Monday, November 17, 2008

ಕರ್ನಾಟಕದ ನಕ್ಸಲರಿಗೆ ನೇಪಾಳದ ಕುಮ್ಮಕ್ಕು


ಕರ್ನಾಟಕದ ನಕ್ಸಲರಿಗೆ ನೇಪಾಳದ ಕುಮ್ಮಕ್ಕು
ನಗರ ಪ್ರದೇಶಗಳಿಗೂ ಚಳವಳಿ ವಿಸ್ತರಿಸಲು ಕಾರ್ಯತಂತ್ರ !

ಬೆಂಗಳೂರು : ಪಶ್ಚಿಮ ಘಟ್ಟಕ್ಕೂ ನೇಪಾಳಕ್ಕೂ ಈಗ ಹೊಸ ನಂಟು ಬೆಳೆದಿದೆ ! ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಪ್ರಬಲಗೊಳಿಸಲು ನೇಪಾಳ ಸರಕಾರ ಸಂಪೂರ್ಣವಾಗಿ ಬೆಂಬಲ ನೀಡತೊಡಗಿದೆ !!
ಆ ದೇಶದಲ್ಲಿ ಮೊದಲ ಬಾರಿಗೆ ಸರಕಾರ ರಚಿಸಿರುವ ಮಾವೋವಾದಿಗಳು ಈಗ ತಮ್ಮ ಕಾರ್ಯತಂತ್ರವನ್ನು ಭಾರತದ ಉದ್ದಗಲಕ್ಕೂ ವಿಸ್ತರಿಸಿ ತಮ್ಮದೇ ಆದ ರಾಜಕೀಯ ನೆಲೆ ಕಂಡುಕೊಳ್ಳಲು ಸಕಲ ರೀತಿಯಲ್ಲೂ ಸನ್ನದ್ಧವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕರ್ನಾಟಕ , ಆಂಧ್ರಪ್ರದೇಶ, ಒರಿಸ್ಸಾ, ಗುಜರಾತ್, ಛತ್ತೀಸ್‌ಗಢ ಮುಂತಾದ ರಾಜ್ಯಗಳಿಂದ ಅರಣ್ಯ ಪ್ರದೇಶದಲ್ಲಿ ಕಾರ್ಯಪ್ರವೃತ್ತವಾಗಿರುವ ನಕ್ಸಲ್ ಮುಖಂಡರನ್ನು ಕರೆಯಿಸಿಕೊಂಡು ನೇಪಾಳದ ಪ್ರಧಾನಿ ಪ್ರಚಂಡ ಗುಪ್ತ ಮಾತುಕತೆ ನಡೆಸಿದ್ದು, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಚಳವಳಿ ವಿಸ್ತರಿಸಲು ಸಕಲ ಸಲಹೆ ಹಾಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ .
ಇಲ್ಲಿಯವರೆಗೆ ಕರ್ನಾಟಕದಲ್ಲಿ ಮಾವೋವಾದಿಗಳಿಂದ ಸಣ್ಣಪುಟ್ಟ ಸುದ್ದಿಗಳಾಗಿದ್ದವೇ ಹೊರತು ಅಷ್ಟಾಗಿ ದೊಡ್ಡ ಅನಾಹುತಗಳ್ಯಾವೂ ಆಗಿರಲಿಲ್ಲ. ಆದರೆ ಈಗ ಕರ್ನಾಟಕದಲ್ಲಿ ತಮ್ಮದೇ ಆದ ನೆಲೆ ಕಂಡುಕೊಳ್ಳಲು ಮಾವೋವಾದಿಗಳು ಬಹಿರಂಗವಾಗಿಯೇ ಸಿದ್ಧತೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ನೇಪಾಳದಲ್ಲಿ ನಡೆದ ಮಾವೋವಾದಿಗಳ ಉನ್ನತ ಮಟ್ಟದ ಗುಪ್ತ ಸಭೆಯಲ್ಲಿ ಕರ್ನಾಟಕದಿಂದ ಕೆಲವು ಆಯ್ದ ನಕ್ಸಲ್ ಮುಖಂಡರು ಭಾಗವಹಿಸಿದ್ದಾರೆ. ಕಾಡಿನಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ನಕ್ಸಲ್ ಚಟುವಟಿಕೆ ಪ್ರಾರಂಭಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲು ಆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಅರಣ್ಯ ಪ್ರದೇಶಗಳಲ್ಲಿ ಆದಿವಾಸಿಗಳ, ಗಿರಿಜನರ ಏಳಿಗೆಗಾಗಿ ಹೋರಾಟ ನಡೆಸುತ್ತಿದ್ದ ನಕ್ಸಲ್ ಸಂಘಟನೆ ಈಗ ಇಬ್ಭಾಗವಾಗಿದೆ. ಒಂದು ಗುಂಪು ನಗರ ಪ್ರದೇಶಗಳಲ್ಲೂ ತಮ್ಮ ಹೋರಾಟ ಮುಂದುವರಿಸಲು ತೀರ್ಮಾನಿಸಿ ‘ರೆವಲ್ಯೂಷನರಿ ಕಮ್ಯೂನಿಸ್ಟ್ ಪಾರ್ಟಿ- ಕರ್ನಾಟಕ (RCPK)’ ಮಾಡಿಕೊಂಡು ಹೊರ ಬಂದು ಬಹಿರಂಗ ಕ್ರಾಂತಿಗೆ ಅಣಿಯಾಗಿದೆ ಎಂದು ಹೇಳಲಾಗಿದೆ.
ನೇಪಾಳದಲ್ಲಿ ನಕ್ಸಲರು ರಾಜ ಪ್ರಭುತ್ವದ ವಿರುದ್ಧ ಸಶಸ್ತ್ರ ಧಂಗೆ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಜತೆಗೆ ರಾಜಕೀಯವಾಗಿ ಬೆಳೆದು ಅಕಾರದ ಗದ್ದುಗೆ ಏರಿದ್ದಾರೆ. ಅದೇ ದಾಳವನ್ನು ಈಗ ನೇಪಾಳ ಸರಕಾರ ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳ ಮೇಲೂ ಮುನ್ನಡೆಸಲು ಪೂರ್ವ ತಯಾರಿಯಲ್ಲಿದೆ. ಅದಕ್ಕಾಗಿಯೇ ಉನ್ನತ ಸಭೆ ನಡೆಸಿ ನಕ್ಸಲರಿಗೆ ಚಳವಳಿ ನಡೆಸಲು ಎಲ್ಲ ರೀತಿಯ ಸಲಹೆ ಹಾಗೂ ಸಹಕಾರ ನೀಡುವುದಾಗಿ ನೇಪಾಳ ಪ್ರಧಾನಿ ಪ್ರಚಂಡ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿಯೇ ಕರ್ನಾಟಕದಲ್ಲಿ ಆರು ತಿಂಗಳಿನಿಂದೀಚೆಗೆ ನಕ್ಸಲರ ಚಟುವಟಿಕೆ ತೀವ್ರಗೊಂಡಿದೆ. ಮೊದಲಿನ ನಕ್ಸಲ್ ತಂಡ ಎಂದಿನಂತೆ ಪಶ್ಚಿಮಘಟ್ಟದಲ್ಲಿ ಕಾರ್ಯಪ್ರವೃತ್ತವಾಗಿದೆ. ಆದರೆ ಅಲ್ಲಿ ಹೊರ ಬಂದ ತಂಡ ನಗರ ಪ್ರದೇಶಗಳ ಕೊಳಚೆ ಪ್ರದೇಶ, ಐಟಿ, ಬಿಟಿ, ಬಿಪಿಒಗಳಲ್ಲಿ ಸಂಘಟನೆಯಲ್ಲಿ ತೊಡಗಿದೆ .
ಐಟಿ ಕೇಂದ್ರಗಳಲ್ಲಿ ನಕ್ಸಲ್ ಸಂಘಟನೆ :
ನಕ್ಸಲರು ಇಷ್ಟು ದಿನ ಕೇವಲ ಪಶ್ಚಿಮ ಘಟ್ಟದ ಗಿರಿಜನರ ಮೂಲ ಸಮಸ್ಯೆಗಳಿಗೆ ಮಾತ್ರ ತಲೆ ಕೆಡಿಸಿಕೊಂಡು ಬಂದೂಕು ಹಿಡಿದು ತಿರುಗುತ್ತಿದ್ದರು. ಆದರೆ ಈಗ ಆ ಅಜೆಂಡಾ ಹೊಸ ಸಂಘಟನೆಯಲ್ಲಿ ಬದಲಾಗಿದೆ. ಈಗ ಅವರು ನಗರ ಪ್ರದೇಶಗಳಲ್ಲಿನ ಉದ್ಯೋಗ ಅಭದ್ರತೆ, ನಿಯಮಾವಳಿಗಳಿಲ್ಲದ ಕೆಲಸದ ಹೊರೆ, ಇತ್ತೀಚೆಗೆ ಆರ್ಥಿಕ ಕುಸಿತದಿಂದ ಸದ್ದಿಲ್ಲದೆ ನಡೆಯುತ್ತಿರುವ ಸಂಬಳ ಕಡಿತ, ಉದ್ಯೋಗದಿಂದ ತೆಗೆದು ಹಾಕುವ ಪ್ರಕ್ರಿಯೆಗಳ ವಿರುದ್ಧ ನೌಕರರನ್ನು ಜಾಗೃತಗೊಳಿಸಿ ತಮ್ಮ ಸಂಘಟನೆಯನ್ನು ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಆ ಮೂಲಕ ತಮ್ಮ ‘ಆರ್‌ಸಿಪಿ-ಕೆ ’ಯನ್ನು ಪ್ರಬಲಗೊಳಿಸಿ ಹೋರಾಟವನ್ನು ತೀವ್ರಗೊಳಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು, ಅದು ಈಗಾಗಲೇ ಜಾರಿಗೊಳ್ಳುತ್ತಿದೆ. ಅದಕ್ಕೆ ಪ್ರತ್ಯಕ್ಷ ನಿದರ್ಶನ ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನ ಕೊಳಚೆ ಪ್ರದೇಶವೊಂದರಲ್ಲಿ ನಾಗರಿಕರನ್ನು ಸಂಘಟಿಸುತ್ತಿದ್ದ ನಕ್ಸಲ್ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಸಿರುವುದು. ಶೃಂಗೇರಿಯಲ್ಲಿ ಬಿಜೆಪಿ ಮುಖಂಡರ ಜತೆ ನಡೆದ ಬಹಿರಂಗ ಸಭೆ. ಕುಂದಾಪುರದ ಮಡಾಮಕ್ಕಿಯ ಹಂಜಾದಲ್ಲಿ ನ.೪ರಂದು ನಡೆದ ಪ್ರಜಾಸಭೆ. ಜತೆಗೆ ಈ ಹಿಂದೆ ಜೈಲಿನಲ್ಲಿದ್ದು, ಬಿಡುಗಡೆಯಾಗಿದ್ದ ಕೆಲವು ನಕ್ಸಲ್ ಮುಂಡರು ಮತ್ತೆ ಭೂಗತರಾಗಿರುವುದು...
ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ನಕ್ಸಲರು ಮತ್ತಷ್ಟು ಜಾಗೃತರಾಗಿದ್ದು, ಆರೇಳು ತಿಂಗಳಿನಿಂದೀಚೆಗೆ ಚಳವಳಿ ಎರಡು ಬಣಗಳಾದ ನಂತರ ಹೋರಾಟ ನಗರ ಪ್ರದೇಶಗಳಿಗೂ ವಿಸ್ತರಣೆಗೊಂಡಿದ್ದು, ಬಹಿರಂಗವಾಗಿ ಜನರನ್ನು ಒಟ್ಟುಗೂಡಿಸಿ, ಸಂಘಟಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಹೀಗಾಗಿ ರಾಜ್ಯದಲ್ಲಿ ಸಶಸ್ತ್ರ ಹೋರಾಟದ ಜತೆಗೆ ನಕ್ಸಲ್ ಚಳವಳಿ ಹೊಸ ರೂಪ ಪಡೆಯುವ ಎಲ್ಲ ಸಾಧ್ಯತೆಗಳಿವೆ .

1 comment:

ಮಾವೆಂಸ said...

ಹೊಸ ತರದ ಬ್ಲಾಗ್, ಸುದ್ದಿ, ಕತೆ, ಕವಿತೆ ಮುಂತಾದ ವೈವಿಧ್ಯವಿದೆ. ನನ್ನ ಫೇವರಿಟ್ ಬ್ಲಾಗ್ ಲಿಸ್ಟ್‌ನಲ್ಲಿ ನಿಮ್ಮದನ್ನೂ ಸೇರಿಸಿದ್ದೇನೆ, ನೋಡಿ.....

Powered By Blogger