Thursday, September 10, 2009

ಪುಸ್ತಕ ಪ್ರೀತಿ ಸಾರಿದ ಮದುವೆ

ಸಾಮಾನ್ಯವಾಗಿ ಮದುವೆಎಂಬ ಮಧುರ ಪದ ಕೇಳುತ್ತಿದ್ದ ಹಾಗೆಯೇ ಬಹಳಷ್ಟು ಜನರ ಮೈ ರೋಮಾಂಚನಗೊಳ್ಳುತ್ತದೆ. ಮತ್ತೆ ಕೆಲಸವರ ಮನ ಮುಂಜಾನೆಯ ಮಂಜಿನ ಹಾಗೆ ತಂಪಾಗುತ್ತದೆ. ಮತ್ತೆ ಕೆಲವರಿಗೆ ಕನಸುಗಳು ಗರಿಗೆದರುತ್ತವೆ. ಮನಸಿನ ಹಾಸಿಗೆಯಲ್ಲಿ ಹೂಮಳೆ ಚೆಲ್ಲುತ್ತದೆ. ಹೀಗೆ ಒಬ್ಬೊಬ್ಬರ ಮನದಲ್ಲು ಒಂದೊಂದು ಭಾವನಾ ಲಹರಿ ಪಾರಿಜಾತವಾಗಿ ಹಾರಾಡುತ್ತದೆ.
ಆದರೆ ಮದುವೆ ಜೀವನದ ಒಂದು ಮಧುರ ಕ್ಷಣ ನಿಜ, ಆದರೆ ಅದು ಆಡಂಭರವಾಗಿಯೇ ಇರಬೇಕು ಎಂದು ಬಹಳಷ್ಟು ಜನ ಇಷ್ಟಪಡುತ್ತಾರೆ. ಮದುವೆಗೆ ಬಂದವರಿಗೆ ಒಳ್ಳೊಳ್ಳೆ ಉಡುಗೊರೆ ಕೊಡಬೇಕು ಎಂದು ಸಾಮಾನ್ಯ ವರ್ಗದವರೂ ಅಂದುಕೊಳ್ಳುವುದು ಸಾಮಾನ್ಯ. ಇನ್ನು ಉಳ್ಳವರಂತೂ ಅದೇ ತಮ್ಮ ಶ್ರೀಮಂತಿಕೆಯ ತೋರಿಕೆಗೆ ‘ಸಾಕ್ಷಿ’ಯಾಗಲಿ ಎಂದುಕೊಳ್ಳುತ್ತಾರೆ.
ಜೀವನದ ಆ ಸುಮಧುರ ಗಳಿಗೆಯನ್ನು ಜೀವನ ಪೂರ್ತಿ ತಾವು ಮಾತ್ರವಲ್ಲ, ಇತರರೂ ನೆನಪಿನಲ್ಲಿಟ್ಟುಕೊಂಡು ಬದುಕುವಂತೆ ಸ್ಪೂರ್ತಿ ನೀಡುವ ಮಂದಿ ಬಹಳ ವಿರಳ. ಅಂಥವರ ಸಾಲಿನಲ್ಲಿದ್ದಾರೆ ಸ್ನೇಹಿತ ಕೆ.ವಿ.ಧರಣೇಶ್. ಸದ್ಯಕ್ಕಿವರು ‘ವಿಜಯ ಕರ್ನಾಟಕ’ದಲ್ಲಿ ಪೇಜಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಹಾಗೇ ಸುಮ್ಮನೆ ಕೈಗೆ ಸಿಕ್ಕ ಒಂದು ಚಿಕ್ಕ ಹೊತ್ತಿಗೆಯನ್ನು ಕಣ್ಣಾಯಿಸಿದಾಗ ನಿಜಕ್ಕೂ ಆಶ್ಚರ್ಯ ! ಆ ಕಾರಣಕ್ಕಾಗಿಯೇ ಸುಮಾರು ೯ ವರ್ಷಗಳ ಹಿಂದಿನ ಘಟನೆಯೊಂದನ್ನು ಇಲ್ಲಿ ಮೆಲುಕು ಹಾಕುತ್ತಿದ್ದೇನೆ.
ನನ್ನ ಕೈಗೆ ಸಿಕ್ಕ ಆ ಕಿರು ಹೊತ್ತಿಗೆಯ ಹೆಸರು ವಚನ ತಾಂಬೂಲ". ಮದುವೆಗೆ ಬರುವ ಎಲ್ಲರಿಗೂ ಸಾಮಾನ್ಯವಾಗಿ ಅಡಕೆ, ಎಲೆ, ಸುಣ್ಣ ಅಥವಾ ಒಂದು ಕಾಯಿಯನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಇದು ಸಾಮಾನ್ಯ ವರ್ಗದ ಕುಟುಂಬಗಳ ಕಾರ್ಯವೈಖರಿ. ಆದರೆ ಶ್ರೀಮಂತರ ಮಾತು ಬೇರೆ ಬಿಡಿ.
ಇಲ್ಲಿ ಧರಣೇಶ್ ಕೂಡ ಶ್ರೀಸಾಮಾನ್ಯ ಕುಟುಂಬದಿಂದಲೇ ಬಂದವರು. ಆದರೆ ೨೦೦೦ನೇ ಇಸ್ವಿ ಸೆಪ್ಟಂಬರ್ ೬ರಂದು ಚಿತ್ರದುರ್ಗದಲ್ಲಿ ನಡೆದ ತಮ್ಮ ಮದುವೆಯಲ್ಲಿ ಇವರು ಉಡುಗೊರೆ ನೀಡಿದ್ದು ಇದೇ ‘ವಚನ ತಾಂಬೂಲ’ವನ್ನು... ನಿಜಕ್ಕೂ ನಾವೆಲ್ಲಾ ಈಗ ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆ. ಸಿನಿಮಾ, ದೂರದರ್ಶನ ಹಾಗೂ ಪಾಶ್ಚಾತ್ಯೀಕರಣದ ಸಾಂಸ್ಕೃತಿಕ ದಾಳಿಗೆ ಸಿಕ್ಕಿ ಯುವಜನತೆ ದಿಕ್ಕು ತಪ್ಪುತ್ತಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತೇವೆ. ಆದರೆ ಅದರ ಉಳಿವಿಗೆ ಮಾಡಬೇಕಾದದ್ದು ಏನು ? ಎಂಬುದನ್ನು ಒಂದೇ ಒಂದು ಕ್ಷಣ ಕೂಡ ಯೋಚಿಸುವುದಿಲ್ಲ. ಆದರೆ ಧರಣೇಶ್ ಬೇರೆಯವರನ್ನು ನಿಂಸುವ ಗೊಡವೆಗೇ ಹೋಗದೆ ಸದ್ದಿಲ್ಲದೆ ತಮ್ಮ ಮದುವೆಗೆ ಬಂದ ಎಲ್ಲರಿಗೂ ‘ವಚನ ತಾಂಬೂಲ’ ನೀಡಿ ಪುಸ್ತಕ ಪ್ರೀತಿ ಮೆರೆದಿದ್ದಾರೆ. ಅವರಿಗೆ ನಿಜಕ್ಕೂ ಹ್ಯಾಟ್ಸ್ ಆಫ್...
ಈ ಕಿರು ಹೊತ್ತಿಗೆಯಲ್ಲಿ ಆರಂಭದಲ್ಲಿಯೇ ಮುರುಘ ರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿಯ ಲೋಕ ಸಂದೇಶವಿದೆ. ಬಸವ ತತ್ತ್ವದ ಸೂತ್ರಗಳಿವೆ. ಚನ್ನಬಸವಣ್ಣ, ಶರಣೆ ಸತ್ಯಕ್ಕ, ಶರಣೆ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಷಣ್ಮುಖ ಶಿವಯೋಗಿಗಳು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಮೊಗ್ಗೆಯ ಮಾಯಿದೇವರು, ಅಲ್ಲಮ ಪ್ರಭುದೇವರು, ಸರ್ವಜ್ಞನವರ ವಚನಗಳನ್ನು ಮುದ್ರಿಸಿ ಕಿರು ಹೊತ್ತಿಗೆ ಮಾಡಿ, ಎಲ್ಲರಿಗೆ ಹಂಚಲಾಗಿದೆ. ಇದು ನಿಜಕ್ಕೂ ಅರ್ಥಪೂರ್ಣ ನಿಲುವು. ಅಂದ ಹಾಗೆ ಅವರ ಕೈ ಹಿಡಿದಿದ್ದು ಸಿ.ಜೆ.ಪದ್ಮಾ. ಪುಸ್ತಕ ಪ್ರೀತಿಯನ್ನು ಸದ್ದಿಲ್ಲದೆ ಪಸರಿಸಿದ ಈ ದಂಪತಿ ಶೀಘ್ರದಲ್ಲಿಯೇ ದಶಮಾನೋತ್ಸವ ಆಚರಿಸಲಿದ್ದಾರೆ... ಅವರಿಗೆ ಮತ್ತೊಂದು ಹ್ಯಾಟ್ಸ್ ಆಫ್...

Sunday, September 6, 2009

ಬಂದಿದೆ ರೆಡಿಮೇಡ್ ‘ಹಸಿರು ಹಾಸಿಗೆ’

ಕೃಷಿ ಕ್ಷೇತ್ರದಲ್ಲಿ ಇದೊಂದು ಹೊಸ ಆವಿಷ್ಕಾರ. ಒಂದೆಡೆ ಹಸಿರು ಮಾಯವಾಗುತ್ತಿದ್ದರೆ ಈಗಿನ ದುನಿಯಾಗೆ ಅನುಕೂಲವಾಗುವ ಹಾಗೆ ಹಸಿರು ಬೆಳೆಸುವ ಹೊಸ ಆವಿಷ್ಕಾರಕ್ಕೆ ಕೇಂದ್ರ ನಾರು ಮಂಡಳಿ ಕೈ ಹಾಕಿದೆ. ಆಧುನಿಕತೆಗೆ ಎಷ್ಟೇ ಒಗ್ಗಿಕೊಂಡಿದ್ದರೂ ಮನುಷ್ಯನಿಗೆ ಹಸಿರಿನಿಂದ ದೂರ ಇರುವ ಸಾಮರ್ಥ್ಯವೇ ಇಲ್ಲ ಎಂಬುದು ನಿಶ್ಚಿತ. ಅದನ್ನು ಮನಗಂಡಿರುವ ಇಲ್ಲಿನ ಸಂಶೋಧಕರು ಆಧುನಿಕ ಜಗತ್ತಿಗೆ ಸರಿ ಹೊಂದುವಂಥ ‘ಹುಲ್ಲಿನ ಹಾಸಿಗೆ’ ತಯಾರಿಸಿದ್ದಾರೆ!
ಆಶ್ಚರ್ಯ ಆಗುತ್ತಿದೆಯೇ ? ನಿಜ, ಇದು ರೆಡಿಮೇಡ್ ಹಸಿರು ಹಾಸಿಗೆ (Green Lawn). ಹಸಿರು ನೆಲವೇ ಕಾಣದ ಈ ದಿನಮಾನಗಳಲ್ಲಿ ಪ್ರತಿ ಮನೆಗೂ ಹೊಂದಿಕೊಳ್ಳುವಂಥ ನೈಸರ್ಗಿಕ ಹಸಿರು ಹಾಸಿಗೆಯನ್ನು ತಯಾರಿಸುವ ತಂತ್ರeನವನ್ನು ನಾರು ಮಂಡಳಿಯ ಸಂಶೋಧಕರು ಕಂಡು ಹಿಡಿದಿದ್ದು, ಅದಕ್ಕೆ ಪೇಟೆಂಟ್ ಕೂಡ ಪಡೆದಿದ್ದಾರೆ. ಕೇರಳದ ಯಾಲಪಿಯಲ್ಲಿರುವ ಕೇಂದ್ರೀಯ ನಾರು ಸಂಶೋಧನ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಈ ಆವಿಷ್ಕಾರ ಮಾಡಲಾಗಿದ್ದು, ಈಗ ಕರ್ನಾಟಕದಲ್ಲೂ ಇದರ ಪ್ರಯೋಗವಾಗಿದೆ. ಈಗಾಗಲೇ ಮೂವರು ಇದರ ಸೌಲಭ್ಯ ಪಡೆದಿದ್ದಾರೆ.
ಭಾರತದಲ್ಲಿ ನ್ಯಾಷನಲ್ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಾಗೂ ನಾರು ಮಂಡಳಿ ಎರಡೂ ಕಡೆ ಇದನ್ನು ಹೇಗೆ ರೂಪಿಸುವುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಹಾಸಿಗೆ ರೆಡಿ ಮಾಡಲು ಕೆಲವು ತಂತ್ರeನಗಳಿವೆ. ಅದನ್ನು ಅದೇ ಮಾದರಿಯಲ್ಲಿ ತಯಾರಿಸಬೇಕು. ಹೀಗಾಗಿ ಇದಕ್ಕೆ ಪರವಾನಗಿ ಪಡೆದು ಆರ್ಥಿಕ ಒಪ್ಪಂದಕ್ಕೆ (MOU)ಸಹಿ ಹಾಕಬೇಕು. ಜತೆಗೆ ತರಬೇತಿಯನ್ನು ಪಡೆಯಬೇಕು. ಅದನ್ನು ನಾರು ಮಂಡಳಿ ಹಾಗೂ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಮಾಡುತ್ತಿವೆ.
ಇದರಿಂದ ಅನುಕೂಲಗಳು:
ನಾರು ಹಾಗೂ ನಾರಿನ ಪುಡಿಯನ್ನು ಹಾಸಿಗೆ ರೂಪದಲ್ಲಿ ಬಳಸಿ ಹಸಿರನ್ನು ಬೆಳೆಸಲಾಗುತ್ತದೆ. ಇದರಲ್ಲಿ ಗರಿಕೆ ಸೇರಿದಂತೆ ಎಲ್ಲ ರೀತಿಯ ಹುಲ್ಲು ಹಾಸಿಗೆಯನ್ನೂ ತಯಾರಿಸಬಹುದು. ಒಂದೇ ಬಾರಿ ಹಲವು ಹಂತಗಳಲ್ಲಿ ಹಾಸಿಗೆ ತಯಾರಿಸಬಹುದು. ಇದರ ಮೇಲೆ ಹುಲ್ಲುಬೆಳೆಯಲು ಕನಿಷ್ಠ ಒಂದರಿಂದ ಒಂದೂವರೆ ತಿಂಗಳು ಬೇಕು. ಈ ಹಾಸಿಗೆಯಲ್ಲಿ ಹುಲ್ಲು ಬೆಳೆದ ನಂತರ ಅದನ್ನು ಬೆಡ್ ಶೀಟ್ ರೀತಿ ಮಡಚಿ ಇಡಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಲೀಸಾಗಿ ಇದನ್ನು ಸುತ್ತಿಕೊಂಡು ಹೋಗಬಹುದು ಅಥವಾ ಸ್ಥಳಾಂತರಿಸಬಹುದು. ಜತೆಗೆ ಯಾವ ಸ್ಥಳಕ್ಕೆ ಬೇಕೋ ಹಾಗೆ ಈ ಹುಲ್ಲನ್ನು ಕಟ್ ಮಾಡಿ ಜೋಡಿಸಬಹುದು. ಮನೆ ಮುಂದೆ ಈ ಹಾಸಿಗೆ ಜೋಡಿಸಿದರೆ ಇಡೀ ಮನೆ ಬೃಂದಾವನ !
ಈ ಹುಲ್ಲಿನ ಹಾಸಿಗೆಯನ್ನು ಕೇವಲ ಸಾಮಾನ್ಯ ಮನೆಗಳ ಮುಂದೆ ಹೊರಾಂಗಣಕ್ಕೆ ಮಾತ್ರವಲ್ಲ, ಮಹಡಿ ಮನೆಯಲ್ಲೂ ಅಲಂಕಾರಕ್ಕಾಗಿ ಬಳಸಬಹುದು. ಕಾಲುದಾರಿಯಲ್ಲೂ ಬಳಸಬಹುದು. ಮನೆಯ ಚಾವಣಿಗೆ ಕೂಡ ಬಳಸಬಹುದು. ಇದರಿಂದ ಮನೆ ಕೂಡ ತಂಪಾಗಿರುತ್ತದೆ. ರೆಸ್ಟೋರೆಂಟ್, ಆಸ್ಪತ್ರೆ ಹೀಗೆ ಎಲ್ಲೆಂದರೆ ಇದನ್ನು ಉಪಯೋಗಿಸಬಹುದು. ಎಲ್ಲ ಋತುಗಳಿಗೂ ಹೊಂದಿಕೊಳ್ಳುವ ಈ ಹುಲ್ಲಿನ ಹಾಸಿಗೆಯನ್ನು ಸುಲಭವಾಗಿ ಪೋಷಣೆ ಮಾಡಬಹುದು. ಜತೆಗೆ ಇದು ಶೇ. ೮೦೦ರಷ್ಟು ತಂಪಾಗಿರುವುದರಿಂದ ಸುತ್ತಮುತ್ತಲಿನ ವಾತಾವರಣ ಕೂಡ ತಂಪಾಗಿರುತ್ತದೆ.
ಹಾಸಿಗೆ ಬೆಳೆಸುವ ವಿಧಾನ:
ನಾರನ್ನು ಮೊದಲು ತಾಂತ್ರ್ರಿಕವಾಗಿ ಜೋಡಿಸಿಕೊಂಡು (ನೀಡಲ್ ಫಿಲ್ಟ್ ಮಾಡಿ) ಒಂದು ಸ್ಥಳದಲ್ಲಿ ಅದನ್ನು ಸಮನಾಗಿ ಹರಡಿಕೊಳ್ಳಬೇಕು. ಅದರ ಮೇಲೆ ಜಿಯೋಟೆಕ್ಸೆಲ್ಸ್ ( ತಿಳಿ ಮಣ್ಣಿನಾಕಾರದ ನಾರು ಪುಡಿ) ಅದರ ಮೇಲೆ ಪಿಥ್(ಸಂಸ್ಕರಿಸಿದ ನಾರು ಪುಡಿ) ಹಾಕಿ, ಸ್ವಲ್ಪ ನೀರು ಚಿಮುಕಿಸಬೇಕು. ಅದರಲ್ಲಿ ನಿಮಗೆ ಯಾವ ಹುಲ್ಲು ಬೇಕೋ ಆ ಹುಲ್ಲಿನ ಬೀಜ ಬಿತ್ತಬೇಕು, ಇಲ್ಲವೇ ಬೇರು ಹೊಂದಿರುವ ಹುಲ್ಲಿನ ಚೂರುಗಳನ್ನು ನೆಟ್ಟರೂ ಸಾಕು. ಅನಂತರ ಇದಕ್ಕೆ ಪ್ರತಿನಿತ್ಯ ನೀರು ಚಿಮುಕಿಸುತ್ತಿರಬೇಕು. ಹೀಗೆ ಮಾಡಿದರೆ ಕೇವಲ ಒಂದೂವರೆ ತಿಂಗಳಿನಲ್ಲಿ ನಿಮಗೆ ಹುಲ್ಲಿನ ಹಾಸಿಗೆ ತಯಾರಾಗುತ್ತದೆ. ಹುಲ್ಲಿನ ಬೇರುಗಳು ಕೂಡ ಭದ್ರವಾಗುತ್ತವೆ. ಆಗ ನೀವು ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಸಲೀಸಾಗಿ ಕಟ್ ಮಾಡಿ ಅದನ್ನು ನಿಮಗೆ ಬೇಕಾದ ಸ್ಥಳಗಳಲ್ಲಿ ಜೋಡಿಸಿಕೊಳ್ಳಬಹುದು.

Thursday, September 3, 2009

ಉಳ್ಳವರಿಗೆ ದೇವರು ಹತ್ತಿರವಂತೆ! ಹೌದಾ...?

ಇವತ್ತು ದೇವರ ಹೆಸರು ಹೇಳಿಕೊಂಡು ಅದೆಷ್ಟೋ ಮಂದಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ದೇವರಿದ್ದಾನೋ ಇಲ್ಲವೋ ಬೇರೆ ವಿಚಾರ, ಆದರೆ ಅವನ ಹೆಸರು ಹೇಳಿಕೊಂಡು ಬದುಕುವವರು ಮಾತ್ರ ‘ಸೊಂಪಾಗಿದ್ದಾರೆ’. ಮೊನ್ನೆ ಸಣ್ಣದೊಂದು ಪ್ರವಾಸಕ್ಕೆಂದು ಬೇರೆ ಕಡೆಗೆ ಹೋಗಿದ್ದೆ. ಆ ಸ್ಥಳದಲ್ಲಿ ಒಬ್ಬ ಆತ್ಮೀಯ ಗೆಳೆಯನಿದ್ದ. ಅವನ ಮನೆಗೆಂದು ಹೋದಾಗ ಅವನು ತನ್ನ ಹಬ್ಬದ ದಿನವಾಗಿದ್ದರಿಂದ ತನ್ನ ಎಳೆಯ ಮಕ್ಕಳಿಗೆ ಪ್ರಸಾದ ತರಬೇಕೆಂದು ಒಂದು ‘ಭವ್ಯ ದೇವಸ್ಥಾನ’ಕ್ಕೆ ಕರೆದುಕೊಂಡು ಹೋಗಿದ್ದ.
ದೇವರು ಎಂದರೆ ನನಗೆ ಮೊದಲಿನಿಂದಲೂ ದೂರ. ಆದರೆ ‘ಆ ದೇವಸ್ಥಾನದಲ್ಲಿ ಶೂದ್ರರೇ ಪೂಜೆ ಮಾಡ್ತಾರೆ. ಬೇಕಾದವರು ಪೂಜೆ ಮಾಡಿಸ್ಕೊಳ್ಳಬಹುದು, ಇಲ್ಲದಿದ್ರೆ ಸುಮ್ನೆ ದೇವಾಲಯ ಸುತ್ತಿಕೊಂಡು ಬರಬಹ್ದು, ದೇವಸ್ಥಾನದ ಸುತ್ತ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕೊಳ ಇದೆ, ಸುಂದರ ಪಾರ್ಕ್ ಇದೆ’ ಎಂದು ಅವನು ತಿಳಿಸಿದ. ಜತೆಗೆ ಆ ದೇವಸ್ಥಾನದಿಂದ ಮಕ್ಕಳಿಗೆ ಪ್ರಸಾದ ತರಬೇಕೆಂಬುದು ಅವನ ತಾಯಿಯ ಒತ್ತಾಸೆ ಕೂಡ ಆಗಿತ್ತು. ಆದ್ದರಿಂದ ಅವನು ಹೋಗಲೇಬೇಕಿತ್ತು. ಅವನ ಒತ್ತಾಯ ಹಾಗೂ ಆತ ಹೇಳಿದ ಕೆಲವು ಮಾತುಗಳಿಂದ ಕುತೂಹಲ ಶುರುವಾಯಿತು. ಸರಿ ಇಬ್ಬರೂ ಹೋದೆವು.
ದೇವಸ್ಥಾನದಲ್ಲಿ ಮಕ್ಕ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಲು ಅವನು ರಶೀದಿ ಖರೀದಿಸಿದ. ಆರಂಭದಲ್ಲೇ ಅವನು ಹೇಳಿದ ಮಾತು ಅಲ್ಲಿ ಸುಳ್ಳಾಗಿತ್ತು. ಅಷ್ಟೆಲ್ಲಾ ಹೇಳಿದ ಅವನೇ ಹೋಗಿ ಹಣ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದ. ದೇವಸ್ಥಾನ ಸುಂದರ ಹಾಗೂ ಪ್ರಶಾಂತವಾಗಿದ್ದರಿಂದ ಸ್ವಲ್ಪ ಸುತ್ತಾಡುತ್ತಿದೆ. ಅವನು ಪ್ರಸಾದಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ. ಅಲ್ಲಿ ನವಗ್ರಹ ದೇವತೆಗಳು, ಅನ್ನಪೂರ್ಣೇಶ್ವರಿ, ವಿಘ್ನ ನಿವಾರಕ ಗಣೇಶ, ಶಿವ ಪಾರ್ವತಿ, ಶಾರದೆ ಹೀಗೆ ಎಲ್ಲ ಬಗೆಯ ದೇವಾನು ದೇವತೆಗಳಿದ್ದರು!
ಅಷ್ಟು ಸಾಲದೆಂಬಂತೆ ದೇವಾಲಯದ ಬಳಿ ಪಾರ್ಕ್ ಹಾಗೂ ಕೊಳಗಳಿದ್ದವು. ಅವು ತುಂಬಾ ಸುಂದರವಾಗಿದ್ದವು. ಮಕ್ಕಳಿಗಂತೂ ಅಲ್ಲಿ ಹೋದರೆ ಹಬ್ಬ. ಇವೆಲ್ಲದರ ಜೊತೆಗೆ ದೇವಸ್ಥಾನದ ಹಿಂದೆ ಬಡವರಿಗಾಗಿಯೇ ಒಂದು ವಿವಾಹ ಮಂಟಪ, ಶ್ರೀಮಂತರಿಗಾಗಿ ಪಕ್ಕದಲ್ಲಿ ಮತ್ತೊಂದು ಮಂಟಪ. ಇದೂವರೆಗೆ ಕಂಡ ಹಾಗೆ ಬಹುತೇಕ ಕಡೆಗಳಲ್ಲಿ ದೇವಸ್ಥಾನ ಅಥವಾ ಮಠಗಳನ್ನು ನಿರ್ಮಾಣ ಮಾಡಿದರೆ ಹಣ ಗಳಿಕೆಗಾಗಿಯೇ ಅಲ್ಲೊಂದು ‘ಕಲ್ಯಾಣ’ ಮಂಟಪ ಇದ್ದೇ ಇರುತ್ತದೆ. ಆದರೆ ಇದು ಸ್ವಲ್ಪ ವಿಭಿನ್ನ. ಶ್ರೀಮಂತರ ಕಲ್ಯಾಣ ಮಂಟಪದಿಂದ ಬಂದ ಹಣದಿಂದ ಬಡವರ ಕಲ್ಯಾಣಕ್ಕಾಗಿಯೂ ತುಸು ಉಪಯೋಗಿಸುತ್ತಿದ್ದಾರೆ.
ಆದರೆ ಇಲ್ಲಿ ವಿಚಾರ ಅದಲ್ಲ, ತಿರುಪತಿಯಲ್ಲಿರುವಂತೆ ಎಲ್ಲ ದೇವಾಲಯಗಳಲ್ಲೂ ಹುಂಡಿಗೆ ಹೆಚ್ಚು ಹಣ ಹಾಕುವ ಶ್ರೀಮಂತರಿಗಾಗಿಯೇ ವಿಶೇಷ ಮಾರ್ಗ ಇದ್ದೇ ಇರುತ್ತವೆ. ಅದು ಕಾಣುವುದಿಲ್ಲ ಅಷ್ಟೆ. ಅವರಿಗೆಲ್ಲಾ ಅಲ್ಲಿ ದೇವರು ತುಂಬಾ ಬೇಗ ಸಿಗುತ್ತಾನೆ. ಆದರೆ ಬಡವರು ಮಾತ್ರ ಅದೇ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತು, ಬೆವರಿಳಿಸಿ ದೇವರ ದರ್ಶನ ಪಡೆಯಬೇಕು! ಕೇಳಿದ್ದಕ್ಕೆಲ್ಲ ತಥಾಸ್ತು ಎನ್ನುತ್ತಾನೋ ಇಲ್ಲವೋ ಅದು ಬೇರೆ ವಿಚಾರ. ಆದರೆ ಉಳ್ಳವರಿಗೆ ಹಾಗಿಲ್ಲ...
ಮೊನ್ನೆ ಅಲ್ಲಿ ಆಗಿದ್ದೂ ಅದೇ; ಸರದಿಯಲ್ಲಿ ನಿಂತಿದ್ದ ನನ್ನ ಸ್ನೇಹಿತನನ್ನು ಕಂಡ ಆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಅವನನ್ನು ಕರೆದು ಮಾತನಾಡಿಸಿದರು. ‘ಇದೇನ್ ಸರ್ ನೀವು ಕ್ಯೂನಲ್ಲಿ ನಿಂತಿದ್ದೀರಿ. ನಂಗೆ ಒಂದ್ ಮಾತ್ ಹೇಳೋದ್ ಬ್ಯಾಡ್ವಾ... ಬನ್ನಿ..’ ಎಂದು ಅವನನ್ನು ಕರೆದುಕೊಂಡು ಗರ್ಭ ಗುಡಿಯ ಎದುರು ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಅವರು ಮತ್ತಷ್ಟು ಶ್ರೀಮಂತ ಸ್ನೇಹಿತರು ಆಗಮಿಸಿದ್ದಾರೆ. ಎಲ್ಲರೂ ಕೂಡಿ ಅಲ್ಲಿ ಮಾತಿಗಿಳಿದಾಗ ನನ್ನ ಸ್ನೇಹಿತ ‘ನಾನು ಹಾಗೂ ನನ್ನ ಸ್ನೇಹಿತ ಬಂದಿದ್ದೇವೆ’ ಎಂದಿದ್ದಾನೆ. ತಕ್ಷಣ ‘ಅವರನ್ನು ಕರ್‍ಕೊಂಡು ಬನ್ನಿ...’ ಎಂದು ಕಳುಹಿಸಿದರು.
ಬರುವುದಿಲ್ಲ ಎಂದರೂ ನನ್ನ ಗೆಳೆಯ ಬಿಡಲಿಲ್ಲ. ‘ನಾನು ಅವರ ಬಳಿ ಹೇಳಿಬಿಟ್ಟಿದ್ದೇನೆ, ನೀನು ಬರದೆ ಹೋದ್ರೆ ಅವರು ಬೇಸರ ಮಾಡಿಕೊಳ್ಳುತ್ತಾರೆ. ಬರಲೇಬೇಕು’ ಎಂದು ದುಂಬಾಲು ಬಿದ್ದ. ಅವನ ಕಾಟ ತಾಳದೆ ಹೋದರೆ ಹೇಳದೆ ಇದ್ದರೂ ವಿಶೇಷ ಪೂಜೆ! ಶುಲ್ಕ ಪಾವತಿ ಮಾಡದಿದ್ದರೂ ವಿಶೇಷ ಪ್ರಸಾದ, ಕುಂಕುಮ, ಹೂವು, ಹಣ್ಣು, ಕಾಯಿ ಹಾಕಿ ಪ್ಯಾಕ್ ಮಾಡಿ ಕೊಟ್ಟರು!! ನನ್ನ ಸ್ನೇಹಿತ ಶುಲ್ಕ ಪಾವತಿ ಮಾಡಿ ಪೂಜೆ ಮಾಡಿಸಿದ್ದಕ್ಕೆ ಒಂದು, ಅಧ್ಯಕ್ಷರ ಒತ್ತಾಯದ ಮೇರೆಗೆ ಮತ್ತೊಂದು ಪ್ರಸಾದ ಚೀಲ!! ಹೇಗಿದೆ ನೋಡಿ ಕಾಲ...ಇಂಥ ಮನೋಧರ್ಮ ಈಗ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಶೂದ್ರರು ಪೂಜೆ ಮಾಡುವ ದೇವಸ್ಥಾನಗಳಲ್ಲಿಯೇ ಹೀಗಾದರೆ, ಪೂಜೆಯನ್ನೇ ಕುಲ ಕಸುಬಾಗಿಸಿಕೊಂಡು ಬಂದವರ ದೇವಸ್ಥಾನಗಳಲ್ಲಿ ಇನ್ನು ಹೆಂಗೆ..?
ಆದರೆ ನಮ್ಮ ಮುಂದೆ ಬಂದ ಅದೆಷ್ಟೋ ಬಡಪಾಯಿಗಳು ಪೂಜೆಗಾಗಿ ಕಾಯುತ್ತಿದ್ದವರು ಕಾಯುತ್ತಿಲೇ ಇದ್ದವು. ನಾವು ಮಾತ್ರ ಮನೆಯ ಕಡೆ ಹೆಜ್ಜೆ ಹಾಕಿದೆವು. ಆಗ ಕಾಡಿದ ಒಂದೇ ಪ್ರಶ್ನೆ ಉಳ್ಳವರಿಗೆ ದೇವರು ತುಂಬಾ ಹತ್ತಿರನಾ...?
Powered By Blogger