಿಂತು ನಗಾರಿ ಬಾರಿಸಿದ್ರೂ
ಕೇಳುವವರಿಲ್ಲ ಕನ್ನಡಾಂಬೆಯ ಗೋಳು
ರೈತರೇ ಬನ್ನಿ, ಕೂಲಿ ಕಾರ್ಮಿಕರೇ ಬನ್ನಿ ,
ಕೈಲಿರುವ ಸಲಕರಣೆಗಳ ಹೊತ್ತು ತನ್ನಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ತಿಳಿದವರೇ ತುಳಿದರು ಕನ್ನಡವನ್ನ
ಮೆರೆಸಿದರು ಒಟ್ಟುಗೂಡಿ ಇಂಗ್ಲಿಷನ್ನ
ಉಳಿಸಿ ಬೆಳೆಸೋಣ ಕನ್ನಡಾನ
ಹೊಡೆದೋಡಿಸೋಣ ಇಂಗ್ಲಿಷ್‌ನ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನುದಿನವೂ ನರಳುತಿದೆ
ಅನುಕ್ಷಣವೂ ಕೊರಗುತಿದೆ
ತಾಯಿ ಎದೆಹಾಲು
ಕುಡಿದು ಕಲಿತ ಕನ್ನಡ
ರಕ್ಷಣೆಗೆ ಬನ್ನಿ ಕನ್ನಡಿಗರೆ
ಓಡೋಡಿ ಬನ್ನಿ... ||

ಅರವತ್ತು ವರುಷ ಕಳೆದರೂ
ಕನ್ನಡಾಭಿಮಾನ ಬರಲಿಲ್ಲ
ಅನ್ಯ ಭಾಷೆಗೆ ಪಲ್ಲಂಗ ಹಾಸುವುದ ಬಿಡಲಿಲ್ಲ
ಅದಕೇ ಬಿತ್ತು ಕನ್ನಡ ಅಂಗಳದಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಹಿಂದೂ, ಮುಸ್ಲಿಂ ಎಂದು
ಹಿಂದು ಮುಂದು ನೋಡದಿರಿ
ಜಾತಿ ಭೇದಗಳ ಮರೆಯಲ್ಲಿ
ಕನ್ನಡಾಂಬೆಯ ಮರೆಯದಿರಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ ... ||

ತಾಯಿ ಎದೆ ಹಾಲುಂಡು
ಮೊಲೆ ಕೊಯ್ಯುವರಿಹರಿಲ್ಲಿ
ಅನ್ಯಳಾ ಉಬ್ಬಿದೆದೆಯನು ಕಂಡು
ಜೊಲ್ಲು ಸುರಿಸುವರಿಹರಿಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಭುವನೇಶ್ವರಿಯ ನಯನದಲಿ
ಸುರಿಯುತಿದೆ ರಕ್ತಕಣ್ಣೀರು
ತನ್ನ ಮಕ್ಕಳೇ ಇರಿದ
ಚೂರಿ ಉರಿಯಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನ್ಯ ಭಾಷೆಗಳ ವ್ಯಾಮೋಹ
ಹುಚ್ಚು ಹಿಡಿಸಿದೆ . ಆಹಾ...!
ಮುತ್ತುಕೊಡುವಳು ಬಂದಾಗ
ತುತ್ತು ಕೊಟ್ಟೋಳ ಮರೆಯೋದೆ ?
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||
Powered By Blogger