Thursday, March 12, 2009

ಎಲ್ಲರೂ ಒಂದೇ ದೋಣಿಯ ಕಳ್ಳರು...

ರಾಜಕೀಯ ಅನ್ನೋದೇ ಹೊಲಸು ಹೀಗಂತಾ ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣ ನಮ್ಮ ಜನಪ್ರತಿನಿಗಳು ಹಾಗೂ ಅವರು ಆಡುವ ದೊಂಬರಾಟ. ಇಲ್ಲಿ ಯಾರೂ ಸಾಚಾ ಅಲ್ಲ, ಯಾರೂ ನಿಷ್ಠನಲ್ಲ, ಯಾರೂ ಪ್ರಮಾಣಿಕರಲ್ಲ ಎಂಬುದೇ ಅದರ ಅರ್ಥ.
ರಾಜಕಾರಣ ಎನ್ನುವುದು ಒಂದು ಸಮುದ್ರ. ಇಲ್ಲಿ ಈಜಿದಷ್ಟೂ ನಮ್ಮ ಜನಪ್ರತಿನಿಗಳಿಗೆ ಖುಷಿಯೋ ಖುಷಿ. ಮನ ತಣಿಯುವುದೇ ಇಲ್ಲ . ಏಳಲಿ, ಮುಳುಗಲಿ, ನೀರು ಕುಡಿಯಲಿ, ಕುಡಿಸಲಿ ಎಲ್ಲದೂ ಒಂದು ರೀತಿಯ ಖುಷಿ . ಅಷ್ಟೆಲ್ಲಾ ಏಳು ಬೀಳುಗಳನ್ನು ಕಂಡರೂ ಅವರನ್ನು ಒಮ್ಮೆ ಕೇಳಿ ನೋಡಿ? ‘ರಾಜಕೀಯದಲ್ಲಿದ್ದೊಷ್ಟು ಹೊಲಸು ಬೇರೆಲ್ಲೂ ಇಲ್ಲ, ಇಲ್ಲಿ ಯಾರಿಗೂ ತತ್ತ್ವ ಸಿದ್ಧಾಂತಗಳಿಲ್ಲ, ಎಲ್ಲರೂ ...ಬಿಟ್ಟಿದ್ದಾರೆ.’ ಎಂದು ಕಟುವಾಗಿ ಮಾತನಾಡುತ್ತಾರೆ.
ಈ ಸಾಗರದಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ, ಸಂಘಪರಿವಾರಕ್ಕೆ ‘ರಾಮಬಾಣ’ವೇ ಅಸ್ತ್ರ. ಕಾಂಗ್ರೆಸ್ ಬತ್ತಳಿಕೆಯಲ್ಲಿರುವುದು ‘ಗಾಂವಾದ’. ಜೆಡಿಎಸ್‌ನಲ್ಲಿರುವುದು ‘ಜಾ(ತ್ಯ)ತೀ(ತ)ವಾದ ’. ಇನ್ನು ಉಳಿದ ಪಕ್ಷಗಳು ಕೂಡ ಅವರದ್ದೇ ಆದ ಬತ್ತಳಿಕೆಯಲ್ಲಿ ಅವರದ್ದೇ ಆದ ‘ಅಸ್ತ್ರ’ಗಳನ್ನು ಇಟ್ಟುಕೊಂಡಿವೆ. ಇವರೆಲ್ಲರೂ ಹೇಳುವುದು ಒಂದೇ ‘ ಅವರು ಸರಿ ಇಲ್ಲ’. ಇವರೆಲ್ಲರೂ ಬೇರೆಯವರನ್ನು ಬೆರಳು ಮಾಡಿ ತೋರಿಸುತ್ತಾರೆ. ಆದರೆ ಅವರ ನಾಲ್ಕು ಬೆರಳುಗಳು ಮಾತ್ರ ಆಪಾದಿಸುವವರನ್ನೇ ತೋರಿಸುತ್ತಿರುತ್ತವೆ. ಇದು ಇಂದಿನ ರಾಜಕೀಯ.
ಇಲ್ಲಿನ ಚಟವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸರಳವಾಗಿ ಹೇಳುವುದಾದರೆ ‘ಎಲ್ಲೂ ಸಲ್ಲದವನು ಇಲ್ಲಿ ಸಲ್ಲುವನಯ್ಯ’. ರಾಜಕೀಯ ಪರಿಣಿತರು, ಧುರೀಣರೇ ಹೇಳುವ ಹಾಗೆ ರಾಜಕೀಯದಲ್ಲಿ ಯಾರೂ ಶತೃಗಳಲ್ಲ, ಯಾರೂ ಮಿತ್ರರಲ್ಲ. ಜತೆಗೆ ಇವರ್‍ಯಾರಿಗೂ ಇಂದಿನ ಸ್ಥಿತಿಯಲ್ಲಿ ರ್ನಿಷ್ಟ ತತ್ತ್ವ ಸಿದ್ಧಾಂತಗಳಿಲ್ಲ!
‘ಮೊದ ಮೊದಲು ಬಂಗಾರಪ್ಪ ಅವರನ್ನು ಪಕ್ಷಾಂತರಿ, ಒಂದು ಪಕ್ಷದಲ್ಲಿ ಉಳಿಯುವುದು ಗೊತ್ತಿಲ್ಲ. ಅವರಿಗೆ ಅಕಾರ ಬೇಕು’ ಎಂದು ಹೇಳುತ್ತಿದ್ದ ಘಟಾನುಘಟಿ ರಾಜಕಾರಣಿಗಳಲ್ಲಿ ಕೆಲವರು ಈಗ ಆಪರೇಷನ್ ಕಮಲಕ್ಕೆ ಸಿಕ್ಕಿ ಗಾಳದೊಳಗಿನ ಮೀನುಗಳಾಗಿದ್ದಾರೆ. ಮತ್ತೆ ಕೆಲವರು ತತ್ತ್ವ ಸಿದ್ಧಾಂತಗಳನ್ನೆಲ್ಲಾ ಗಾಳಿಗೆ ತೂರಿ ಒಂದು ಸುತ್ತು ಸುತ್ತಿ, ಸುಸ್ತಾಗಿ ಮತ್ತೆ ಅದೇ ಪಕ್ಷಕ್ಕೆ ಬಂದು ನೆಲೆ ನಿಂತಿದ್ದಾರೆ. ಬಂಗಾರಪ್ಪನವರನ್ನು ರಾಜಕೀಯವಾಗಿ ವಿರೋಸುತ್ತಿದ್ದವರು ಅವರನ್ನೂ ಮೀರಿಸುವಂತೆ ಪಕ್ಷಾಂತರ ಮಾಡಿ ‘ಮರಕೋತಿ’ ಎನಿಸಿಕೊಂಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಜೆಡಿಯು, ಬಿಜೆಪಿ ಯಾವುದೇ ಪಕ್ಷಕ್ಕೆ ಹೋದರೂ ಅಲ್ಲಿ ಎಲ್ಲರೂ ಕನವರಿಸುವುದು ಅಕಾರದ ಗದ್ದುಗೆಯನ್ನೇ. ಆದರೆ ಹೆಸರಿಗೆ ಮಾತ್ರ, ಜನಸಾಮಾನ್ಯರನ್ನು ಯಾಮಾರಿಸಲು, ತೋರುಗಾಣಿಕೆಗೆ ತತ್ತ್ವ ಸಿದ್ಧಾಂತ ಹಾಗೂ ವ್ಯಕ್ತಿಗತ ವಿಚಾರಗಳನ್ನು ಮುಂದಿಡುತ್ತಾರಷ್ಟೆ. ಅದು ಈಗ ಮತ್ತೆ ಸಾಭೀತಾಗಿದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ ಎಂದು ಒಂದು ಕಾಲದಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಗೌಡರು ಜನತಾ ದಳ ಛದ್ರವಾದ ನಂತರ ಜಾ(ತ್ಯ)ತೀ(ತ) ಜನತಾದಳ ಮಾಡಿ, ಅದರ ನೆರಳಲ್ಲೇ ತಮ್ಮ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ ಅವರನ್ನು ಪೋಷಿಸಿ ಬೆಳೆಸಿದರು. ಅದು ನಡೆದದ್ದು ಅಕಾರ ಬಂದ ನಂತರವೇ...
ಈಗ ಅದೇ ಕೆಲಸವನ್ನು ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮಾಡಿದ್ದಾರೆ. ತಮ್ಮ ಪುತ್ರ ಇದೂವರೆಗೆ ಬಿಜೆಪಿಗಾಗಿ ಏನನ್ನೂ ಮಾಡದಿದ್ದರೂ ಶಿಕಾರಿಪುರ ಪುರಸಭೆಯ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಈಗ ನೇರವಾಗಿ ದಿಲ್ಲಿಗೆ ದಿಬ್ಬಣ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ವಿರೋಸುತ್ತಿದ್ದ ಯಡಿಯೂರಪ್ಪನವರೇ ಈಗ ತಮ್ಮ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿಸುವ ಮೂಲಕ ‘ಪುತ್ರ ವಾತ್ಸಲ್ಯ’ ಮೆರೆಯುತ್ತಿದ್ದಾರೆ.
ಇದರಿಂದ ಎಲ್ಲ ರಾಜಕೀಯ ಪಕ್ಷಗಳು, ನಾಯಕರೂ ಪರಿತಪಿಸುವುದು ಅಕಾರಕ್ಕಾಗಿ ಎಂಬುದು ಸಾಭೀತಾಗಿದೆ. ಎಲ್ಲರ ಮನದಾಳದ ಮೂಲೆಯಲ್ಲಿರುವುದು ದೇಶದ ಅಥವಾ ರಾಜ್ಯದ ಹಿತಕ್ಕಿಂತ ಕುಟುಂಬದ ಹಿತ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ. ಇವರೆಲ್ಲಾ ಒಂದೇ ದೋಣಿಯಲ್ಲಿ ಬಂದಿರುವ, ನಾನಾ ಮುಖವಾಡಗಳನ್ನು ಅಂಟಿಸಿಕೊಂಡಿರುವ ಕಳ್ಳರು ಎನ್ನುವುದು ಧೃಡಪಟ್ಟಿದೆ.
ಚುನಾವಣೆ ಮತ್ತೆ ಜನರ ಮುಂದೆ ಬಂದಿದೆ. ಮುಗ್ದ ಮತದಾರನ ಮತವನ್ನು ಕೊಳ್ಳೆ ಹೊಡೆದ ಅಥವಾ ಕೊಳ್ಳೆ ಹೊಡೆಯುವ ಖದೀಮರು ಯಾರು ಎಂದರೆ ಉತ್ತರ ಅದೇ. ಒಂದೇ ದೋಣಿಯ ಕಳ್ಳರು...!

Thursday, February 26, 2009

ಹೌದು; ಅಮ್ಮಂದಿರು ಹೀಗೂ ಇರ್ತಾರೆ...!



ರೈಲು ಆಗ ಸಮಯ ಮಧ್ಯಾಹ್ನ ೨.೪೫. ಕಾಲು ಗಂಟೆ ಲೇಟಾಗಿ ಶಿವಮೊಗ್ಗ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಹೊರಟಿತ್ತು. ಹೆಸರಿಗೆ ‘ಎಕ್ಸ್‌ಪ್ರೆಸ್’ ಆದರೂ ಅದು ಜನರ ಮನಸಿನಲ್ಲಿ ‘ಡಕೋಟಾ ಎಕ್ಸ್‌ಪ್ರೆಸ್’! ಭದ್ರಾವತಿಗೆ ಬರುತ್ತಿದ್ದಂತೆ ಜನಸಂದಣಿ ಹೆಚ್ಚಾಗಿತ್ತು. ಭದ್ರಾವತಿಯಿಂದ ರೈಲು ಹೊರಡುತ್ತಿದ್ದಂತೆ ನಾನು ಕೂತ ಸೀಟಿನ ಎರಡು ಸೀಟಿನಾಚೆ ಹಸುಳೆಯೊಂದು ಅಳಲಾರಂಭಿಸಿತು.
ಅದಕ್ಕೆ ಸುಮಾರು ೩ ತಿಂಗಳೂ ತುಂಬಿರಲಿಲ್ಲ. ಜನ ಹೆಚ್ಚಾಗಿದ್ದರಿಂದ ಸೆಕೆ ಜಾಸ್ತಿಯಾಗಿ ಮಗು ಅಳುತ್ತಿರಬೇಕೆಂದು ನಾವೆಲ್ಲಾ ಅಂದುಕೊಂಡೆವು. ಅಕ್ಕಪಕ್ಕದವರೂ ಹಾಗೇ ಅಂದುಕೊಂಡಿರಬೇಕು. ಈ ಮದ್ಯೆ ಮಗು ತುಸು ಹೊತ್ತು ಅಳು ನಿಲ್ಲಿಸಿತು. ಅನಂತರ ಅತ್ತ ಕಡೆ ಯಾರೂ ಗಮನ ಹರಿಸಲಿಲ್ಲ. ತರೀಕೆರೆಗೆ ಆಗಮಿಸುತ್ತಿದ್ದಂತೆ ರೈಲಿನಲ್ಲಿ ರಶ್ ಕಡಿಮೆಯಾಯಿತು. ರೈಲು ತರೀಕೆರೆ ದಾಟುತ್ತಿದ್ದಂತೆ ಮಗು ಮತ್ತೆ ಎಚ್ಚರಗೊಂಡು ಅಳಲಾರಂಭಿಸಿತು.
ಅದರ ಅಪ್ಪ ,ಅಮ್ಮ ಇಬ್ಬರೂ ಇದ್ದರು. ಇಬ್ಬರೂ ಜೀನ್ಸ್ , ಟೀ ಶರ್ಟ್ ಧಾರಿಗಳು. ಸ್ವಲ್ಪ ಹೊತ್ತು ಅಪ್ಪ ಮಗುವನ್ನು ಸಂತೈಸಲು ಯತ್ನಿಸಿದ. ಮಗುವಿನ ಅಳು ಯಾರಿಗೆ ತಾನೆ ಕರಳು ಚುರುಕ್ ಎನಿಸುವುದಿಲ್ಲ ಹೇಳಿ ? ಆದ್ದರಿಂದ ಸಹಜವಾಗಿಯೇ ಎಲ್ಲರೂ ಆ ಮಗುವನ್ನೇ ದಿಟ್ಟಿಸಿ ಮನ ಮಿಡಿಯುತ್ತಿದ್ದರು. ಆದರೆ ಮಗು ಮಾತ್ರ ಅಳು ನಿಲ್ಲಿಸಲೇ ಇಲ್ಲ. ಬೀರೂರಿಗೆ ಬರುವ ಹೊತ್ತಿಗೆ ಸಂಜೆ ೪.೩೦. ಸತತವಾಗಿ ಎರಡು ಗಂಟೆಗಳ ಕಾಲ ಮಗು ಅಳುತ್ತಲೇ ಇತ್ತು. ಕ್ರಾಸಿಂಗ್ ಇದ್ದಿದ್ದರಿಂದ ಅಲ್ಲಿ ಬಹಳ ಹೊತ್ತು ರೈಲು ನಿಂತಿತ್ತು. ಅದರ ಅಪ್ಪ ಮಗುವನ್ನು ಎತ್ತಿಕೊಂಡು ಅತ್ತಿಂದಿತ್ತ, ಇತ್ತಿಂದತ್ತ ಸುತ್ತಾಡಿದರು. ರೈಲು ಹೊರಟ ನಂತರ ಬಂದು ಸೀಟಿನಲ್ಲಿ ಕುಳಿತರು. ಮಗು ಮಾತ್ರ ‘ರಾಗ ’ ನಿಲ್ಲಿಸಿರಲಿಲ್ಲ.
ಅನಂತರ ಅದರ ಅಮ್ಮ (ಅಪ್ಪನಿಗೆ ಸುಸ್ತಾಗಿರಬೇಕು!?) ಎತ್ತಿಕೊಂಡು ಸಂತೈಸಿದಳು. ಆ ಹೊತ್ತಿಗಾಗಲೇ ಮಗುವಿಗೆ ಹಸಿವಾಗಿದೆ ಎಂಬುದು ಅಕ್ಕಪಕ್ಕ ಕುಳಿತಿದ್ದವರಿಗೆಲ್ಲಾ ತಿಳಿದಿತ್ತು. ಮಗು ಅಳುವಿನ ಮೂಲಕ ತನ್ನದೇ ಭಾಷೆಯಲ್ಲಿ ಹೇಳುತ್ತಿತ್ತು. ಆದರೆ ಆ ‘ಮಹಾತಾಯಿ’ಗೆ ಮಗುವಿನ ಹಸಿವು ಅರ್ಥವಾಗಿರಲಿಲ್ಲ!!
ರೈಲು ತುಮಕೂರು ತಲುಪುವವರೆಗೆ ಮಗುವಿನ ನೋವನ್ನು ಅರಿತೂ ಅಕ್ಕ ಪಕ್ಕದ ಜನ ಸುಮ್ಮನೇ ಇದ್ದರು. ಮಗುವನ್ನು ಹೆತ್ತ ಮಹಾತಾಯಿ ತನ್ನ ಕರುಳ ಬಳ್ಳಿಗೆ ಕುಡಿಯಲು ಕನಿಷ್ಠ ಪಕ್ಷ ಬಾಟಲಿಯಲ್ಲಾದರೂ ಹಾಲು ತಂದಿರಲಿಲ್ಲ! ತಮ್ಮ ದಾಹ ತಣಿಸಿಕೊಳ್ಳಲು ಮಾತ್ರ ‘ಬಿಸ್ಲೇರಿ ಬಾಟಲಿ’ ತಂದಿದ್ದರು...
ಅದ್ಯಾಕೋ ನನಗೆ ಅನಂತರ ಸುಮ್ಮನಿರಲಾಗಲಿಲ್ಲ. ಆ ತಾಯಿಗೆ ಹೇಳಲು ಧೈರ್ಯ ಸಾಲದೆ ಎದುರಿಗಿದ್ದ ಒಬ್ಬ ವೃದ್ಧ ಮಹಿಳೆಗೆ ‘ಆ ಮಗು ಆಗ್ಲಿಂದ ಆಳ್ತಾನೆ ಇದೆ, ಹಾಲು ಕುಡಿಸ್ಬೇಕು ಅನ್ನೋ eನ ಕೂಡ ಆ ಹೆಂಗಸಿಗೆ ಇಲ್ಲ ನೋಡಿ...’ ಎಂದೆ. ಅವರು ಕೂಡ ಅದನ್ನೇ ಗಮನಿಸುತ್ತಿದ್ದರು ಎನಿಸುತ್ತೆ. ತಕ್ಷಣ ‘ ನಾನೂ ಅದನ್ನೇ ಗಮನಿಸ್ತಿದೀನಪ್ಪ, ಅವ್ಳೀಗೆ ಸ್ವಲ್ಪಾನೂ ಕರುಣೆ ಅನ್ನೋದಿಲ್ವಾ...? ನಿಜವಾಗ್ಲು ಅವ್ಳು ಅದರ ತಾಯಿನಾ ಅನಿಸ್ತಿದೆ. ನಮ್ಮ ಕಾಲದಾಗೆ ಹಿಂಗೆಲ್ಲಾ ಇರ್‍ಲಿಲ್ಲ...’ ಎಂದು ನಿಟ್ಟುಸಿರು ಬಿಟ್ಟರು.
ಅರಸೀಕೆರೆ ಬರುವ ಮುಂಚೆಯೇ ಆ ವೃದ್ಧೆ ‘ ಏನವ್ವಾ... ಆ ಕೂಸು ಹೊಟ್ಟೆ ಹಸ್ತು ಶಿಮೊಗ್ಗದಿಂದ ಹೊಯ್ಕೊಳ್ತಾ ಐತಿ. ಹಾಲು ಕುಡಿಸ್ಬೇಕು ಅಂತಾ ಗೊತ್ತಾಗಂಗಿಲ್ಲಾ...?’ ಎಂದು ಗುಡುಗಿದರು. ಅದರಮ್ಮ ತುಟಿ ಬಿಡದೆ ವೃದ್ಧೆಯನ್ನು ಗುರಾಯಿಸಿ ಸುಮ್ಮನಾದಳು. ಆದರೆ ಅದರಪ್ಪ ‘ಹಾಲಿನ ಬಾಟಲ್ ತರೋದೆ ನೆನಪಾಗಲಿಲ್ಲ.’ ಎಂದ. ಈಉತ್ತರದಿಂದ ತೃಪ್ತಿಯಾಗದ ವೃದ್ಧೆ ‘ ತರೀಕೆರೆ ಸ್ಟೇಷನ್‌ನಲ್ಲಿ ಹಾಲು ಸಿಕ್ರೆ ತಗೊಂಡು ಬಂದು ಕುಡ್ಸಿ’ ಎಂದರು.
ಸ್ಟೇಷನ್ ಬಂದ ಮೇಲೆ ಇಳಿದು ಹೋದ ಆತ ಸ್ವಲ್ಪ ಸುತ್ತಾಡಿ ಬರಿಗೈಯ್ಯಲ್ಲಿ ಬಂದ. ಮಗು ಮಾತ್ರ ಅಳುತ್ತಲೇ ಇತ್ತು. ಆದರೆ ಅಮ್ಮನ ಹೃದಯದಲ್ಲಿ ಮಾತ್ರ ಕರುಣೆ ಉಕ್ಕಿ ಬರಲೇ ಇಲ್ಲ! ಬದಲಿಗೆ ಸಿಟ್ಟು ಕಾಣುತ್ತಿತ್ತು. ಅದು ಗಂಡ ಹಾಗೂ ಮಗುವಿನ ನಡುವೆ ಹೊಯ್ದಾಡುತ್ತಿತ್ತು. ಅಷ್ಟೊತ್ತಿಗಾಗಲೇ ರಾತ್ರಿ ೮ ಗಂಟೆಯಾಗಿತ್ತು. ಅಷ್ಟಕ್ಕೂ ಸುಮ್ಮನಾಗದ ವೃದ್ಧೆ ‘ ಹೋಗು ತಾಯಿ, ಆ ಟಾಯ್ಲೆಟ್ ರೂಮಲ್ಲಾದ್ರೂ ನಿಂತ್ಗಂಡು ಎದೆ ಹಾಲು ಕುಡ್ಸು, ಅದು ಅಳೋದು ನಮ್ಮಿಂದ ನೋಡಾಕಾಗಂಗಿಲ್ಲ.’ ಎಂದರು.
ಆದರೆ ಆ ‘ಕರುಣಾಮಾತೆ ’ ಮಗು ಗೋಳಿಟ್ಟರೂ ಪರವಾಗಿಲ್ಲ, ಎದೆಹಾಲು ಕುಡಿಸಲು ರೆಡಿ ಇರಲಿಲ್ಲ !! ಸುತ್ತಮುತ್ತ ಕೂತವರೆಲ್ಲಾ ಅದೇ ಮಾತನ್ನು ಹೇಳಿದರು. ಆಕೆ ಮಾತ್ರ ಜಾಗ ಬಿಟ್ಟು ಕದಲಲಿಲ್ಲ. ಅದೇಕೊ ಅಪ್ಪನಿಗೆ ತಡೆಯಲಾಗಲಿಲ್ಲವೇನೋ. ಆ ಮಗುವನ್ನು ಅಂಗಾತ ಮಲಗಿಸಿ ಬಿಸಿಲರಿ ಬಾಟಲಿಯ ಮುಚ್ಚಳದಿಂದ ಮಗುವಿನ ಬಾಯಿಗೆ ನೀರು ಸುರಿದ...
ಅದನ್ನು ನೋಡಿದ ಜನ ಮತ್ತೆ ಬಾಯಿ ಬಿಡಲಿಲ್ಲ...!! ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಬೆಂಗಳೂರು ತಲುಪಿದಾಗ ರಾತ್ರಿ ೧೦.೩೦. ಆಲ್ಲಿಯವರೆಗೂ ಆ ವಾತ್ಸಲ್ಯರೂಪಿಣಿ ಎದೆಹಾಲು ಕುಡಿಸಲೇ ಇಲ್ಲ ; ಮಗು ಅಳು ನಿಲ್ಲಿಸಲೇ ಇಲ್ಲ. ಜನ ಮಾತ್ರ ನಂತರ ತುಟಿ ಬಿಚ್ಚಲಿಲ್ಲ....

Thursday, February 12, 2009

ಪ್ರೀತ್ಸೋದ್ ತಪ್ಪಾ ...?

‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ?
ಮಳೆ ಸುರಿದೀತು ಹೇಗೆ...?
-ಹೀಗೆ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಹಿಂದೆಯೇ ತಮ್ಮ ಕಾವ್ಯದಲ್ಲಿ ಪ್ರಶ್ನೆ ಮಾಡಿದ್ದಾರೆ.
ಪ್ರಪಂಚದ ಯಾವುದೇ ಒಂದೇ ಒಂದು ಜೀವಿಯ ಮನದಾಳದಲ್ಲಿ ಪ್ರೀತಿ ಇಲ್ಲ ಎಂದು ತೋರಿಸಲು ಸಾಧ್ಯವೇ ? ಸಾಧ್ಯವೇ ಇಲ್ಲ. ಪ್ರೀತಿ ಜಗತ್ತಿನ ಉದಯಕ್ಕೆ ಸಾಕ್ಷಿ. ಪ್ರೀತಿ ಜೀವನೋತ್ಸಾಹದ ಚಿಲುಮೆ. ಪ್ರೀತಿ ಸೂರ್ತಿ. ಅದನ್ನು ಹೃದಯಪೂರ್ವಕವಾಗಿ ಅನುಭವಿಸಿದವರಿಗೇ ಗೊತ್ತು ಅದರ ಗಂಧ ಗಾಳಿ...
ಗೋರ್ಕಲ್ಲ ಮೇಲೆ ಮಳೆ ಸುರಿದು ಪ್ರಯೋಜನವಾದರೂ ಏನು ? ಈಗ ರಾಜ್ಯದಲ್ಲಿ ಆಗುತ್ತಿರುವುದೂ ಅದೇ. ಶ್ರೀರಾಮಸೇನೆ ಹಾಗೂ ಸಂಘಪರಿವಾರ ‘ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಿ ತಾವೇ ‘ಸಂಸ್ಕೃತಿ ರಕ್ಷಕರು’ ಎಂದು ಸ್ವಯಂ ಘೋಷಿಸಿಕೊಂಡು ಅದರ ಉಳಿವಿಗೆ ಹೋರಾಡುವುದು ಅನಾಗರಿಕತನ.
ಪ್ರೀತಿ ಅನ್ನೋ ಆ ಹೂವು ಯಾರಲ್ಲೂ ಹೇಳಿ ಕೇಳಿ ಹುಟ್ಟುವುದಿಲ್ಲ. ಅದಕ್ಕೆ ಒಂದು ದಿನ ಅಥವಾ ಒಂದು ಸಮಯ ಎಂಬುದೇ ಇಲ್ಲ. ಅದರ ಉಗಮವೇ ಆಗೋಚರ. ಹಾಗೆಂದು ನಾವು ಪ್ರೀತಿಸಿದವರೆಲ್ಲರನ್ನೂ ಮದುವೆಯಾಗಬೇಕು ಎಂಬುದು ಕೂಡ ಖಡು ಮೂರ್ಖತನ. ಭಾರತೀಯ ಸಂಸ್ಕೃತಿ ರಕ್ಷಕರು ಎಂದು ಹೇಳಿಕೊಳ್ಳುವ ಈ ಭಟ್ಟಂಗಿಗಳಿಗೆ ಸ್ತ್ರೀಯನ್ನು ಗೌರವಿಸುವ ಕನಿಷ್ಠ eನ ಕೂಡ ಇಲ್ಲ. ಹೀಗಿರುವಾಗ ಇವರು ರಕ್ಷಿಸುವುದಾದರೂ ಏನು ?
ಸಮಾಜದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಸಮಾನವಾದ ಸ್ಥಾನ ಮಾನಗಳಿವೆ. ಹೀಗಿರುವಾಗ ಪ್ರೀತಿಸುವ ಹೃದಯಗಳೆರಡು ಸಮಾಜದಲ್ಲಿ ಸಮಾನವಾಗಿ ಬದುಕುವುದರಲ್ಲಿ ತಪ್ಪೇನು ? ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದರ ಹರಣವಾಗಬಾರದು ಅಷ್ಟೇ. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಅದನ್ನು ರಕ್ಷಿಸುವ ಹೆಸರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಲು ಶ್ರೀರಾಮಸೇನೆ ನಾಯಕರಿಗೆ ಯಾವ ನೈತಿಕ ಹಕ್ಕಿದೆ ?
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಮೂಲಭೂತ ಹಕ್ಕುಗಳಿವೆ. ಅವುಗಳನ್ನು ಈಗ ಈ ಭಟ್ಟಂಗಿಗಳು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಅನ್ಯ ಕೋಮಿನ ಹರೆಯದ ಯುವಕ ಯುವತಿಯರು ಒಟ್ಟುಗೂಡಿ ನಡೆದಾಡಿದರೆ ಅವರು ಪ್ರೇಮಿಗಳೇ ಇರಬೇಕು !? ಅವರ ನಡುವೆ ಅನೈತಿಕ ಸಂಬಂಧವೇ ಇರಬೇಕು !? ಎಂದು ಭಾವಿಸುವುದು. ಅವರ ಮೇಲೆ ಹಲ್ಲೆ ಮಾಡುವುದು ಸಂಸ್ಕೃತಿ ರಕ್ಷಣೆಯಾ...? ಈ ಸಮಾಜದಲ್ಲಿ ಜಾತಿ, ಧರ್ಮಗಳಾಚೆಗೆ ಸ್ನೇಹ, ಸೌಹಾರ್ಧತೆ, ಪ್ರೀತಿ, ಸಂಬಂಧಗಳು ಬೆಳೆಯಲೇಬಾರದೆ...? ಸಾಮರಸ್ಯ ಎಲ್ಲಿರುತ್ತದೋ ಅಲ್ಲಿ ಸಹಬಾಳ್ವೆ ಇದ್ದೆ ಇರುತ್ತದೆ. ಅದನ್ನು ನಾವು ಮೊದಲು ಅರಿಯಬೇಕು.
ಪಬ್‌ಗಳಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡುವುದು ತಪ್ಪು. ಹೀಗಿರುವಾಗ ಅದಕ್ಕೆ ಅನುಮತಿ ನೀಡುವುದಾದರೂ ಏಕೆ..? ಸರಕಾರಕ್ಕೆ ಬುದ್ದಿ ಇಲ್ಲವೇ ? ಅಲ್ಲಿರುವ ಸಚಿವರು, ಅಕಾರಿಗಳು ಬುದ್ದಿ ಹೀನರೆ..? ಕುಡಿತ ಕೂಡ ಆರೋಗ್ಯಕ್ಕೆ ಹಾನಿ. ಹೀಗಿರುವಾಗ ಗಲ್ಲಿಗೊಂದರಂತೆ ಬಾರ್‌ಗಳು, ರೆಸ್ಟೋರಂಟ್‌ಗಳು ತಲೆ ಎತ್ತಿರುವುದು ಯಾಕೆ..? ಅದು ಪುರುಷರು ಮಾಡಿದರೆ ತಪ್ಪು ಮಹಿಳೆಯರು ಮಾಡಿದರೆ ಅನೈತಿಕ, ಅಪಚಾರ... ಇದು ಯಾವ ರೀತಿಯ ಕಾನೂನು ?
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ಗೆ ಪ್ರೀತಿ ಅರ್ಥವೇ ಗೊತ್ತಿಲ್ಲ. ಅವನೊಬ್ಬ ಬ್ರಹ್ಮಚಾರಿ. ಹೀಗಿರುವಾಗ ಅದರ ಅರಿವೇ ಇಲ್ಲದೆ ಪ್ರೇಮಿಗಳ ದಿನವನ್ನು ನಿಷೇಸಿ, ಪ್ರೇಮಿಗಳು ಕಂಡರೆ ಮದುವೆ ಮಾಡಿಸುತ್ತೇವೆ ಎನ್ನುವ ಆತನಿಗೆ ಯಾವ ನೈತಿಕ ಹಕ್ಕಿದೆ ಎಂಬುದು ಆತನಿಗೇ ಗೊತ್ತಿಲ್ಲ. ಕಲ್ಲು ಬಂಡೆಯಂತಿರುವ ಪ್ರಮೋದ್ ಮೊದಲು ಧರ್ಮವನ್ನೂ ಮೀರಿ ನಡೆದುಕೊಳ್ಳುವುದನ್ನ, ಅನ್ಯ ಕೋಮಿನವರೊಡನೆ ಸಹಬಾಳ್ವೆಯಿಂದ ಬದುಕುವುದನ್ನು ಕಲಿಯಲಿ. ಅನಂತರ ಆ ವಿಚಾರದ ಬಗ್ಗೆ ಮಾತನಾಡಲಿ.
ಎಲ್ಲರ ಹೃದಯದಲ್ಲೂ ಅರಳಲೇಬೇಕಾದ ಕೋಮಲ ಹೂವು ಈ ಪ್ರೀತಿ. ಎಳೆಯ ಹೃಯದಲ್ಲಿ ಅದು ಅರಳಿದರೆ ಆ ವ್ಯಕ್ತಿ ಸರಿ ದಾರಿಯಲ್ಲಿ , ಮಾನವೀಯತೆಯಿಂದ ಬದುಕಲು ಸಾಧ್ಯ. ಬರೀ ದ್ವೇಷ, ಅಸೂಹೆ, ಧರ್ಮಾಂಧತೆಗಳನ್ನೇ ಮೈಗೂಡಿಸಿಕೊಂಡರೆ ಸಮಾಜಕ್ಕೆ ಒಂದು ‘ಕೆಟ್ಟ ಹುಳ ’ ಹುಟ್ಟಿಕೊಂಡಂತೆಯೇ. ಈಗ ಹೇಳಿ ಪ್ರೀತ್ಸೋದ್ ತಪ್ಪಾ ?
ಸಾರ್ವಜನಿಕರನ್ನು ಕೆಣಕಿದವರು ಈ ಸಮಾಜದಲ್ಲಿ ಯಾರೋಬ್ಬರೂ ನೆಟ್ಟಗೆ ಬದುಕಿದ ಇತಿಹಾಸವಿಲ್ಲ. ಪ್ರೇಮಿಗಳ ದಿನವಾದ ಫೆ.೧೪ರಂದು ಗಲಭೆ ಮಾಡಲು ಹೊರಡುವ ಶ್ರೀರಾಮ ಸೇನೆಯ ನಾಯಕರನ್ನು ಅದೇ ಯುವ ಸಮೂಹ ಚೆಡ್ಡಿ ಬಿಚ್ಚಿ ಪುಟಗೋಸಿಯಲ್ಲಿ ಕಳಿಸೀತು ! ಎಚ್ಚರವಿರಲಿ...

Monday, January 19, 2009

ಕನ್ನಡಿಗರೇ ಓಡೋಡಿ ಬನ್ನಿ

ಕಸ್ತೂರಿ ಕನ್ನಡಕೆ
ಕೊಡಲಿ ಪೆಟ್ಟು ಬಿದ್ದೈತೆ
ಹೃದಯದಾ ಮಾತು
ಮರೆಯಾಗಿ ಹೊಂಟೈತೆ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನೂರಾರು ವರ್ಷ ಆಳಿದಾ ಪರಕೀಯರು
ಮಾಡಲಿಲ್ಲ ಕನ್ನಡಕೆ ದ್ರೋಹ.
ಸ್ವಾತಂತ್ರ್ಯ ಬಂದ ಮರು ಕ್ಷಣವೆ
ಆಯ್ತು ಕನ್ನಡ ಛಿದ್ರ ಛಿದ್ರ
ವಿಚಿತ್ರ ಜನರಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನಗರದಲ್ಲಿ ನಿಂತು ನಗಾರಿ ಬಾರಿಸಿದ್ರೂ
ಕೇಳುವವರಿಲ್ಲ ಕನ್ನಡಾಂಬೆಯ ಗೋಳು
ರೈತರೇ ಬನ್ನಿ, ಕೂಲಿ ಕಾರ್ಮಿಕರೇ ಬನ್ನಿ ,
ಕೈಲಿರುವ ಸಲಕರಣೆಗಳ ಹೊತ್ತು ತನ್ನಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ತಿಳಿದವರೇ ತುಳಿದರು ಕನ್ನಡವನ್ನ
ಮೆರೆಸಿದರು ಒಟ್ಟುಗೂಡಿ ಇಂಗ್ಲಿಷನ್ನ
ಉಳಿಸಿ ಬೆಳೆಸೋಣ ಕನ್ನಡಾನ
ಹೊಡೆದೋಡಿಸೋಣ ಇಂಗ್ಲಿಷ್‌ನ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನುದಿನವೂ ನರಳುತಿದೆ
ಅನುಕ್ಷಣವೂ ಕೊರಗುತಿದೆ
ತಾಯಿ ಎದೆಹಾಲು
ಕುಡಿದು ಕಲಿತ ಕನ್ನಡ
ರಕ್ಷಣೆಗೆ ಬನ್ನಿ ಕನ್ನಡಿಗರೆ
ಓಡೋಡಿ ಬನ್ನಿ... ||

ಅರವತ್ತು ವರುಷ ಕಳೆದರೂ
ಕನ್ನಡಾಭಿಮಾನ ಬರಲಿಲ್ಲ
ಅನ್ಯ ಭಾಷೆಗೆ ಪಲ್ಲಂಗ ಹಾಸುವುದ ಬಿಡಲಿಲ್ಲ
ಅದಕೇ ಬಿತ್ತು ಕನ್ನಡ ಅಂಗಳದಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಹಿಂದೂ, ಮುಸ್ಲಿಂ ಎಂದು
ಹಿಂದು ಮುಂದು ನೋಡದಿರಿ
ಜಾತಿ ಭೇದಗಳ ಮರೆಯಲ್ಲಿ
ಕನ್ನಡಾಂಬೆಯ ಮರೆಯದಿರಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ ... ||

ತಾಯಿ ಎದೆ ಹಾಲುಂಡು
ಮೊಲೆ ಕೊಯ್ಯುವರಿಹರಿಲ್ಲಿ
ಅನ್ಯಳಾ ಉಬ್ಬಿದೆದೆಯನು ಕಂಡು
ಜೊಲ್ಲು ಸುರಿಸುವರಿಹರಿಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಭುವನೇಶ್ವರಿಯ ನಯನದಲಿ
ಸುರಿಯುತಿದೆ ರಕ್ತಕಣ್ಣೀರು
ತನ್ನ ಮಕ್ಕಳೇ ಇರಿದ
ಚೂರಿ ಉರಿಯಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನ್ಯ ಭಾಷೆಗಳ ವ್ಯಾಮೋಹ
ಹುಚ್ಚು ಹಿಡಿಸಿದೆ . ಆಹಾ...!
ಮುತ್ತುಕೊಡುವಳು ಬಂದಾಗ
ತುತ್ತು ಕೊಟ್ಟೋಳ ಮರೆಯೋದೆ ?
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

Sunday, January 18, 2009

ಬೇಲಿಯೇ ಎದ್ದು ‘ಹೊಲ’ ಮೇಯ್ದರೆ ಹೇಗೆ ?

ರೈತನ ಮಗ ಎಂದು ಹೇಳಿಕೊಂಡು ಅಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಯಡಿಯೂರಪ್ಪ ಗಾದಿಗೇರಿದ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಗೊಬ್ಬರದ ಹಾಹಾಕಾರ. ಅದರ ಬೆನ್ನಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್. ಬಿತ್ತನೆ ಬೀಜಕ್ಕಾಗಿ ಪರದಾಟ. ಜತೆಗೆ ಕೈಕೊಟ್ಟ ಮಳೆ, ಮುಗಿಲು ನೋಡುತ್ತಿದ್ದಂತೆ ಧೋ ಎಂದು ಸುರಿದ ವರುಣನ ಆರ್ಭಟ...
ಇವೆಲ್ಲಾ ಭೂಮಿತಾಯಿಯ ಚೊಚ್ಚಲ ಮಕ್ಕಳ ಸದ್ಯದ ಬವಣೆಗಳ ಪಟ್ಟಿ. ಭಾರತದ ಕೃಷಿ ಒಂದು ರೀತಿ ಮಳೆರಾಯನೊಂದಿಗಿನ ಜೂಜಾಟ ಎಂದು ಶತ ಶತಮಾನಗಳಿಂದಲೂ ನಾವು ಹೇಳಿಕೊಡು ಬಂದಿದ್ದೇವೆ. ಇಲ್ಲಿ ಶೇ.೭೦ ಮಂದಿ ಕೃಷಿಕರು. ಇಡೀ ದೇಶ ಅವಲಂಬಿಸಿರುವುದೇ ಅದನ್ನು. ರೈತ ಕೈ ಕಟ್ಟಿ ಕುಳಿತನೆಂದರೆ ದೇಶದ ಉದ್ದಗಲಕ್ಕೂ ನಾನಾ ವೃತ್ತಿಯಲ್ಲಿ ನಿರತರಾಗಿರುವವರ ಪಾಡು ಅಧೋಗತಿ. ಈಗ ನಾವೆಲ್ಲ ತಿನ್ನುತ್ತಿರುವುದು ಅದೇ ರೈತ ಬೆಳೆದ ಅನ್ನವನ್ನ.
ಪ್ರತಿ ಚುನಾವಣೆಗಳಲ್ಲೂ ಎಲ್ಲ ಪಕ್ಷಗಳ ಪ್ರಣಾಳಿಕೆಯ ಮೊದಲ ಸಾಲು ರೈತರ ಉದ್ಧಾರ. ಆದರೆ ಈ ದೇಶದಲ್ಲಿ ನಿತ್ಯ ಬಡವಾಗುತ್ತಿರುವವನು ಮಾತ್ರ ರೈತ. ರೈತ ಸಮುದಾಯಗಳಿಂದ ಬೆಳೆದು ಬಂದವರು ಕೂಡ ಒಂದು ಹಂತಕ್ಕೆ ಬಂದ ನಂತರ ಮತ್ತೆ ಹಿಂದೆ ತಿರುಗಿ ನೋಡುವುದೇ ಇಲ್ಲ. ತಾನು ನಡೆದು ಬಂದ ಹಾದಿಯಲ್ಲಿ ಕಾಲಿಗೆ ನಾಟಿದ ಕಲ್ಲು ಮುಳ್ಳುಗಳು ಈಗ ಲೆಕ್ಕಕ್ಕೇ ಇಲ್ಲ. ಯಾಕೆಂದರೆ ಗಾಯ ವಾಸಿಯಾಗಿರುತ್ತದೆ. ಅದರ ನೋವು ಮಾಯವಾಗಿರುತ್ತದೆ. ಕಲೆಗಳ ಕುರುಹುಗಳು ಕೂಡ ಸಿಗುವುದಿಲ್ಲ.
ಯಡಿಯೂರಪ್ಪನವರ ಸರಕಾರ ಅಕಾರಕ್ಕೆ ಬಂದ ಮೊದಲ ವಾರದಲ್ಲೇ ಖಾಸಗಿ ಏಜೆನ್ಸಿಗಳಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ವಿತರಿಸಲು ಅಕಾರ ಕೊಡಲಾಗಿತ್ತು. ಅದರ ಪರಿಣಾಮ ಇಡೀ ರಾಜ್ಯದಲ್ಲಿ ರೈತರು ಏಜೆನ್ಸಿಗಳ ಮುಂದೆ ನಿದ್ರೆ, ನೀರಡಿಕೆ ಬಿಟ್ಟು ಸಾಲು ಸಾಲಾಗಿ ನಿಂತಿದ್ದರು. ಕೊನೆಗೆ ಸಹನೆ ಕಳೆದುಕೊಂಡು, ರೊಚ್ಚಿಗೆದ್ದು ವಾಹನಗಳಿಗೆ ಬೆಂಕಿ ಹಚ್ಚಿ ರಾಜ್ಯದ ಉದ್ದಗಲಕ್ಕೂ ಗಲಭೆಗಳು ನಡೆದವು. ಅದನ್ನು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಈಗಾಗಲೇ ಮರೆತಂತ್ತಿವೆ.
ಅದಕ್ಕೇ ಈಗ ಕೃಷಿ ಪರಿಕರಗಳ ಸಹಾಯ ಧನವನ್ನು ರೈತರಿಗೆ ನೀಡುವುದಾಗಿ ಹೇಳಿದ್ದ ಸರಕಾರ ಈಗ ಏಜೆನ್ಸಿಗಳಿಗೆ ಹಾಗೂ ಪರಿಕರಗಳನ್ನು ತಯಾರಿಸುವ ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗುತ್ತಿದೆ. ಜತೆಗೆ ತಾಲೂಕು ಕೇಂದ್ರಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಣ್ಣು ಆರೋಗ್ಯ ಕೇಂದ್ರವನ್ನು ಶೇ.೫೦ರಷ್ಟು ಸಹಾಯಧನ ನೀಡಿ ಖಾಸಗಿ ಕಂಪನಿಗಳ ಉಸ್ತುವಾರಿಗೆ ವಹಿಸಲು ನಿರ್ಧರಿಸಲಾಗಿದೆ. ನಾನಾ ಇಲಾಖೆಯ ಕಾರ್ಮಿಕರನ್ನು ಖಾಸಗೀಕರಣವೆಂಬ ಕಪ್ಪು ಕೋಣೆಗೆ ತಳ್ಳಿ ಮಜಾ ತೆಗೆದುಕೊಂಡ ಸರಕಾರಗಳು ಈಗ ಕೃಷಿ ಇಲಾಖೆಯನ್ನೂ ಖಾಸಗೀಕರಣಗೊಳಿಸಲು ಸದ್ದಿಲ್ಲದೆ ಹುನ್ನಾರ ನಡೆಸುತ್ತಿವೆ.
ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲಿದೆ. ಇಲ್ಲಿ ಯಾವುದೇ ಒಂದು ಸರಕಾರವನ್ನು ದೂರುವಂತಿಲ್ಲ. ಖಾಸಗೀಕರಣಕ್ಕೆ ಈ ದೇಶ ಹಾಗೂ ರಾಜ್ಯದಲ್ಲಿ ಅದೆಷ್ಟು ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಎರಡೂ ಸರಕಾರಗಳ ಸಂಪುಟದಲ್ಲಿರುವ ಪ್ರತಿ ಮಂತ್ರಿ ಮಹೋದಯರಿಗೂ ಗೊತ್ತು. ಆದರೂ ಇವರೆಲ್ಲ ಜಾಣಕುರುಡು ಪ್ರದರ್ಶಿಸುತ್ತಿರುವುದು ಮಾತ್ರ ನಾಚಿಕೆಗೇಡು.
ಸರಕಾರಗಳ ಕೈಲಿ ಇರುವ ಇಲಾಖೆಯಿಂದಲೇ ಈಗಾಗಲೇ ದೇಶದ ಉದ್ದಗಲಕ್ಕೂ ರೈತರ ಶೋಷಣೆ ನಡೆಯುತ್ತಿದೆ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಇನ್ನು ಇಡೀ ಇಲಾಖೆಯನ್ನೇ ಹೊತ್ತುಕೊಂಡು ಹೋಗಿ ಖಾಸಗಿ ವ್ಯಕ್ತಿಗಳ ಕಪಿ ಮುಷ್ಟಿಗೆ ಒಡ್ಡಿದರೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಗ ಬಡ ರೈತರು ಮತ್ತೆ ತುತ್ತು ಕೂಳಿಗೂ ಪರಿತಪಿಸುತ್ತಾ ಜೀತ ಮಾಡಬೇಕಾಗುತ್ತದೆ ಎಚ್ಚರವಿರಲಿ.
ಸರಕಾರಗಳಿಂದಲೇ ವ್ಯವಸ್ಥಿತವಾಗಿ ಆಡಳಿತ ನಡೆಸಲಾಗದೆ ರೈತರಿಗೆ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ಗೊಬ್ಬರ ಪೂರೈಕೆ ಮಾಡಲಾಗದೆ ತೊಳಲಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಮಾಯಕ ರೈತರು ಭೂಮಿಯ ಒಡಲನ್ನು ನಂಬಿ ಸುರಿದ ಹಣ ಮತ್ತೆ ಕೈಗೆ ಬಾರದೆ ಬ್ಯಾಂಕ್, ಸಹಕಾರಿ ಸಂಘಗಳು ಹಾಗೂ ಕೆಲವು ದುಷ್ಟ ಶ್ರೀಮಂತರ ಕೈಲಿ ಸಾಲ ಮಾಡಿ ಶೂಲಕ್ಕೆ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ನೋವು ತಾಳಲಾರದೆ ನೇಣಿಗೆ ಕೊರಳೊಡುತ್ತಿದ್ದಾರೆ. ಕುಟುಂಬ ಸಮೇತರಾಗಿ ವಿಷ ಕುಡಿಯುತ್ತಿದ್ದಾರೆ. ಇಷ್ಟಾದರೂ ಅವರ ಬವಣೆ ನೀಗುತ್ತಿಲ್ಲ. ಇನ್ನು ಕೃಷಿ ಇಲಾಖೆಯನ್ನೇ ‘ಖಾಸಗೀಕರಣ’ದ ಸರಹದ್ದಿಗೆ ತಂದಿಟ್ಟರೆ ಅವರ ಗತಿ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ.
ಕೃಷಿಯಲ್ಲಿ ಈಗಾಗಲೇ ಯಾವುದೇ ಲಾಭವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿ ಯುವಕ ಯುವತಿಯರು ನಗರ ಪ್ರದೇಶಗಳಿಗೆ ವಲಸೆ ಬರಲಾರಂಭಿಸಿದ್ದಾರೆ. ಇದರಿಂದ ದಿನಕ್ಕೆ ೧೦೦ ರೂ. ಕೊಟ್ಟರೂ ಕೂಲಿ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲ. ಇದರಿಂದ ದಿನೇ ದಿನೆ ಆಹಾರ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಈ ಕಾರಣಕ್ಕಾಗಿ ದೇಶದ ಶೇ.೪೦ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ೧೦೦ ಮಿಲಿಯನ್ ಮಂದಿ ಹಸಿವಿನಿಂದ ಕೊನೆಯುಸಿರೆಳೆಯುತ್ತಿದ್ದಾರೆ.
ಭಾರತ ಕೂಡ ಈಗ ತೀವ್ರತರನಾದ ಆಹಾರ ಕೊರತೆಯ ಸಮಸ್ಯೆ ಎದುರಿಸುತ್ತಿದೆ. ೨೦೫೦ರೊಳಗೆ ಭಾರತ ವಿಶ್ವದ ಅತ್ಯಕ ಜನ ಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ. ಚೀನಾದಲ್ಲಿ ಈಗ ೧೧೮.೬ಕೋಟಿ ಜನಸಂಖ್ಯೆ ಇದೆ. ೨೦೫೦ಕ್ಕೆ ಅದು ೧೬೫.೮ಕೋಟಿಗೆ ತಲುಪಬಹುದು. ಆದರೆ ಭಾರತ ಅದನ್ನು ಮೀರಿ ಮುಂದೆ ಹೋಗುತ್ತದೆ ಎಂಬ ಆತಂಕ ಈಗಾಗಲೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದು ನಿಜವಾದರೆ ಆಹಾರ ಸಮಸ್ಯೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ.
ಜತೆಗೆ ಈಗಾಗಲೇ ಕೃಷಿ ಭೂಮಿಯನ್ನು ನಾನಾ ಕೈಗಾರಿಕೆಗಳು, ವಿತ್ತವಲಯ ಅದು ಇದು ಎಂದೆಲ್ಲಾ ಸ್ವಲ್ಪ ಸ್ವಲ್ಪ ನುಂಗಿ ನೀರು ಕುಡಿಯುತ್ತಿರುವ ಸರಕಾರಗಳಿಂದ ಮುಂದೊಂದು ದಿನ ರೈತರಿಗೆ ಕೃಷಿಗಾಗಿ ಭೂಮಿ ಸಿಗುವುದೇ ಕಷ್ಟ. ಹೀಗಿರುವಾಗ ಇರುವ ಕೃಷಿ ಇಲಾಖೆಯನ್ನೂ ಖಾಸಗೀಕರಣಗೊಳಿಸಿ ಕೈ ತೊಳೆದುಕೊಂಡರೆ ರೈತರ ಬದುಕು ಹೇಗಾಗಬಹುದು...?
ಸರಕಾರದ ಕೈಯಲ್ಲಿಯೇ ರೈತರ ಬದುಕನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅವರ ಏಳುಬೀಳುಗಳನ್ನು ಗಮನಿಸಿ ರೈತರನ್ನು ಖಾಸಗಿ ಕಂಪನಿಗಳಿಂದ ಮಾತ್ರವಲ್ಲ ಅವರ ಎಲ್ಲ ಸಂಕಷ್ಟಗಳಿಂದ ಕಾಪಾಡಬೇಕಾದದ್ದು ಸರಕಾರಗಳ ಕರ್ತವ್ಯ. ಹೀಗಿರುವಾಗ ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ನೀವೇ ಹೇಳಿ ?
rameshhirejambur@gmail.com

Thursday, January 15, 2009

ಮುಸ್ಲಿಂ ಉಗ್ರರು ಮತ್ತು ಹಿಂದೂ ಉಗ್ರರು...

ಭಯೋತ್ಪಾದನೆ ಎನ್ನುವುದನ್ನು ಮುಸ್ಲಿಮರು ಗುತ್ತಿಗೆ ಪಡೆದಿದ್ದಾರೆ ಎಂಬಂತೆ ಮಾತನಾಡುತ್ತಿದ್ದವರು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಸ್ವತಂತ್ರ ಭಾರತ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ನಡೆದ ಅನೇಕ ಬಾಂಬ್ ಸೋಟ ಪ್ರಕರಣಗಳಲ್ಲಿ ಬಹುತೇಕ ಭಾಗಿಯಾದವರು ಮುಸ್ಲಿಮರೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನೇ ನೆಪ ಮಾಡಿಕೊಂಡು ಇಡೀ ಸಮುದಾಯವನ್ನೇ ಅನುಮಾನದಿಂದ ನೋಡುವ ಪರಿಪಾಠ ಅದರಿಂದ ಬೆಳೆದಿತ್ತು. ಅದಕ್ಕೊಂದು ಹೊಸ ದಿಕ್ಕು ಈಗ ದೊರೆತಿದೆ...
ಮುಂಬಯಿ ಸರಣಿ ಸೋಟ, ಹೈದರಾಬಾದ್ ಸೋಟ, ಹೊಸದಿಲ್ಲಿ ಸೋಟ, ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಾಗ್ಗೆ ನಡೆಯುವ ಬಾಂಬ್ ದಾಳಿ, ಮುಂಬಯಿನಲ್ಲಿ ಇತ್ತೀಚೆಗಷ್ಟೇ ನಡೆದ ಪಾಕ್ ಉಗ್ರರ ರುದ್ರ ನರ್ತನಗಳನ್ನು ನೋಡಿದಾಗಲೆಲ್ಲ ನಮ್ಮ ನಡುವೆ ಹರಿದಾಡುತ್ತಿದ್ದ ಒಂದು ವಾಕ್ಯ ‘ ಇದೆಲ್ಲ ಮುಸ್ಲಿಮರದ್ದು ’. ದಾಳಿ ಮಾಡಿ ಅಮಾಯಕರ ಪ್ರಾಣಹರಣ ಮಾಡಿದ ಪಾಪಿಗಳನ್ನು ಬೊಟ್ಟು ಮಾಡಿ ತೋರಿಸುವ ಬದಲಾಗಿ ಆ ಕಳಂಕವನ್ನು ಇಡೀ ಆ ಸಮುದಾಯಕ್ಕೇ ಅಂಟಿಸಿ ಮಸಿ ಬಳಿಯಲಾಗುತ್ತಿದೆ.
ಇಂಥ ದಾಳಿಗಳಲ್ಲಿ ಕೊನೆಯುಸಿರೆಳೆಯುವವರು ಅಮಾಯಕ ಜನಸಾಮಾನ್ಯರು. ಆ ಸಾವು ನೋವಿನಲ್ಲೂ ಹಿಂದುಗಳಿದ್ದಾರೆ. ಮುಸ್ಲಿಮರಿದ್ದಾರೆ. ಕ್ರಿಶ್ಚಿಯನ್ನರಿದ್ದಾರೆ... ಅವರೆಲ್ಲಾ ಈ ಮೂಲಭೂತವಾದಿಗಳ ಕಣ್ಣಿಗೆ ಯಾಕೆ ಕಾಣುವುದಿಲ್ಲ ? ಇಲ್ಲಿಯ ವರೆಗೆ ಭಾರತದಲ್ಲಿ ಮುಸ್ಲಿಮ್ ಭಯೋತ್ಪಾದಕರ ಕೈಲಿ ೩ಸಾವಿರಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ನಿಜ. ಆದರೆ ಸದ್ದಿಲ್ಲದೆ ನಡೆಯುವ ಹಿಂದೂ ಉಗ್ರರ ಕೈಯಿಂದ ಅದೆಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಅದೆಷ್ಟು ಮಹಿಳೆಯರ ಹಣೆಯ ಕುಂಕುಮ ಅಳಿಸಿದೆ. ಅದೆಷ್ಟು ಮಕ್ಕಳು ಅನಾಥರಾಗಿದ್ದಾರೆ ಎಂಬುದನ್ನು ಇಂಥ ಮೂಲಭೂತವಾದಿಗಳು ಮಾತ್ರ ನೋಡುವುದೇ ಇಲ್ಲ.
೧೯೪೭ರಲ್ಲಿ ನಡೆದ ಧಾರ್ಮಿಕ ಕಲಹದಲ್ಲಿ ಸಾವಿರಾರು ಮಂದಿಯ ಹತ್ಯೆಯಾಯಿತು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಎಷ್ಟು ಎಂಬುದು ಇಡೀ ದೇಶಕ್ಕೆ ಗೊತ್ತು. ಗುಜರಾತ್‌ನಲ್ಲಿ ನಡೆದ ನರಮೇಧ ಇಂದಿಗೂ ಕಣ್ಣಿಗೆ ಕಟ್ಟುತ್ತದೆ. ಅದರ ನಡುವೆ ಈ ಹಿಂದು ಉಗ್ರರು ಸದ್ದಿಲ್ಲದೆ ನಡೆಸುವ ದಾಂಧಲೆಗಳು, ಕೋಮು ಸಂಘರ್ಷಗಳಿಂದ ಬಳಲುವ ಜೀವಗಳ ಸಂಖ್ಯೆಯ ಲೆಕ್ಕವೇ ಸಿಗುವುದಿಲ್ಲ.
ಮುಸ್ಲಿಮರಂತೆ ಈಗ ಬಾಂಬ್ ಅಟ್ಯಾಕ್‌ಗಳಲ್ಲಿ ಹಿಂದೂಗಳೂ ತೊಡಗುತ್ತಿದ್ದಾರೆ ! ಮಹಾತ್ಮ ಗಾಂಜಿಯ ಹತ್ಯೆಯ ಹಿಂದೆ ಕೂಡ ಇಂಥ ಉಗ್ರ ಹಿಂದೂ ಕ್ರಾಂತಿಕಾರಿಗಳ ಕೈವಾಡವಿರುವುದು ಆಗಲೇ ಸಾಬೀತಾಗಿತ್ತು. ೧೯೮೦ರಲ್ಲಿ ಭಾರತದಲ್ಲಿ ಹಿಂದೂ ಮೂಲಭೂತವಾದಕ್ಕೆ ಉತ್ತೇಜನ ನೀಡಿದಾಗಿನಿಂದಂತೂ ಈ ಮೂಲಭೂತವಾದಿಗಳ ಅಟ್ಟಹಾಸ ಎಲ್ಲೆ ಮೀರಿದೆ. ಮಲೆಗಾಂವ್ ಸೋಟಕ್ಕೂ ಮುನ್ನ ಈ ಹಿಂದು ಉಗ್ರರು ಅಭಿನವ ಭಾರತ ಸಂಘಟನೆಯ ಮೂಲಕ ಅನೇಕ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಿದ್ದಾರೆ ಎಂಬುದನ್ನು ದಿವಂಗತ, ದಿಟ್ಟ ಪೊಲೀಸ್ ಅಕಾರಿ ಹೇಮಂತ್ ಕರ್ಕರೆ ಪತ್ತೆ ಹಚ್ಚಿ ಹೋಗಿದ್ದಾರೆ.
ಪಾಕಿಸ್ತಾನ ಹಾಗೂ ಭಾರತದ ನಡುವೆ ಉತ್ತಮ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಹೊಸದಿಲ್ಲಿ -ಲಾಹೋರ್ ನಡುವೆ ಸಂಚರಿಸುತ್ತ ಮಹತ್ವದ ಪಾತ್ರ ವಹಿಸಿದ್ದ ಸಂಜೌತಾ ಎಕ್ಸ್‌ಪ್ರೆಸ್ ಅನ್ನು ೨೦೦೭ರ ಫೆಬ್ರವರಿಯಲ್ಲಿ ಸೋಟಿಸಿ, ೬೮ ಮಂದಿಯನ್ನು ಕೊಲ್ಲುವ ಮೂಲಕ ಮುಸ್ಲಿಮರ ಮೇಲೆ ಹಿಂದು ಉಗ್ರರು ಸೇಡು ತೀರಿಸಿಕೊಂಡಿದ್ದಾರೆ. ಇದುವರೆಗೆ ಹಿಂದು ಉಗ್ರರು ಕೇವಲ ಮುಸ್ಲಿಮ್ ಪ್ರದೇಶಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ ಎಂಬುದನ್ನು ದಿ.ಹೇಮಂತ್ ಕರ್ಕರೆ ತಾವು ಕೊನೆಯುಸಿರೆಳೆಯುವ ಹಿಂದಿನ ದಿನ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಲ್ಲದೇ ‘ಹಿಂದು ಉಗ್ರರು ಇನ್ನೂ ಅನೇಕ ಕಡೆ ದಾಳಿ ಮಾಡಿದ್ದಾರೆ. ಈ ಜಾಲದಲ್ಲಿ ದೊಡ್ಡ ದೊಡ್ಡ ‘ಕೈಗಳು’ ಇವೆ. ಅದಕ್ಕೆ ನನ್ನ ಬಳಿ ಸಾಕಷ್ಟು ಸಾಕ್ಷಿಗಳೂ ಇವೆ ’. ಎಂದಿದ್ದರು. ಆದರೆ ದುರಂತವೆಂದರೆ ಮುಂಬಯಿಯಲ್ಲಿ ಅವರು ಉಗ್ರರ ಕೈಯಲ್ಲಿಯೇ ಹತರಾದರು.
ಇಲ್ಲಿ ಒಂದು ಸಮುದಾಯವನ್ನು ಎತ್ತಿಕಟ್ಟುವುದು, ಮತ್ತೊಂದು ಸಮುದಾಯವನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ಒಳಿತು ಕೆಡುಕುಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು. ಅವು ಪ್ರತಿಯೊಬ್ಬ ಮನುಷ್ಯನಲ್ಲೂ ಇವೆ. ಆದರೆ ಇಲ್ಲಿ ಕೆಟ್ಟ ಗುಣ ಹಾವಾಗಿ ಹೊರಬರುವುದು ಯಾರಲ್ಲಿ ಹೆಚ್ಚೋ ಅವನು ಕೆಟ್ಟವ ಎಂದು ನಾವು ನಿರ್ಧರಿಸಬೇಕು. ಅಂಥ ವ್ಯಕ್ತಿಯನ್ನು ಕಾನೂನು ಪ್ರಕಾರ ದಂಡನೆಗೆ ಗುರಿಪಡಿಸಬೇಕು.
ಒಳ್ಳೆಯ ಕಾರ್ಯಗಳು ಅದು ಎಲ್ಲಿಯೇ ಆಗಲಿ, ಯಾವುದೇ ಸಮುದಾಯದಲ್ಲಾಗಲಿ ಅದನ್ನು ಪುರಸ್ಕರಿಸಬೇಕು. ಅಂಥ ಮನೋಭಾವ ನಮ್ಮಲ್ಲೇ ಒಡಮೂಡಬೇಕು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಮುಸ್ಲಿಂ ಭಯೋತ್ಪಾದನೆ ಸಂಘಟನೆಗಳಿಗೆ ಪ್ರತಿಯಾಗಿ ಹಿಂದೂ ಸಂಘಟನೆಗಳೂ ಉಗ್ರವಾದಿ ಚಟುವಟಿಕೆಯಲ್ಲಿ ತೊಡಗಿವೆ. ಅದಕ್ಕೆ ಮಹಾರಾಷ್ಟ್ರದ ಮಲೆಗಾಂವ್ ಸೋಟ ಹಾಗೂ ಸಂಜೌತಾ ಎಕ್ಸ್‌ಪ್ರೆಸ್ ಸೋಟ ಪ್ರಕರಣಗಳೇ ಪ್ರತ್ಯಕ್ಷ ನಿದರ್ಶನ.
ಮಲೆಗಾಂವ್ ಸೋಟಕ್ಕೆ ಸಂಬಂಸಿದಂತೆ ಈಗಾಗಲೇ ಜಮ್ಮುವಿನ ಸರ್ವಜ್ಞ ಪೀಠದ ಮಠಾಪತಿ ದಯಾನಂದ ಪಾಂಡೆಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಂಸಲಾಗಿದೆ. ಮುಂಬಯಿ ಉಗ್ರ ನಿಗ್ರಹ ದಳದ ( ಎಟಿಎಸ್) ಕೈಗೆ ಆತನ ಸಹಚರ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಆತನ ಮಗ ಸಿಕ್ಕಿ ಬಿದ್ದಿದ್ದಾರೆ. ಸೇನಾಕಾರಿ ಕರ್ನಲ್ ಪುರೋಹಿತ್ ಹಾಗೂ ಸ್ವಾ ಪ್ರeಸಿಂಗ್ ಠಾಕೂರ್ ಸೇರಿ ೧೦ ಮಂದಿ ಪ್ರಮುಖ ಆರೋಪಿಗಳನ್ನು ಉಗ್ರ ನಿಗ್ರಹ ದಳ ಸೆರೆ ಹಿಡಿದಿದೆ. ಇವರೆಲ್ಲಾ ಹಿಂದೂ ಉಗ್ರವಾದಿಗಳು.
ಹಿಂಸೆ ಯಾರು ಮಾಡಿದರೂ ಹಿಂಸೆಯೇ. ನೋವು ನೀಡುವುದೇ ಅದರ ಗುಣ. ಕತ್ತಿ ಅಥವಾ ಗುಂಡು ಮನುಷ್ಯನ ದೇಹದೊಳಗೆ ತೂರಿದರೆ ಹರಿಯುವುದು ರಕ್ತವೆ. ರಕ್ತ ಸುರಿಸಿ ಪ್ರಾಣ ಕಿತ್ತುಕೊಳ್ಳುವುದೊಂದೇ ಅದರ ಸ್ವಭಾವ. ಆದರೆ ಅದಕ್ಕೆ ಜಾತಿ, ಧರ್ಮಗಳ ಬಣ್ಣ ಕಟ್ಟುವುದು ಸರಿಯಲ್ಲ.
ತಾವೇ ಕಟ್ಟಾ ಹಿಂದೂವಾದಿಗಳು ಎಂದು ಭಗವದ್ಗೀತೆ ಹಿಡಿದು ಪ್ರದರ್ಶನ ಮಾಡುವ , ಕುರಾನ್ ಹಿಡಿದು ಇದೇ ನಿಜವಾದ ಧರ್ಮ ಎಂದು ಬೊಬ್ಬೆ ಹೊಡೆದು ಎಲ್ಲೆಡೆ ರಕ್ತ ಚೆಲ್ಲುವ ಉಭಯ ಮೂಲಭೂತವಾದಿಗಳಿಂದ ಈ ಸಮಾಜಕ್ಕೆ ಯಾವುದೇ ಲಾಭಗಳಿಲ್ಲ. ಅವರಿಂದ ನಷ್ಟವೇ ಹೆಚ್ಚು. ಇದನ್ನು ಜನಸಾಮಾನ್ಯರು ಮೊದಲು ಅರ್ಥ ಮಾಡಿಕೊಳ್ಳಬೇಕು.
ಪಾಕಿಸ್ತಾನ ಕೂಡ ಇದೇ ರೀತಿ ಭಯೋತ್ಪಾದಕರಿಗೆ ಧಾರ್ಮಿಕ ಬಣ್ಣ ಕಟ್ಟಿ ಮುಂದೆ ಬಿಟ್ಟು ‘ಕೂಳು’ ಹಾಕಿ ಬೆಳೆಸಿತು. ಅದರ ಪರಿಣಾಮ ಈಗ ಅದೇ ಸಮುದಾಯದ ಜನರನ್ನೇ ಅದು ಆಗಾಗ್ಗೆ ಬಲಿ ತೆಗೆದುಕೊಳ್ಳುತ್ತಿದೆ. ಅದರ ಪರಿಣಾಮವಾಗಿಯೇ ಪಾಕ್‌ನಲ್ಲಿ ಹೆಸರಾಂತ ರಾಷ್ಟ್ರೀಯ ನಾಯಕಿ, ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಹತ್ಯೆಯಾಗಿದ್ದು !!
ಒಂದು ಕಡೆ ಮೂಲಭೂತವಾದಿಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಸ್ಕೃತಿ, ಮತ್ತೊಂದೆಡೆ ಭಯೋತ್ಪಾದನೆ ಹೆಸರಿನಲ್ಲಿ ಧರ್ಮ ಸ್ಥಾಪನೆಯ ಹೊಸ ಕಲ್ಪನೆ. ಇವೆರಡೂ ಸಮಾಜಕ್ಕೆ ಮಾರಕ. ಈ ಎರಡೂ ಸಂಸ್ಕೃತಿ ಭಾರತ ಮತ್ತು ಪಾಕ್ ಎರಡರಲ್ಲೂ ಇದೆ. ಇದರಿಂದ ದೇಶಕ್ಕೆ ಒಳ್ಳೆಯದಲ್ಲ ಎಂಬುದು ಈಗಾಗಲೇ ಪಾಕ್‌ನಲ್ಲಿ ಸಾಬೀತಾಗಿದೆ. ಈ ವಿಚಾರದಲ್ಲಿ ಭಾರತ ಇನ್ನೂ ಅಂಬೆಗಾಲಿಡುತ್ತಿದೆ. ಪಾಕ್ ಬೆಳೆಸಿದ ಭಯೋತ್ಪಾದನೆ ಎಂಬ ಕಳಂಕಿತ ಕೂಸು ಈಗ ಬೆಳೆದು ದೊಡ್ಡವನಾಗಿ ತಮ್ಮ ಮನೆ ಮಾತ್ರವಲ್ಲ ನೆರೆ ಹೊರೆಯ ಮನೆಗಳನ್ನು ಧ್ವಂಸಗೊಳಿಸುತ್ತಿದ್ದಾನೆ. ಅದೇ ಕೆಲಸವನ್ನು ಭಾರತ ಮಾಡದಿರಲಿ.
ಭಯೋತ್ಪಾದನೆಯನ್ನು ಕೇವಲ ಮುಸ್ಲಿಮರಷ್ಟೇ ಗುತ್ತಿಗೆ ಪಡೆದಿಲ್ಲ. ಅಲ್ಲಿ ಹಿಂದೂ ಮೂಲಭೂತವಾದಿಗಳು ಇದ್ದಾರೆ. ಯಾವುದೇ ಧರ್ಮ ಹಿಂಸೆಯನ್ನು ಬೋಸಿಲ್ಲ, ಪ್ರಚೋದಿಸಿಲ್ಲ. ಆದರೆ ಅದನ್ನು ಸರಿಯಾಗಿ ಅರಿಯದವರು ಹೀಗೆ ಧರ್ಮಗಳ ಹೆಸರಿನಲ್ಲಿ ರಕ್ತ ಚೆಲ್ಲಲು ಮುಂದಾಗಿದ್ದಾರೆ ಅಷ್ಟೆ...
ಇಂಥ ಹೇಯ ಕೃತ್ಯಗಳನ್ನು ನಡೆಸುವವರನ್ನು ಹಿಡಿದು ಅವರ ನರ ನಾಡಿಗಳನ್ನು ಬಿಚ್ಚಬೇಕೆ ಹೊರತು, ಅದಕ್ಕೆ ಧಾರ್ಮಿಕ ಬಣ್ಣ ಲೇಪನ ಮಾಡಿ ಸಮಾಜದಲ್ಲಿ ಮತ್ತಷ್ಟು ಕ್ಷೋಭೆ, ಕಲಹಗಳನ್ನು ಹುಟ್ಟು ಹಾಕಿ ಶಾಂತಿ ಕದಡುವ ದುಷ್ಟ ಕೆಲಸಕ್ಕೆ ಕೈ ಹಾಕಬಾರದು. ಇದು ನೆನಪಿರಲಿ..

Wednesday, December 24, 2008

ಚೀನಾಗೆ ರಾಜಕಾರಣಿಗಳ ಜಾಲಿ ರೈಡ್!


ಚೀನಾಗೆ ರಾಜಕಾರಣಿಗಳ ಜಾಲಿ ರೈಡ್!
ಬಿಜೆಪಿ ಕಾರ್ಯಕರ್ತರಿಗೆ, ಪುಡಾರಿ ರಾಜಕಾರಣಿಗಳಿಗೆ ಇದೀಗ ಸುಗ್ಗಿ. ಅಕಾರ ವಹಿಸಿಕೊಂಡ ಆರೇ ತಿಂಗಳಲ್ಲಿ ಮೂರು ಬಾರಿ ವಿದೇಶ ಪ್ರಯಾಣ ಮಾಡಿ ಜತೆಗೆ ಡಾಕ್ಟರೇಟ್ ದೋಚಿಕೊಂಡು ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ತಮ್ಮ ಕಾರ್ಯಕರ್ತರಿಗೂ ವಿದೇಶ ಪ್ರಯಾಣದ ರುಚಿ ತೋರಿಸಲು ಅಣಿಯಾಗಿದ್ದಾರೆ.
ಆರಂಭದಿಂದ ಇಲ್ಲಿಯವರೆಗೆ ಕೇವಲ ರೈತರ ಹೆಸರಿನಲ್ಲೆ ರಾಜಕೀಯ ಬೇಳೆ ಬೇಯಿಸಿಕೊಂಡು ಬಂದ ಯಡಿಯೂರಪ್ಪ ಈಗಲೂ ರೈತರ ಹೆಸರಿನಲ್ಲಿಯೇ ವಂಚನೆಗೆ ಇಳಿದಿದ್ದಾರೆ. ನಿಜಕ್ಕೂ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಎನ್ನುವುದಿದ್ದರೆ, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಅದನ್ನು ಇಲ್ಲಿ ಕಾರ್ಯಗತ ಮಾಡಿ ತೋರಿಸಬಹುದಿತ್ತು. ಅದಕ್ಕೆ ಆರು ತಿಂಗಳು ಬೇಕಿರಲಿಲ್ಲ. ಕೈಲಿ ಅಕಾರ ಇರುವಾಗ ಕೇವಲ ಒಂದು ದಿನ ಸಾಕಿತ್ತು .
ಆದರೆ ಅಸಲಿಗೆ ಯಡಿಯೂರಪ್ಪನವರಿಗೆ ಆಗಬೇಕಿರುವುದು ರೈತರ ಉದ್ಧಾರವಲ್ಲ. ಅವರ ಹೆಸರಿನಲ್ಲಿ ತಮ್ಮ ಬೇಳೆ ಬೇಯ್ಯಬೇಕಷ್ಟೆ . ಭಾರತದ ಕೃಷಿಗೆ ಪುರಾತನ ಹಿನ್ನೆಲೆ ಇದೆ. ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ಕುತಂತ್ರಕ್ಕೆ ಬಲಿಯಾಗಿ ಈಗ ಇಡೀ ದೇಶದ ಕೃಷಿ ಪದ್ಧತಿ ಹಳ್ಳ ಹತ್ತಿದೆ. ರೈತರು ಕುಟುಂಬ ಸಮೇತ ಬೀದಿಗೆ ಬಿದ್ದಿದ್ದಾರೆ. ತಾವೇ ಬೆಳೆದ ಬೀಜಗಳನ್ನು ಬಿತ್ತನೆಗೆ ಇಟ್ಟುಕೊಂಡು, ಉಳಿದವನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ರೈತರ ಜೀವನ ಶೈಲಿ ಈಗ ಅದೇ ಚೀನಾ, ಅಮೆರಿಕ, ರಷ್ಯಾ, ಇಟಲಿಯಂತ ರಾಷ್ಟ್ರಗಳ ಕೈಗೆ ಸಿಕ್ಕಿ ನುಚ್ಚು ನೂರಾಗಿದೆ.
ಅಲ್ಲಿನ ಬುಹು ರಾಷ್ಟ್ರೀಯ ಕಂಪೆನಿಗಳು ಹೂಡಿದ ತಂತ್ರಕ್ಕೆ ಇಲ್ಲಿನ ಅಮಾಯಕ ರೈತರು ಮಾರು ಹೋಗಿ ಈಗ ತಾವೇ ಬೆಳೆದ ಬೆಳೆ ತಮಗೇ ತಿನ್ನಲು ಸಿಗುತ್ತಿಲ್ಲ. ಪ್ರತೀವರ್ಷ ಬಹುರಾಷ್ಟ್ರೀಯ ಕಂಪೆನಿಗಳು ತಯಾರಿಸಿದ ಕೆಮಿಕಲ್‌ಯುಕ್ತ ಬೀಜಗಳನ್ನು ಬಿತ್ತಿ ಬೆಳೆ ತೆಗೆಯಬೇಕಿದೆ.
ಕ್ಷಮಿಸಿ, ಈ ಬೀಜಗಳನ್ನು ಕೇವಲ ಬಿತ್ತಿದ ಮಾತ್ರಕ್ಕೆ, ಸರಿಯಾಗಿ ನೀರು ಉಣಿಸಿದ ಮಾತ್ರಕ್ಕೆ ಬೆಳೆ ಬಂದು ಬಿಡುವುದಿಲ್ಲ. ಅದಕ್ಕೆ ಅದೇ ರಾಷ್ಟ್ರಗಳು ತಯಾರಿಸುವ ಗೊಬ್ಬರ ಹಾಕಬೇಕು. ಔಷಧ ಸಿಂಪಡಿಸಬೇಕು ! ಅಬ್ಬಾ ಎಂಥ ಭಯಾನಕ ಕುತಂತ್ರ...?
ನಮ್ಮದೇ ಬೀಜಗಳನ್ನು ಇಪ್ಪತ್ತು ವರ್ಷಗಳ ಹಿಂದೆ ಆಮದು ಮಾಡಿಕೊಳ್ಳುತ್ತಿದ್ದ ಅನ್ಯ ದೇಶಗಳ ಕಂಪೆನಿಗಳು ಈಗ ಅದೇ ಬೀಜಗಳನ್ನು ಇಲ್ಲಿಗೆ ದುಪ್ಪಟ್ಟು ಹಣಕ್ಕೆ ರವಾನೆ ಮಾಡುತ್ತಿವೆ. ಕೇವಲ ಹತ್ತು ವರ್ಷದಲ್ಲಿ ಇಡೀ ನಮ್ಮ ನೆಲ ಬಂಜರಾಗಿ, ಯಾವುದೇ ಬೀಜವನ್ನು ಬಿತ್ತಿದರೂ ಅದಕ್ಕೆ ರಸಗೊಬ್ಬರ ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿವೆ.
ಇದಕ್ಕೆಲ್ಲಾ ಇಲ್ಲಿನ ಮಾನಗೆಟ್ಟ ಸರಕಾರಗಳೇ ಕಾರಣ. ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರ ದಿಕ್ಕು ತಪ್ಪಿಸಿದ್ದ ಸರಕಾರಗಳು ಈಗ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಯಡಿಯೂರಪ್ಪ ಈಗ ಮಾಡುತ್ತಿರುವುದು ಅದನ್ನೇ. ಆದರೆ ಸ್ವಲ್ಪ ಡಿಫರೆಂಟ್. ಹಿಂದಿನ ಸರಕಾರಗಳು ರಾತ್ರಿ ದರೋಡೆ ಮಾಡಿದರೆ, ಯಡಿಯೂರಪ್ಪ ಹಗಲು ದರೋಡೆಗೆ ಇಳಿದಿದ್ದಾರೆ ಅಷ್ಟೆ .
ಚೀನಾದ ನೆಲದಲ್ಲಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಅಲ್ಲಿನ ರೈತರು ಬೆಳೆಯುವ ಕೃಷಿ ಪದ್ಧತಿಯನ್ನು ಇಲ್ಲಿನ ರೈತರಿಗೆ ತೋರಿಸುವುದಾಗಿ ಹೇಳಿ ರೈತರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಈ ಯೋಜನೆ ರೂಪಿಸುವ ಮುಂಚೆ ಯಡಿಯೂರಪ್ಪ ಕಿಂಚಿತ್ತಾದರೂ ಯೋಚಿಸಬಹುದಿತ್ತು. ನಿಜಕ್ಕೂ ಯಡ್ಡಿ ರೈತನ ಮಗನಾಗಿದ್ದರೆ ಅದು ಗೊತ್ತಾಗುತ್ತಿತ್ತು. ಇಲ್ಲಿನ ಪರಿಸರದ ಕೃಷಿಗೂ ಅಲ್ಲಿನ ಕೃಷಿ ಪದ್ಧತಿಗೂ ಅಜಗಜಾಂತರ ವ್ಯತ್ಯಾಸವಿದೆ !
ಯಡಿಯೂರಪ್ಪ ರೈತನ ಮಗ(!?). ಬಹುಶಃ ಅದು ಅವರಿಗೂ ಗೊತ್ತಿರಬಹುದು. ಅದಕ್ಕೇ ಅವರು ರೈತರ ಹೆಸರಿನಲ್ಲಿ ಬಿಜೆಪಿ ಮುಖಂಡರನ್ನು , ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದ ರಾಜಕಾರಣಿಗಳು, ಕಾರ್ಯಕರ್ತರನ್ನು ಕರೆದುಕೊಂಡು ಚೀನಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅದು ಮೋಜು, ಮಸ್ತಿಗಾಗಿ.
ರಾಜಕೀಯ ಗಿಮಿಕ್ಕು :
ಈ ಕಾರ್ಯಕರ್ತರಲ್ಲಿ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರ ಇಲ್ಲ. ಎಲ್ಲ ಪಕ್ಷಗಳ ಕಾರ್ಯಕರ್ತರೂ ಇದ್ದಾರೆ! ಆದರೆ ಒಬ್ಬನೇ ಒಬ್ಬ ನಿಜವಾದ ರೈತನೂ ಇಲ್ಲ. ಈಗಿನ ವಿಧಾನಸಭೆ ಮರು ಚುನಾವಣೆ ಹಾಗೂ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಯಡಿಯೂರಪ್ಪ ಈ ಪ್ರವಾಸಕ್ಕೆ ಕೈ ಹಾಕಿದ್ದಾರೆ.
ಶಾಸಕರನ್ನು ಈಗಾಗಲೇ ಖರೀದಿಸುವ ಮೂಲಕ ತಮ್ಮ ಕಡೆ ಸೆಳೆದುಕೊಂಡಿರುವ ಯಡಿಯೂರಪ್ಪ, ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಆಸೆ ಆಮಿಷಗಳ ಮೂಲಕ ತಮ್ಮತ್ತ ಎಳೆದುಕೊಳ್ಳಲು ಈ ಕುತಂತ್ರ ಮಾಡಿದ್ದಾರೆ. ಚೀನಾದ ನೆಲದಲ್ಲಿ ಇಲ್ಲಿನ ಪಡ್ಡೆ ರಾಜಕಾರಣಿಗಳಿಗೆ ಮೋಜು ಮಾಡಿಸಲು ಈ ಪ್ರವಾಸ... ಇದು ಒಂದು ರೀತಿ ಹಿಂದಿನ ‘ರೆಸಾರ್ಟ್ ರಾಜಕಾರಣ’ದಂತೆ ‘ಜಾಲಿರೈಡ್ ರಾಜಕಾರಣ’. ಪಾಪ , ಅದು ನಮ್ಮ ಬಡ ರೈತರಿಗೆ ಎಲ್ಲಿಂದ ಅರ್ಥವಾಗಬೇಕು...? ಏನೆ ಆಗಲಿ ಯಡ್ಡಿ ನಿಜಕ್ಕೂ ಬುದ್ದಿಶಾಲಿ ಬಿಡಿ.
Powered By Blogger