Sunday, November 9, 2008

ಹಸಿವಿನ ರುದ್ರ ನರ್ತನ..

ನೀವು ಕುಡಿಯುವ ನೀರಿಗೆ, ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟಿಸುವ ಜನರನ್ನು ಕಂಡಿದ್ದೀರಿ. ಆದರೆ ತುತ್ತಿನ ಚೀಲ ತುಂಬಿಸಿಕೊಳ್ಳಲೂ ಆಗದೆ ಪರದಾಡುತ್ತ, ವರ್ಷಗಟ್ಟಲೆ ಹಸಿವಿನಿಂದ ಬಳಲುತ್ತ, ಹೊಟ್ಟ್ಟೆ ಮೇಲೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಲೂ ಆಗದೆ , ಬಳಲಿ ಬೆಂಡಾಗಿ ಬಸವಳಿದವರ ಗೋಳಿನ ದೃಶ್ಯಗಳನ್ನು ನೋಡಿದ್ದೀರಾ...?
ಜಾಗತೀಕರಣ ಎಂಬ ರಾಕ್ಷಸ ಭೂಮಿಯ ಮೇಲೆ ತನ್ನ ಪಾದ ಊರಿದಾಗಿನಿಂದ ಇಂಥ ದೃಶ್ಯಗಳು ಸಾಮಾನ್ಯವಾಗಿವೆ ! ಇದು ಕೇವಲ ಒಂದು ರಾಜ್ಯ, ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವವನ್ನೇ ಆವರಿಸಿದೆ. ಆದರೆ ಅಭಿವೃದ್ಧಿ, ಪಾಶ್ಚಾತ್ಯೀಕರಣ, ಫ್ಯಾಷನ್‌ಗಳೆಂಬ ಅಂಧಕಾರದಲ್ಲಿ ಅದು ಬೂದಿ ಮುಚ್ಚಿದ ಕೆಂಡವಾಗಿ ಕೂತಿದೆ. ವಿಶ್ವದ ಹತ್ತು ಮಂದಿಯಲ್ಲಿ ಒಬ್ಬರು ವರ್ಷಾನುಗಟ್ಟಲೆ ಅನ್ನ ನೀರು ಇಲ್ಲದೆ ತೊಳಲಾಡುತ್ತಿದ್ದಾರೆ !!
ಒಂದೆಡೆ ಬಂಡವಾಳಶಾಹಿಗಳು ಆಹಾರ ಉತ್ಪನ್ನಗಳನ್ನು ಶೇಖರಿಸಿ, ಗೋದಾಮಿನಲ್ಲಿ ಕೊಳೆಯುವಂತೆ ಮಾಡಿ ಕೃತಕ ಅಬಾವ ಸೃಷ್ಟಿಸುತ್ತಿದ್ದಾರೆ. ಮತ್ತೊಂದೆಡೆ ಕುಡಿಯಲು ಗಂಜಿಯೂ ಇಲ್ಲದೆ ಅನೇಕರು ಹಸಿವೆಂಬ ಹೆಬ್ಬಾವಿಗೆ ನಿತ್ಯವೂ ಆಹುತಿಯಾಗುತ್ತಿದ್ದಾರೆ. ಇದರ ನಡುವೆ ಹಣದುಬ್ಬರದ ಕಾರ್ಕೂಟಕ ಸರ್ಪದ ಕಾಟ...
ಏಷಿಯಾದಲ್ಲಿಯೇ ಹಸಿವಿನಿಂದ ಬಳಲುವ ಹೆಚ್ಚು ಜನರಿರುವ ರಾಷ್ಟ್ರಗಳಲ್ಲಿ ಕಾಂಬೋಡಿಯಾ ಹಾಗೂ ಫಿಲಿಪೈನ್ಸ್‌ಗಳು ಪ್ರಮುಖ ಸ್ಥಾನದಲ್ಲಿವೆ. ಕಾಂಬೋಡಿಯಾದಲ್ಲಿ ಶೇ.೩೪, ಫಿಲಿಪೈನ್ಸ್‌ನಲ್ಲಿ ಶೇ.೩೩ರಷ್ಟು ಮಂದಿ ತುತ್ತು ಕೂಳಿಗೂ ಪರಿತಪಿಸುತ್ತಾ ಕಣ್ಣು ಮುಚ್ಚುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.೪೦ಕ್ಕೂ ಹೆಚ್ಚು ಜನ ಹೊಟ್ಟೆಗೆ ಹಿಟ್ಟಿಲ್ಲದೆ ಅಶುದ್ಧ ನೀರು ಕುಡಿದು ಬದುಕುತ್ತಿದ್ದಾರೆ !
ಹಸಿವು ಈ ರಾಷ್ಟ್ರಗಳಲ್ಲಿ ರುದ್ರತಾಂಡವ ಮಾಡುತ್ತಿದೆ ಎಂದ ಮಾತ್ರಕ್ಕೆ ಇಲ್ಲಿ ಅಭಿವೃದ್ಧಿಯಿಲ್ಲ, ಆಹಾರ ಉತ್ಪಾದನೆಯೇ ಇಲ್ಲ ಎನ್ನುವಂತಿಲ್ಲ. ಈ ರಾಷ್ಟ್ರಗಳು ಶೇ.೬೫ಕ್ಕಿಂತಲೂ ಹೆಚ್ಚು ಅಭಿವೃದ್ಧಿ ಸಾಸಿವೆ . ಈ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನುಕೂಲತೆಗಳು ಹೆಚ್ಚಾದಂತೆ ಅನಾನುಕೂಲಗಳೂ ನೃತ್ಯ ಮಾಡುತ್ತಿವೆ . ಹೀಗಾಗಿಯೇ ಹಸಿವಿನ ರುದ್ರ ನರ್ತನ .
ಎಂಜಲು ತಿನ್ನುವ ಸ್ಥಿತಿ !
ಒಂದೆಡೆ ಉಳ್ಳವರು, ಇನ್ನೊಂದೆಡೆ ದೀನರು. ತುತ್ತು ಇಲ್ಲದೆ ಈ ದೇಶಗಳಲ್ಲಿ ಕೂಲಿಗೂ ಕುತ್ತು. ಹೀಗಾಗಿ ಅನೇಕರು ಬೀದಿ ಬದಿಯಲ್ಲಿ ಶ್ರೀಮಂತರು ತಿಂದು, ಸಾಕಾಗಿ ಬಿಸಾಡಿದ ಎಂಜಲನ್ನು ತಿಂದು ಬದುಕುತ್ತಿದ್ದಾರೆ ! ಈ ಚಿತ್ರಣ ಫಿಲಿಪೈನ್ಸ್‌ನಲ್ಲಿ ಸಾಮಾನ್ಯ !!
ಆದರೆ ಭಾರತದ ನಗರ ಪ್ರದೇಶಗಳಲ್ಲಿಯೂ ಇಂಥ ಹೀನ ಸ್ಥಿತಿ ನಿರ್ಮಾಣವಾಗುತ್ತಿದೆ. ಫಿಲಿಪೈನ್ಸ್‌ನಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು .
ಫಿಲಿಪೈನ್ಸ್ ಹಾಗೂ ಕಾಂಬೋಡಿಯಾದಲ್ಲಿ ಹಸಿವಿನ ರುದ್ರತಾಂಡವ ಸಾಮಾನ್ಯವಾಗಿಬಿಟ್ಟಿದೆ. ಅಲ್ಲಿನ ಜನ ಈಗಾಗಲೇ ‘ಎಂಜಲು ತಿಂದು ಬದುಕುವುದಕ್ಕೆ ’ ಒಗ್ಗಿಬಿಟ್ಟಿದ್ದಾರೆ. ಆರೋಗ್ಯದ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಭಾರತದ ಜನ ಒಗಿಲ್ಲ ; ಒಗ್ಗಲಾರರು. ವಿಶ್ವದಲ್ಲಿಯೇ ಅತಿ ಹೆಚ್ಚು ಮಂದಿ ಹಸಿವಿನಿಂದ ಬಳಲುವವರನ್ನು ಭಾರತದಲ್ಲಿ ಕಾಣಬಹುದು ಎನ್ನುತ್ತಾರೆ ಇಂಗ್ಲಿಷ್ ಯುವ ಲೇಖಕ ರಾಜ್‌ಪಟೇಲ್. ಅವರ ‘stuffed and starved ’ ಪುಸ್ತಕದಲ್ಲಿನ ಭಾರತದ ಹಸಿವಿನ ಸ್ಥಿತಿಯ ಬಗ್ಗೆ ಅನೇಕ ನಿದರ್ಶನಗಳನ್ನು ನೀಡಿದ್ದಾರೆ.
ಅಕ್ಕಿಯ ಬೆಲೆ ಭಾರತದಲ್ಲಿ ಗಗನಕ್ಕೇರಿದೆ. ಕನಿಷ್ಠ ೨೦ ರೂ. ಇಲ್ಲದೆ ಉತ್ತಮ ಗುಣಮಟ್ಟದ ಅಕ್ಕಿ ಸಿಗುವುದು ಕಷ್ಟ . ಇದು ಇತರ ದೇಶಗಳಲ್ಲೂ ಮುಂದುವರಿದಿದೆ. ಯಾವುದೇ ತರಕಾರಿ, ಕಾಳು, ಬೇಳೆಗಳನ್ನು ಖರೀದಿಸಲು ಅಂಗಡಿಗೆ ತೆರಳಿದರೆ ಅಲ್ಲಿ ಕನಿಷ್ಠ ೨೦ ರೂ. ತೆರಬೇಕು. ಇದು ಇಂದಿನ ದುಸ್ಥಿತಿ. ಕಾಂಬೋಡಿಯಾ ಹಾಗೂ ಪಿಲಿಪೈನ್ಸ್‌ಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ. ಹೀಗಾಗಿ ಅನ್ನಕ್ಕಾಗಿ ಹಾಹಾಕಾರ ಆರಂಭವಾಗಿದೆ. ಈ ಅಕ್ಕಿ ಕೊರತೆಯಿಂದಲೇ ಪ್ರಪಂಚದಲ್ಲಿ ೧೦೦ ಮಿಲಿಯನ್ ಜನ ಹಸಿವಿನಿಂದ ಬಳಲಿ ಕೊನೆಯುಸಿರೆಳೆಯುತ್ತಿದ್ದಾರೆ. ಫಿಲಿಪೈನ್ಸ್ ಒಂದರಲ್ಲಿಯೇ ೯೦ ಮಿಲಿಯನ್ ಮಂದಿ ಅನ್ನವಿಲ್ಲದೆ ಸಾವಿನಂಚಿನಲ್ಲಿ ಉಸಿರು ಬಿಗಿ ಹಿಡಿದು ನಿಂತಿದ್ದಾರೆ ...
ವಿಶ್ವದಲ್ಲಿ ಹಸಿವಿನ ವಿಚಾರದಲ್ಲಿ ನೋಡಿದರೆ ತೃಪ್ತರು ಕೇವಲ ಶೇ.೨೭ ಮಂದಿ. ಇನ್ನು ಶೇ.೫೩ ರಷ್ಟು ಜನ ಅರ್ಧಂಬರ್ಧ ತಿಂದು, ಇಲ್ಲವೇ ಸಂಪೂರ್ಣ ಉಪವಾಸ ಇದ್ದು ಬದುಕು ದೂಡುತ್ತಿದ್ದಾರೆ.
ಬಂಡವಾಳಶಾಹಿ ತತ್ವ :
ಭುವಿಯೇನು ಬಂಜೆಯಲ್ಲ. ಇಲ್ಲಿ ಎಲ್ಲವೂ ಬೆಳೆಯುತ್ತವೆ. ಆದರೆ ಜಾಗತಿಕ ವ್ಯವಸ್ಥೆಯಲ್ಲಿ ಮನುಷ್ಯನ ದುರಾಸೆ ಮಿತಿ ಮೀರಿದೆ. ಜಪಾನ್ ಗೋದಾಮುಗಳಲ್ಲಿ ಕೊಳೆಯುತ್ತಾ ಬಿದ್ದಿರುವ ಅಕ್ಕಿಯ ಮೂಟೆಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಹೌದು, ಜಪಾನ್, ಅಮೆರಿಕದಂತಹ ರಾಷ್ಟ್ರಗಳು ಆಹಾರ ವಸ್ತುಗಳನ್ನು ತಮ್ಮ ಭದ್ರಕೋಟೆಯಲ್ಲಿ ಬಂಸಿಟ್ಟಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಕೃತಕ ಅಭಾವ ಸೃಷ್ಟಿಯಾಗುತ್ತಿದೆ ( ಇದೇ ತಂತ್ರವನ್ನು ಈಗೀಗ ಸಣ್ಣಪುಟ್ಟ ವ್ಯಾಪಾರಿಗಳೂ ಅನುಸರಿಸುತ್ತಿರುವುದು ). ಇದರಿಂದಾಗಿ ಆಹಾರ, ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಪ್ರಪಂಚದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ೪ಪಟ್ಟು ಅಕ್ಕಿ ಜಪಾನ್‌ನಲ್ಲಿ ಶೇಖರಣೆಯಾಗಿದೆ. ಆದರೂ ಅದು ೭ಲಕ್ಷ ಟನ್ ಅಕ್ಕಿಯನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಲೇ ಇದೆ.
೧೯೯೩ರಲ್ಲಿ ಡಬ್ಲ್ಯುಟಿಒ ಜತೆ ಜಪಾನ್ ಮಾಡಿಕೊಂಡ ಒಪ್ಪಂದದಂತೆ ಇಂದಿಗೂ ಈ ಅಕ್ಕಿ ಆಮದು ಮುಂದುವರಿದಿದೆ. ಈ ನಡುವೆ ಫಿಲಿಪೈನ್ಸ್‌ನ ಹಸಿವನ್ನು ಕಣ್ಣಾರೆ ಕಂಡಿರುವ ಜಪಾನ್ ೨.೨೦ಲಕ್ಷ ಟನ್ ಅಕ್ಕಿಯನ್ನು ದಾನ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಅಕ್ಕಿ ಗೋದಾಮಿನಲ್ಲಿ ಕೊಳೆಯುವ ಹಂತ ತಲುಪಿದ್ದರೂ ಅದನ್ನು ವಿತರಿಸುವ ಇಚ್ಛೆ ಅಲ್ಲಿನ ಸರಕಾರಿ ಅಕಾರಿಗಳಿಗಿಲ್ಲ !
ಅಕಾರಿಗಳು ಹಾಗೂ ಶ್ರೀಮಂತರ ಸ್ವ ಹಿತಾಸಕ್ತಿಯಿಂದಾಗಿ ಇಂದು ವಿಶ್ವದಲ್ಲಿ ಮಿಲಿಯನ್‌ಗಟ್ಟಲೆ ಜನ ಬಡವರು, ಮಧ್ಯಮವರ್ಗದವರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಹಸಿವಿನ ರುದ್ರ ನರ್ತನ ಎಲ್ಲೆ ಮೀರಿದೆ. ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೆ, ಜಾತಿ, ಮತ , ಧರ್ಮಗಳ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಿ ಬಳಲುತ್ತಿದ್ದಾರೆ. ನೀರಿನಲ್ಲಿ ಮುಳುಗುವವನಿಗೆ ಒಂದು ಹುಲ್ಲಿನ ಗರಿ ಸಿಕ್ಕರೂ ಸಾಕು ಬದುಕಿಯೇನು ಎಂಬ ಆಸೆ ಇರುತ್ತದೆ. ಆದರೆ ಹಸಿವಿನ ಸುಳಿಯಲ್ಲಿ ಸಿಕ್ಕಿರುವ ಜನರಿಗೆ ಅದೂ ಕೂಡ ಇಲ್ಲದಾಗಿದೆ. ಈ ಜೀವನ ಇಷ್ಟಕ್ಕೇ ಸಾಕು ಎನ್ನುತ್ತಿದ್ದಾರೆ. ಈ ಭುವಿಯಲ್ಲಿ ಹಸಿವಿಗೆ ಹೆದರದವರ್‍ಯಾರು ಹೇಳಿ ?

No comments:

Powered By Blogger