Friday, October 23, 2009

ಅಮ್ಮಾ ನಿನ್ನ ಎದೆ ಹಾಲಲ್ಲಿ ಬೆಳೆಯಲಿ ‘ಅಮೃತ’ ಬಳ್ಳಿ

ಅದು ಅಕ್ಷರಶಃ ಅಮೃತಧಾರೆ. ತಾಯ ಹೃದಯಾಂತರಾಳದಿಂದ ಉಕ್ಕುವ ಆ ವಾತ್ಸಲ್ಯ ಧಾರೆಗೆ ಸರಿಸಮನಾದುದು ಈ ಜಗತ್ತಿನಲ್ಲಿ ಬೇರಾವುದೂ ಸಿಗಲಾರದು. ಜೀವವನ್ನು ಪೊರೆದು ಒಂದಿಡೀ ಬದುಕಿಗೆ ಭದ್ರ ಬುನಾದಿ ಹಾಕಿಕೊಡುವ ಅಮ್ಮನಕ್ಕರೆಯ ಸವಿ ಸಕ್ಕರೆಯ ಆ ಒಂದೊಂದು ಹನಿಯೂ ಈ ಭೂಮಿಯ ಮೇಲೆ ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಅಂಥ ಅಮ್ಮನ ಅತ್ಯಮೂಲ್ಯ ಎದೆ ಹಾಲಿನಿಂದಲೇ ವಂಚಿತರಾಗಿಬಿಟ್ಟರೆ ? ಆ ಜೀವಿ ಕಳಕೊಳ್ಳುವುದಕ್ಕೆ ಬೇರೇನು ಬಾಕಿ ಉಳಿದೀತು ? ಬಹುಶಃ ಇದೀಗ ಮೊಳಕೆಯೊಡೆ ಯುತ್ತಿರುವ ಈ ಕನಸು ಸಾಕಾರಗೊಂಡರೆ ಭಾರತದ ಯಾವ ಮಗುವೂ ತಾಯ ಹಾಲಿಂದ ವಂಚಿತವಾಗಲಾರದು.
ಭಾರತದಲ್ಲಿ ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಅದರ ಫಲವಾಗಿ ಜನಿಸಿದ ೨೪ ಗಂಟೆಗಳಲ್ಲಿ ನಿತ್ಯವೂ ೪ ಲಕ್ಷ ಮಕ್ಕಳು ಕೊನೆಯುಸಿರೆಳೆಯುತ್ತಿದ್ದಾರೆ. ಅದರ ನಡುವೆಯೂ ಬದುಕುವ ಬಹಳಷ್ಟು ಮಕ್ಕಳಿಗೆ ಮತ್ತೆ ಎದುರಾಗುವ ಸಮಸ್ಯೆ ಎದೆಹಾಲು !
ಇಂಥ ಸೂಕ್ಷ್ಮ ಸಮಸ್ಯೆಯನ್ನು ಪರಿಹರಿಸಲು ಗುಜರಾತ್‌ನಲ್ಲಿ ‘ತಾಯಿ ಎದೆಹಾಲು ಕೇಂದ್ರ’ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಯೊಬ್ಬ ತಾಯಂದಿರೂ ತಮ್ಮ ಮಕ್ಕಳಿಗೆ ಆಗಿ ಉಳಿಯುವ ಬಹುಪಾಲು ಹಾಲನ್ನು ಈ ಕೇಂದ್ರಕ್ಕೆ ತಂದು ನೀಡುತ್ತಾರೆ !! ಆಶ್ಚರ್ಯವಾದರೂ ಇದು ನಿಜ.
ಇದೊಂದು ವಿನೂತನ ಪ್ರಯೋಗ. ಆದರೆ ಪ್ರಪಂಚದ ಪರಿವೆಯೇ ಇಲ್ಲದೆ ಭುವಿಗೆ ಬರುವ ಮಗುವಿನ ಪುಟ್ಟ ಹೊಟ್ಟೆಯನ್ನೂ ತುಂಬಿಸಲಾಗದೆ ಲಕ್ಷಾಂತರ ತಾಯಂದಿರು ಕೊರಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಗುಜರಾತ್‌ನಲ್ಲಿ ‘ಮದರ್ ಮಿಲ್ಕ್ ಬ್ಯಾಂಕ್’ ನಿರ್ಮಾಣ ಮಾಡಲಾಗಿದೆ. ಈ ಬ್ಯಾಂಕ್‌ನ ಹಾಲು ಕುಡಿದು ಇಂದು ಅದೆಷ್ಟೊ ಮಕ್ಕಳು ಹಸಿವು ನೀಗಿಸಿಕೊಳ್ಳುತ್ತಿವೆ.
ಸರಿಯಾಗಿ ಬೆಳವಣಿಗೆಯಾಗದ, ಅನಾರೋಗ್ಯದಿಂದ ಬಳಲುವ ಹಾಗೂ ದತ್ತು ಪಡೆದ ಮಕ್ಕಳಿಗೆ, ಎದೆ ಹಾಲಿಲ್ಲದೆ ಬಳಲುವ ತಾಯಂದಿರ ಮಕ್ಕಳಿಗೆ, ಅನಾಥ ಶಿಶುಗಳಿಗೆ ಇಂಥ ‘ದೂರದ ತಾಯಂದಿರು’ ತಮ್ಮ ಎದೆ ಹಾಲನ್ನು ಧಾರೆ ಎರೆಯುತ್ತಿದ್ದಾರೆ. ಎಲ್ಲೋ ಹುಟ್ಟಿ ಬಳಲುವ ಮಕ್ಕಳು ಇದನ್ನು ಕುಡಿಯುವ ಮೂಲಕ ಚೇತರಿಸಿಕೊಳ್ಳುತ್ತಿವೆ...
ಇದು ಇದೇ ಮೊದಲಲ್ಲ, ದಕ್ಷಿಣ ಅಮೇರಿಕದಲ್ಲಿ ಕನಿಷ್ಠ ೬ ಮಿಲಿಯನ್ ತಾಯಿ ಎದೆ ಹಾಲು ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಈ ಬ್ಯಾಂಕ್‌ಗಳು ಮೊಲೆ ಹಾಲು ದಾನ ಮಾಡುವ ತಾಯಂದಿರಿಗೆ ಗೌರವಧನವನ್ನೂ ನೀಡುತ್ತಿವೆ.
ಆರೋಗ್ಯವಂತ ತಾಯಂದಿರಿಂದ ಪಡೆದ ಮೊಲೆ ಹಾಲನ್ನು ಈ ಬ್ಯಾಂಕ್‌ಗಳು ಪರೀಕ್ಷಿಸಿ, ಶೇಖರಿಸಿಡುತ್ತವೆ. ಆನಂತರ ನಿಗದಿತ ತಜ್ಞರನ್ನು ಸಂಪರ್ಕಿಸಿ ಅಗತ್ಯವಿರುವ ಮಕ್ಕಳಿಗೆ ಪೂರೈಕೆ ಮಾಡುತ್ತವೆ. ಆ ಮೂಲಕ ಕಣ್ಣಿಗೆ ಕಾಣದ, ದೂರದ ಯಾವುದೋ ಮಗುವಿಗೆ ಇನ್ನಾವುದೋ ಮಹಿಳೆ ‘ತಾಯಿ’ಯಾಗುವ ಭಾಗ್ಯ ಒದಗಿಸುತ್ತಿವೆ.
ಈ ‘ಮದರ್ ಮಿಲ್ಕ್ ಬ್ಯಾಂಕ್’ ಮೊದಲು ಆರಂಭವಾಗಿದ್ದು ೧೯೮೫ರಲ್ಲಿ. ಕೊಲೊರಾಡೊದಲ್ಲಿ ಮೊಟ್ಟ ಮೊದಲ ಬಾರಿ ಮದರ್ ಮಿಲ್ಕ್ ಕ್ಲಿನಿಕ್ ಆರಂಭವಾದಾಗ ಆರಂಭದಲ್ಲಿ ಕೆಲವರು ಮೂಗು ಮುರಿದರೂ ಆನಂತರ ಅದೇ ಜನಮನ್ನಣೆ ಗಳಿಸಿತು. ಮುಂದಿನ ದಿನಗಳಲ್ಲಿ ಅದೇ ‘ಮದರ್ ಮಿಲ್ಕ್ ಬ್ಯಾಂಕ್’ ಆಗಿ ಮಾರ್ಪಾಡಾಯಿತು.
ಅಲ್ಲಿಂದ ಮುಂದೆ ಅಮೆರಿಕದಲ್ಲಿ ೬, ಉತ್ತರ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋದಲ್ಲಿ ತಲಾ ಒಂದೊಂದು ಎದೆ ಹಾಲಿನ ಬ್ಯಾಂಕ್‌ಗಳಿವೆ. ಆನಂತರ ವಿಶ್ವದ ೫ ದೇಶಗಳ ೪೬ ರಾಜ್ಯಗಳಲ್ಲಿ ಎದೆ ಹಾಲು ಕೆಂದ್ರಗಳ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ಹಾಗೂ ತರಬೇತಿ ಮೂಲಕ ತಿಳಿ ಹೇಳಲಾಗುತ್ತಿದೆ.
ಗುಜರಾತ್‌ನಲ್ಲಿ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್(ಎನ್‌ಡಿಡಿಬಿ) ಹಾಗೂ ಅಮುಲ್ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ಸಹಯೋಗದೊಂದಿಗೆ ಎದೆ ಹಾಲಿನ ಪ್ಯಾಕ್‌ಗಳನ್ನು ತಯಾರಿಸಲಾಗುತ್ತಿದೆ. ಗಾಂನಗರದಲ್ಲಿ ತಯಾರಾಗುವ ಈ ‘ಅಮುಲ್’ ಎದೆಹಾಲನ್ನು ೪೫೦೦ ಡೀಲರ‍್ಸ್ ಮೂಲಕ ರಾಜ್ಯಾದ್ಯಂತ ವಿತರಣೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಈ ಎದೆ ಹಾಲು ಲಭ್ಯವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಜಿಸಿಎಂಎಂಎಫ್‌ನ ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಸೋ.
೨೦ ವರ್ಷಗಳಿಂದ ‘ಅಮುಲ್’ ಮಾರುಕಟ್ಟೆಯಲ್ಲಿದ್ದು, ಈಗ ೨೦೦೫ರಲ್ಲಿ ‘ಸುಗಮ್’ ಎಂಬ ಹೊಸ ಬ್ರಾಂಡ್ ನೇಮ್‌ನೊಂದಿಗೆ ಮತ್ತೊಂದು ಪರಿಷ್ಕೃತ ಎದೆ ಹಾಲಿನ ಪ್ಯಾಕ್‌ಗಳನ್ನು( ಅಲಹಾಬಾದ್‌ನಲ್ಲಿ ಶೇಖರಣೆ) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಲಿನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಇಲ್ಲಿನ ಜಿಸಿಎಂಎಂಎಫ್ ಹೊಸದಿಲ್ಲಿಯ ಮದರ್ ಡೈರಿ ಇಂಡಿಯಾ ಲಿಮಿಟೆಡ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಇದರಿಂದ ‘ಸುಗಮ್’ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇಷ್ಟು ದಿನ ರಕ್ತದಾನ, ನೇತ್ರದಾನ ಸೇರಿದಂತೆ ಮನುಷ್ಯನ ದೇಹದ ಅಮೂಲ್ಯವಾದ ನಾನಾ ಭಾಗಗಳನ್ನು ದಾನ ಮಾಡುವುದು ವಾಡಿಕೆಯಾಗಿತ್ತು. ಆದರೆ ಸದ್ಯದ ಮಟ್ಟಿಗೆ ಹಾಗೂ ಭಾರತದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೋರಿ ಹೋಗುತ್ತಿರುವ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಇಂಥ ‘ಎದೆ ಹಾಲು ದಾನ ಕೂಡ ಅತ್ಯಮೂಲ್ಯ’.
ಆ ಮೂಲಕ ಹುಟ್ಟಿದ ಮರುಕ್ಷಣದಿಂದಲೇ ಹಸಿವಿನ ರುಚಿ ನೋಡುತ್ತಲೇ ನೊಂದು, ಬೆಂದು ಬದುಕುವ ಅಥವಾ ಅರ್ಧಕ್ಕೇ ಕಣ್ಣು ಮುಚ್ಚುವ ಮಕ್ಕಳಿಗೆ ಬದುಕು, ಜೀವ ಎರಡೂ ದೊರೆತಂತಾಗುತ್ತದೆ. ಒಂದು ಮಗುವಿಗೆ ಹೆಣ್ಣು ಜನ್ಮ ನೀಡಿ ‘ತಾಯಿ’ ಎನಿಸಿಕೊಳ್ಳಬಹುದು; ಆದರೆ ಅದೇ ಮಗುವಿಗೆ ಆಕೆಯಿಂದ ಎದೆ ಹಾಲು ನೀಡಲಾಗಲಿಲ್ಲ ಎಂದರೆ ಆ ತಾಯಿಯ ಕರುಳಿನ ಕೂಗು ಅರ್ಥವಾಗುವುದಾದರೂ ಯಾರಿಗೆ? ಅದು ಮತ್ತೊಬ್ಬ ತಾಯಿಗೆ ಮಾತ್ರ.
ಆದ್ದರಿಂದ ಪ್ರತಿಯೊಬ್ಬ ತಾಯಂದಿರೂ ಕೂಡ ತಮ್ಮ ಮಗುವಿಗೆ ಉಣಬಡಿಸಿ ಉಳಿಯುವ ಹಾಲನ್ನು ಹಿಂಡಿ ಅದನ್ನು ಒಂದು ಬಾಟಲಿಯಲ್ಲಿ ಭದ್ರವಾಗಿ ಶೇಖರಿಸಿ ಇಂಥ ‘ಮದರ್ ಮಿಲ್ಕ್ ಬ್ಯಾಂಕ್’ಗಳಿಗೆ ನೀಡುವುದು ಉತ್ತಮ. ಇದರಿಂದ ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಜತೆಗೆ ನೆನಪಿರಲಿ, ಇದು ಕೃತಕವಾಗಿ ತಯಾರಿಸುವ ಪೇಯವಲ್ಲ. ನಿಜವಾದ ‘ಅಮೃತ’. ಇಂಥ ಕೇಂದ್ರಗಳು ಕರ್ನಾಟಕದಲ್ಲೂ ಸ್ಥಾಪನೆಯಾದರೆ ಒಳ್ಳೆಯದು. ಆ ಮೂಲಕ ರಾಜ್ಯದ ಬೀದಿ ಬೀದಿಗಳಲ್ಲಿ ಅನಾಥವಾಗಿ, ಅಪೌಷ್ಟಿಕತೆಯಿಂದ ಪ್ರಪಂಚ ನೋಡುವ ಲಕ್ಷಾಂತರ ಎಳೆಯ ಕಂದಮ್ಮಗಳಿಗೆ ಮಹಾತಾಯಂದಿರ ಅಮೂಲ್ಯವಾದ ಎದೆ ಹಾಲು ಜೀವನ ಜ್ಯೋತಿಯಾಗಲಿ...
ಇದು ನೆನಪಿರಲಿ...
  • *ನಿಮ್ಮ ಮಗು ಮೊಲೆ ಹಾಲು ಕುಡಿಯುವುದನ್ನು ಬಿಟ್ಟಿದ್ದರೆ ನೀವು ನಿಮ್ಮ ಹಾಲನ್ನು ದಾನ ಮಾಡಬಹುದು.
  • *ಹಾಲು ದಾನ ಮಾಡುವುದರಿಂದ ನಿಮ್ಮ ಎದೆಯಲ್ಲಿ ಹಾಲು ಉತ್ಪಾದನೆ ನಿಲ್ಲುವುದಿಲ್ಲ.
  • *ನಿಮ್ಮ ದೇಹದಲ್ಲಿ ಎದೆ ಹಾಲಿನ ಪ್ರಮಾಣ ಹೆಚ್ಚಿದ್ದರೂ ಅಥವಾ ನಿಮ್ಮ ಮಗುವಿಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚಿದ್ದರೂ ದಾನ ಮಾಡಬಹುದು.
  • *ಒಂದು ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿದ್ದ ಆರೋಗ್ಯವಂತ ತಾಯಂದಿರು ಹಾಲು ದಾನ ಮಾಡಬಹುದು.
  • * ದಾನ ಮಾಡುವ ತಾಯಂದಿರು ಮದ್ಯಪಾನ, ಧೂಮಪಾನ, ಅತಿಯಾದ ಔಷಧ ಸೇವನೆ, ಗಿಡಮೂಲಿಕೆ ಅಥವಾ ಮಾದಕ ವಸ್ತುಗಳಿಗೆ ಅಂಟಿಕೊಂಡಿರಬಾರದು.
  • * ದಾನ ಮಾಡುವ ಮುನ್ನ ಬ್ಯಾಂಕ್‌ಗಳಲ್ಲಿ ನಿಮ್ಮ ರಕ್ತ ಹಾಗೂ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ನೀವು ಆರೋಗ್ಯವಾಗಿದ್ದರೆ ಮಾತ್ರ ದಾನಕ್ಕೆ ಅವಕಾಶ.
  • *ರಕ್ತ ಪರೀಕ್ಷೆಯ ಜತೆಗೆ ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಸಿ, ಎಚ್‌ಐವಿ ೧ ಮತ್ತು ೨, ಎಚ್‌ಟಿಎಲ್‌ವಿ ಪರೀಕ್ಷೆ ಮಾಡಲಾಗುತ್ತದೆ.
  • *ಯಾವ ಪರೀಕ್ಷೆಗೂ ಎದೆ ಹಾಲು ದಾನಿಗಳಿಂದ ಹಣ ಪಾವತಿಸಿಕೊಳ್ಳುವುದಿಲ್ಲ.
  • *ನಿಮ್ಮ ಮಗು ಆಸ್ಪತ್ರೆಯಲ್ಲಿದ್ದರೆ ಅಥವಾ ನಿಮ್ಮ ಎದೆ ಹಾಲನ್ನು ಸಂಪೂರ್ಣವಾಗಿ ಮಗು ಕುಡಿಯದಿದ್ದಾಗ ಅದನ್ನು ಅನಾವಶ್ಯಕವಾಗಿ ಹಾಳು ಮಾಡಬೇಡಿ.

ತಾಯಂದಿರಿಗೊಂದು ಟಿಪ್ಸ್
ನಿಮ್ಮ ಮಗು ಎಷ್ಟು ಹಾಲು ಕುಡಿಯುತ್ತದೆ ಎಂದು ಮೊದಲು ತಿಳಿದುಕೊಳ್ಳಿ. ನೀವು ಉದ್ಯೋಗಕ್ಕೆ ಹೋಗುವವರಾದರೆ ನಿಮ್ಮ ಎದೆ ಹಾಲನ್ನು ಒಂದು ಫೀಡಿಂಗ್ ಬಾಟಲಿಯಲ್ಲಿ ತುಂಬಿ ಅದನ್ನು ನಿಮ್ಮ ಮಗು ಮನೆಯಲ್ಲಿದ್ದರೆ ಮನೆಯವರಿಗೆ ತೋರಿಸಿ ಹೋಗಿ, ಇಲ್ಲವೇ ಡೇ ಕೇರ್‌ಗೆ ಮಗುವನ್ನು ಬಿಡುವುದಾದರೆ ಮಗುವಿನ ಜತೆ ಕೊಟ್ಟುಬಿಡಿ. ಆಗ ನಿಮ್ಮ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ನೀವು ಎಲ್ಲೇ ಇದ್ದರೂ ನಿಮ್ಮ ಮಗು ನಿಮ್ಮ ಎದೆ ಹಾಲನ್ನೇ ಕುಡಿದು ಬೆಳೆಯುತ್ತದೆ. ಆದರೆ ಎದೆ ಹಾಲನ್ನು ಹಾಳು ಮಾಡಬೇಡಿ. ಅದಕ್ಕೆ ಒಂದು ಜೀವವನ್ನೊ ಪೊರೆಯುವ ಶಕ್ತಿ ಇದೆ. ನಿಮ್ಮ ಎದೆ ಹಾಲು ಅಮೃತಕ್ಕೆ ಸಮಾನ ಎಂಬುದನ್ನು ಮರೆಯದಿರಿ. ಅದು ನೀಡುವ ಆರೋಗ್ಯವನ್ನು ಯಾವುದೇ ಹಾಲು ಅಥವಾ ಸಿದ್ಧ ಆಹಾರವೂ ನೀಡಲಾರದು.

ಅನ್ಯ ದೇಶಗಳ ಪಾಲಾಗುತ್ತಿರುವ ದೇಸಿ ತಳಿಗಳು

ಬದಲಾಯಿಸಲು ಸಾಧ್ಯವೇ ಇಲ್ಲ(!?) ಎನ್ನುವಷ್ಟರಮಟ್ಟಿಗೆ ಕೃಷಿ ಕ್ಷೇತ್ರದ ಮೇಲೆ ಜಾಗತಿಕರಣದ ಕರಾಳ ಬಾಹುಗಳು ಚಾಚಿಕೊಂಡಿರುವುದು ಈಗ ಇತಿಹಾಸ. ಆದರೆ ಇದರ ವ್ಯತಿರಿಕ್ತ ಪರಿಣಾಮ ಕೃಷಿಗೆ ಬೆನ್ನೆಲುಬಾಗಿ ನಿಂತ ರಾಸುಗಳ ಮೇಲೂ ಆಗಿದೆ. ಭಾರದತಲ್ಲಿದ್ದ ಬಹುತೇಕ ಬಲಾಢ್ಯ ಗೋ ತಳಿಗಳನ್ನೆಲ್ಲಾ ವಿದೇಶೀಯರು ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಅವುಗಳಿಂದ ಇಂದಿಗೂ ಹೊಸ ಹೊಸ ರೀತಿಯ ತಳಿಗಳನ್ನು ಆವಿಷ್ಕರಿಸುತ್ತಲೇ ಇದ್ದಾರೆ.
ಇಡೀ ವಿಶ್ವದಲ್ಲಿಯೇ ಉತ್ಕೃಷ್ಟ ಹಾಗೂ ಬಲಾಡ್ಯ ಜಾನುವಾರು ತಳಿಗಳಿದ್ದುದು ಭಾರತದಲ್ಲಿ ಮಾತ್ರ. ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿರುವ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಈಗ ಭಾರತದ ರೈತರಿಗೆ ಕನಸಾಗಿವೆ. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮಾಡುವ ಹೊಸ ತಂತ್ರeನವನ್ನು ಇಲ್ಲಿನ ರೈತರ ಮೇಲೆ ಹೇರಿದ ವಿದೇಶಿಯ ಲಾಭಿಕೋರರು, ಇಲ್ಲಿನ ಬಲಾಢ್ಯ ತಳಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ನೆಲದಲ್ಲಿ ಅವುಗಳ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ.
ಬ್ರಿಟೀಷರ ಕಾಲದಿಂದಲೂ ಭಾರತದ ರೈತರ ರೈತಾಪಿ ಶೈಲಿಯನ್ನು ಮನಗಂಡ ವಿದೇಶಿಯರು, ಆರೋಗ್ಯಯುತ ಬೆಳೆ ಬೆಳೆಯಲು ಭಾರತದ ದೇಸಿ ಪದ್ಧತಿ ಹಾಗೂ ಇಲ್ಲಿನ ರಾಸುಗಳ ಬಳಕೆಯೇ ಸೂಕ್ತ ಎಂಬುದನ್ನು ಅಣುಅಣುವಾಗಿ ಗಮನಿಸಿದ್ದಾರೆ. ಆದರೆ ಅದ್ಯಾವುದೂ ನಮ್ಮ ರೈತರ ಗಮನಕ್ಕೆ ಬರಲೇ ಇಲ್ಲ. ಜಾಗತಿಕರಣದ ಪ್ರಭಾವಕ್ಕೆ ಸಿಕ್ಕಿ ವೇಗವಾಗಿ ಬೆಳೆಯುವ ಹಾಗೂ ಪ್ರಗತಿ ಸಾಸುವ ಹುಂಬತನದ ಹಂಬಲದಲ್ಲಿ ನಮ್ಮತನವನ್ನೇ ಗಾಳಿಗೆ ತೂರಿ, ಅನ್ಯರ ಪದ್ಧತಿಯನ್ನು ಅನುಸರಿಸಲಾರಂಭಿಸಿದೆವು. ಅದರ ಪರಿಣಾಮ ಯಾವುದೇ ಬೆಳೆಯ ಕಾಳುಗಳನ್ನು ಇಟ್ಟುಕೊಂಡು ಮತ್ತೆ ಬಿತ್ತನೆಗೆ ಬೀಜವನ್ನಾಗಿ ಬಳಸಿಕೊಳ್ಳುವ ಹಳೇಯ ‘ನಾಟಿ ಪದ್ಧತಿ’ ನೀರಿನಲ್ಲಿ ಕೊಚ್ಚಿ ಹೋಗಿದೆ!
ಅದೊಂದೇ ಅಲ್ಲ, ಜಾನುವಾರುಗಳ ಸಾಕುವಿಕೆಯಲ್ಲೂ ರೈತರು ಮಾಡಿದ ತಪ್ಪು ಅದೇ. ಅದರ ಲಾಭವನ್ನು ವಿದೇಶೀಯರು ಚೆನ್ನಾಗಿ ಬಳಸಿಕೊಂಡರು. ಅದರ ಪರಿಣಾಮ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಇಂದು ಇಂಗ್ಲೇಂಡ್, ಅಮೇರಿಕಾ,ಬೆಜಿಲ್, ಈಜಿಪ್ಟ್ ಮುಂತಾದ ದೇಶಗಳ ಪಾಲಾಗಿವೆ.
ಕೃಷ್ಣವೇಣಿ:
ರಾಜ್ಯದ ಮೈಸೂರು ಪ್ರಾಂತ್ಯದಲ್ಲಿ ಉದ್ಭವವಾದ ತಳಿಗಳಲ್ಲಿ ಕೃಷ್ಣವೇಣಿ ಕೂಡ ಒಂದು. ೧೯ನೇ ಶತಮಾನದಲ್ಲಿ ಇದನ್ನು ಕೃಷ್ಣಾ, ಘಟಪ್ರಭ ಹಾಗೂ ಮಲಪ್ರಭ ನದಿ ತೀರಗಳಲ್ಲಿ ಮೈಸೂರು ಭಾಗದಲ್ಲಿದ್ದ ಎರಡ್ಮೂರು ಜಾತಿಯ ತಳಿಗಳನ್ನು ಸಮೀಕರಿಸಿ ಆ ಮೂಲಕ ಕೃಷ್ಣವೇಣಿಯನ್ನು ತಯಾರು ಮಾಡಲಾಯಿತು. ಇದರಲ್ಲಿ ಕಾಥೆವಾಡದ ಗೀರ್ ಹಾಗೂ ಆಂದ್ರದ ನೆಲ್ಲೂರಿನ ಒಂಗಲ್ ಜಾತಿ ತಳಿಗಳನ್ನು ಮಿಶ್ರಣ ಮಾಡಿರಬಹುದು ಎನ್ನಲಾಗಿದೆ. ಆ ಕಾರಣಕ್ಕಾಗಿಯೇ ಕೃಷ್ಣವೇಣಿ ತಳಿಯ ಹೋರಿಗಳು ಉಳುಮೆಗೆ ಹಾಗೂ ಹಸುಗಳು ಅತ್ಯಕ ಹಾಲು ಕರೆಯಲು ಸಹಾಯಕವಾಗಿದ್ದವು.
ಈ ತಳಿ ಅತ್ಯಂತ ಶಕ್ತಿಯುತವಾದದ್ದು. ಯಾವುದೇ ಕೆಲಸ ಕಾರ್ಯಗಳಿಗಾದರೂ ಸರಿ ಸೈ ಎನ್ನುವಂಥದ್ದು. ಆದರೆ ಈಗ ಈ ತಳಿಯೇ ಮಾಯವಾಗುತ್ತಿದೆ. ಅದಕ್ಕೆ ಮೂಲ ಕಾರಣ ಇಲ್ಲಿನ ರೈತರ ನಿರ್ಲಕ್ಷ್ಯ, ಪಶು ಸಂಗೋಪನ ಇಲಾಖೆಯ ಬೇಜವಾಬ್ದಾರಿ ಹಾಗೂ ಅನ್ಯ ದೇಶಗಳ ಹುನ್ನಾರ. ಈ ಎಲ್ಲ ಹಿನ್ನೆಲೆಯಲ್ಲಿ ೧೯೪೬ರಲ್ಲಿ ೬.೫ ಲಕ್ಷ ಇದ್ದ ಕೃಷ್ಣವೇಣಿ ತಳಿ ಈಗ ಕೇವಲ ೨೮೧ಮಾತ್ರ! ಅದೂ ಈಗ ಎಲ್ಲ ಕಡೆ ಸಿಗುವುದಿಲ್ಲ. ಜಮಖಂಡಿ, ಅಥಣಿ, ಮುಧೋಳ್, ಚಿಕ್ಕೋಡಿ, ಚಿಂಚಿಲಿ, ರಾಯಭಾಗ, ಬೆಳಗಾವಿ, ಬಿಜಾಪು ಭಾಗಲಕೋಟೆ ಪ್ರದೇಶಗಳಲ್ಲಿ ಮಾತ್ರ ಕಾಣಬರುತ್ತದೆ. ಉಳಿದಂತೆ ದಕ್ಷಿಣ ಮಹಾರಾಷ್ಟ್ರದ ಸಾಂಗ್ಲಿ, ಈಚಲ, ಮಿರಾಜ್, ಈರಂದವಾಡ, ಕೊಲ್ಲಾಪುರ, ಸತಾರ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
ಇವು ಆಕಾರ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹೆಚ್ಚು ತೂಕ ಕೂಡ ಹೊಂದಿರುತ್ತವೆ. ಇವುಗಳ ಸಾಮರ್ಥ್ಯ ಹಾಗೂ ಕಷ್ಟ ಸಹಿಷ್ಣತೆಯನ್ನು ಮನಗಂಡ ಬ್ರೆಜಿಲ್ ಹಾಗೂ ಅಮೆರಿಕಾದ ಜಾನುವಾರು ತಳಿ ಅಭಿವೃದ್ಧಿ ಪರಿಣಿತರು ಅವುಗಳನ್ನು ತಮ್ಮ ದೇಶಗಳಿಗೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈ ಕೃಷ್ಣವೇಣಿ ಈಗ ಆವಿಷ್ಮಾರಗೊಂಡ ರಾಜ್ಯದಲ್ಲಿಯೇ ಅವನತಿಯ ಹಾದಿಯಲ್ಲಿವೆ.
ಅಮೃತ ಮಹಲ್ ಮತ್ತು ಪುಂಗನೂರು:
ಇದು ಕೂಡ ರಾಜ್ಯದಲ್ಲಿಯೇ ಅಸ್ತಿತ್ವ ಪಡೆದ ಕ್ರಾಸ್ ಬೀಡ್ ತಳಿ. ದೈಹಿಕ ಸಾಮರ್ಥ್ಯ ಹಾಗೂ ಶ್ರಮಶಕ್ತಿಯಿಂದ ಎಂಥ ಕೆಲಸಗಳನ್ನಾದರೂ ಮಾಡಬಹುದು ಎಂಬುದನ್ನು ಅರಿತ ಅಮೆರಿಕಾ, ಬ್ರೆಜಿಲ್ ಮುಂತಾದ ದೇಶಗಳನ್ನು ೧,೯೫೬ಕ್ಕಿಂತ ಮುಂಚಿತವಾಗಿಯೇ ಬಹುತೇಕ ರಾಸುಗಳನ್ನು ತಮ್ಮ ದೇಶಗಳಿಗೆ ಆಮದು ಮಾಡಿಕೊಂಡಿದ್ದಾರೆ.
ಇದರಿಂದಾಗಿ ಈ ತಳಿ ಕೂಡ ಇಲ್ಲಿ ಇಲ್ಲದಾಗಿದ್ದು, ಅವನತಿಯ ಹಾದಿಯಲ್ಲಿದೆ. ತರಿಕೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ಅಂದಾಜು ಒಂದು ಸಾವಿರ ಹೋರಿಗಳು ಮಾತ್ರ ಸಿಗಬಹುದು ಎನ್ನಲಾಗಿದೆ. ಇನ್ನು ಅಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಆವಿಷ್ಕಾರಗೊಳಿಸಲಾದ ಪುಂಗನೂರು ತಳಿ ಕೂಡ ವಿದೇಶಿಗರ ಓರೆಗಣ್ಣಿಗೆ ತುತ್ತಾಗಿ ಈಗ ಸಂಪೂರ್ಣವಾಗಿ ನಾಶವಾಗಿದೆ. ಈ ತಳಿಗಳನ್ನು ಹುಡುಕಾಡಿದರೆ ಆಂಧ್ರದ ಕೆಲವೇ ಕೆಲವು ಕಡೆಗಳಲ್ಲು ೧೦೦ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸಿಗಬಹುದು.
ದೇವಣಿ:
ಮಹಾರಾಷ್ಟ್ರದ ದೇವಣಿಯಲ್ಲಿ ಹಲವು ಜಾತಿಯ ತಳಿಗಳನ್ನು ಸೇರಿಸಿ ರೂಪಿಸಲಾದ ತಳಿಯೇ ದೇವಣಿ. ಇದೂ ಕೂಡ ಕೃಷ್ಣವೇಣಿಯಂತೆಯೇ ಬಲಾಢ್ಯ ಹಾಗೂ ಶಕ್ತಿಯುತವಾದ ತಳಿ. ಆದರೆ ಈಗ ಭಾರತದ ಯಾವ ಮೂಲೆಯಲ್ಲಿಯೂ ಇದರ ಮೂಲ ತಳಿ ಕಾಣಸಿಗುವುದಿಲ್ಲ. ಬದಲಿಗೆ ರೈತರು ಹಾಗೂ ಪಶುಸಂಗೋಪನೆ ಇಲಾಖೆಯ ಅಕಾರಿಗಳು ಇದರೊಂದಿಗೆ ಬೇರೆ ಕೀಳು ಜಾತಿಯ ತಳಿಗಳನ್ನು ಮಿಶ್ರಣ ಮಾಡಿ ಮೂಲ ತಳಿಯನ್ನೇ ಕುಲಗೆಡಿಸಿದ್ದಾರೆ. ಹೀಗಾಗಿ ಇದೂ ಕ್ರಾಸ್ ಬೀಡ್ ಆಗಿದೆ. ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ಮಾತ್ರ ಸುಮಾರು ೨೦ ಸಾವಿರ ಹೋರಿ ಹಾಗೂ ಆಕಳುಗಳು ಕಾಣಬರುತ್ತವೆ.
ಒಂಗಲ್ ಮತ್ತು ಕಾಂಗಾಯಾಮ್
ಆಂಧ್ರಪ್ರದೇಶದ ಗೋದಾವರಿ ನದಿ ತೀರದಲ್ಲಿ ಆವಿಷ್ಕಾರಗೊಳಿಸಿದ ಇನ್ನೊಂದು ದೇಸಿ ತಳಿ ಒಂಗಲ್. ಇದೂ ಕೂಡ ಬಲಿಷ್ಠ ತಳಿ. ಒಂದೇ ಒಂದು ಸಮಾಧಾನದ ಸಂಗತಿಯೆಂದರೆ ಆಂಧ್ರದ ಎಲ್ಲೆಡೆ ಇದು ಕಂಡು ಬರುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಈ ತಳಿಯ ರಾಸುಗಳು ಸಿಗುತ್ತವೆ. ಇದರ ಜತೆಗೆ ದೇಶದಲ್ಲಿ ಉಳಿದಿರುವ ಇನ್ನೊಂದು ತಳಿ ಕಾಂಗಾಯಾಮ್. ಇದೂ ಸಹ ತಮಿಳುನಾಡಿನ ಕೋಯಿಮತ್ತೂರು, ಸೇಲಂ, ಪಟ್ಟಾಯಾಮ್ ಮುಂತಾದ ಪ್ರದೇಶಗಳಲ್ಲಿ ಕಾಣಬರುತ್ತದೆ.
ಈ ಎಲ್ಲ ತಳಿಗಳೂ ಕೂಡ ಉಬಯ ರೀತಿಯ ಕೆಲಸಕ್ಕೆ ಉಪಯುಕ್ತವಾದವು. ಈ ಜಾತಿಯ ಹಸುಗಳು ಕನಿಷ್ಠ ೫ರಿಂದ ೬ಲೀ. ಹಾಲು ನೀಡುತ್ತವೆ. ಹೋಗಿಗಳು ಕನಿಷ್ಠ ೧೦ಗಂಟೆ ನಿರಂತರವಾಗಿ ಕೆಲಸ ಮಾಡಬಲ್ಲವು. ಆದರೆ ಈ ಎಲ್ಲ ತಳಿಯ ರಾಸುಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಅನಂತರದ ಹತ್ತು ವರ್ಷಗಳ ಕಾಲ ನಿರಂತರವಾಗಿ ಭಾರತದಿಂದ ಇಂಗ್ಲೇಂಡ್ ಮತ್ತಿರರ ದೇಶಗಳಿಗೆ ಕೊಂಡೊಯ್ದಿದ್ದಾರೆ. ೧,೮೬೦ರಲ್ಲಿಯೇ ಈಜಿಪ್ಟ್‌ನ ರಾಜ ಪಾಷಾ ಏಕ ಕಾಲಕ್ಕೆ ಸಾವಿರಾರು ರಾಸುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ. ಅವುಗಳನ್ನು ಆರಂಭದಲ್ಲಿ ಮಿಲಿಟರಿಗೆ ಬಳಸಿಕೊಳ್ಳಲಾಗುತ್ತಿತ್ತು. ಅನಂತರ ಅವುಗಳ ದುಡಿಯುವ ಸಾಮರ್ಥ್ಯವನ್ನು ಅರಿತು ಅವುಗಳನ್ನೇ ಬಳಸಿ ಹೊಸ ಹೊಸ ತಳಿಗಳನ್ನು ಕಂಡು ಹಿಡಿಯಲು ವಿದೇಶಗಳಲ್ಲಿರುವ ಕ್ಯಾಟಲ್‌ಬ್ರೀಡರ್ ಅಸೋಸಿಯೇಷ್‌ನ್‌ಗಳು (ಜಾನುವಾರು ತಳಿ ಅಭಿವೃದ್ಧಿ ಕೇಂದ್ರಗಳು) ಆರಂಭಿಸಿದವು.
ಅದೇ ಸಮಯದಲ್ಲಿ ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳು ಒಂದೊಂದಾಗಿ ಹಿಡಿತ ಸಾಸಲು ಆರಂಭಿಸಿದ್ದವು. ಹೀಗಾಗಿ ಪಾಶ್ಚಾತ್ಯೀಕರಣ, ಜಾಗತಿಕರಣದ ವ್ಯಾಮೋಹಕ್ಕೆ ಬಲಿಯಾದ ಇಲ್ಲಿನ ರೈತರು ಕೂಡ ಈ ದೇಸಿ ತಳಿಯ ಹಸು, ಹೋರಿಗಳ ಮೇಲೆ ಹಂತ ಹಂತವಾಗಿ ನಿರ್ಲಕ್ಷ್ಯ ತೋರತೊಡಗಿದರು. ಅದರ ಪರಿಣಾಮ ಇಂದು ಭಾರತದ ಬಹುತೇಕ ಬಲಾಡ್ಯ ತಳಿಗಳು ವಿದೇಶಗಳ ಪಾಲಾಗಿವೆ.
ಪೇಟೆಂಟ್‌ಗೆ ಲಾಭಿ:
ಬೆರಳು ಸಿಕ್ಕರೆ ಹಸ್ತವನ್ನೇ ನುಂಗುವ ಜಾಯಮಾನದವರಾದ ವಿದೇಶೀಯರು ಭಾರತದ ಪ್ರಾದೇಶಿಕ ತಳಿಯ ರಾಸುಗಳ ರುಚಿ ನೋಡಿದ್ದರಿಂದ ಇಲ್ಲಿನ ಬಹುತೇಕ ಎಲ್ಲ ತಳಿಗಳ ಮೇಲು ಕಣ್ಣು ಹಾಕಿದ್ದರು. ಇಲ್ಲಿನ ಪಶು ಸಂಗೋಪನಾ ಇಲಾಖೆ ಹಾಗೂ ರೈತರು ಸಹ ಇದನ್ನು ನೋಡುತ್ತಾ ಕುಳಿತಿದ್ದರು. ಅದರ ಪರಿಣಾಮವಾಗಿ ಈ ಎಲ್ಲ ಬಲಾಡ್ಯ ತಳಿಗಳ ಆವಿಷ್ಕಾರಕ್ಕೆ ಕಾರಣವಾದ ತಳಿಗಳಲ್ಲಿ ಒಂದಾದ ಅಪ್ಪಟ ದೇಸಿ ದನ ‘ಮಲೆನಾಡು ಗಿಡ್ಡ’ದ ಮೇಲೂ ಕೆಲ ದಿನಗಳ ಹಿಂದಷ್ಟೇ ಪೇಟೆಂಟ್ ಪಡೆಯುವ ಯತ್ನಗಳು ನಡೆದಿದ್ದವು. ಅದು ಅನಂತರ ಕೈ ತಪ್ಪಿತು. ಮಲೆನಾಡು ಗಿಡ್ಡದ ಹಾಲಿನಲ್ಲಿ ಕೊಬ್ಬಿನ ಅಂಶ (ಕೊಲೆಷ್ಟ್ರಾಲ್) ಕಡಿಮೆ ಇರುವುದರಿಂದ ಇದು ಆರೋಗ್ಯಕ್ಕೆ ಬೇರೆ ತಳಿಯ ಹಾಲಿಗಿಂತ ಅತ್ಯುತ್ತಮ ಎಂಬ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಪೇಟೆಂಟ್ ಲಾಭಿ ನಡೆದಿತ್ತು.
ಬಲಿಷ್ಠ ಹಾಗೂ ಶಕ್ತಿಯುತವಾದ ಬಹುತೇಕ ತಳಿಗಳ ಹಸುಗಳಿಗೆ ಅಸಮರ್ಥ ಜಾತಿಯ ಹೋರಿಗಳ ವೀರ್ಯವನ್ನು ಕೃತಕವಾಗಿ ಹಾಕುವುದನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿಯೂ ಇಲ್ಲಿನ ದೇಸಿ ತಳಿಗಳು ಸರ್ವನಾಶವಾಗಿವೆ. ಆದ್ದರಿಂದ ಕೃಷಿ ನಿಜಕ್ಕೂ ಉಳಿಯಬೇಕೆಂದರೆ ದೇಸಿ ತಳಿಗಳನ್ನು ಮೊದಲು ಉಳಿಸಿಕೊಳ್ಳುವ ಪ್ರಯತ್ನವನ್ನು ರೈತರು ಮಾಡಬೇಕಿದೆ. ಇಲ್ಲವಾದರಲ್ಲಿ ಇರುವ ತಳಿಗಳೂ ನಾಶವಾಗುವುದರಲ್ಲಿ ಸಂಶಯವಿಲ್ಲ...

Wednesday, October 14, 2009

ನೆರೆ ಪರಿಹಾರ: ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ !

ಉತ್ತರ ಕರ್ನಾಟಕದ ಮಂದಿ ‘ನೆರೆಯ ತೊರೆ’ಯಲ್ಲಿ ತೇಲಿ ಹೋಗುತ್ತಿದ್ದಾರೆಂಬ ಕಾರಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಮಾನವೀಯತೆ, ಮಮಕಾರ ಧಾರಾಕಾರವಾಗಿ ಹರಿಯುತ್ತಿದೆ. ಅದರ ಜತೆಗೆ ಕೋಟಿ ಕೋಟಿ ರೂ. ಹಣ ಕೂಡ ಕೋಡಿಯಾಗಿ ಉತ್ತರ ದಿಕ್ಕಿಗೆ ಹರಿಯುತ್ತಲೇ ಇದೆ. ಜತೆಗೆ ದವಸ, ಧಾನ್ಯ, ಬಟ್ಟೆ, ದಿನಸಿ ವಸ್ತುಗಳು, ಸಿದ್ಧ ಆಹಾರಗಳು ಕೂಡ ಲೋಡುಗಟ್ಟಲೆ ಸಾಗುತ್ತಿದೆ...
ಕೆಲವರು ದಾನವನ್ನು ನೇರವಾಗಿ ಹೋಗಿ ತಮಗೆ ಸಿಕ್ಕ ಅಮಾಯಕ ಜನರಿಗೆ ತಲುಪಿಸಿ, ಅವರ ಕಷ್ಟ ನಷ್ಟಗಳನ್ನು ಕೇಳಿ ‘ಭರವಸೆಯ ಬೆಳಕು’ ನೀಡಿ ಬರುತ್ತಿದ್ದಾರೆ (ಅದರಲ್ಲೂ ಕೆಲವರು ಕೇವಲ ಮಂತ್ರಾಲಯಕ್ಕೆ ತೆರಳಿ ಪುನೀತರಾಗುತ್ತಿದ್ದಾರೆ!). ಇನ್ನು ಕೆಲವರು ಸರಕಾರಕ್ಕೆ, ಕೆಲವು ಸಂಘ ಸಂಸ್ಥೆಗಳಿಗೆ, ಮಾಧ್ಯಮ ಕೇಂದ್ರಗಳಿಗೆ ತಲುಪಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡ ನಿಧಿ ಸಂಗ್ರಹ ಯಾತ್ರೆ’ಯಲ್ಲಿ ಬೆಂಗಳೂರಿನ ಒಂದೆರಡು ಗಲ್ಲಿಗಳಲ್ಲಿ (ಕೇವಲ ಮೂರು ದಿನ ಪಾದಯಾತ್ರೆ ಮಾಡಿದ್ದಕ್ಕೆ) ಬರೊಬ್ಬರಿ ೭೦೦ ಕೋಟಿ ರೂ. ಹಣ ಸಂಗ್ರಹವಾಗಿದೆ.
ಕೇಂದ್ರ ಸರಕಾರದಿಂದ ಈಗಾಗಲೇ ೧೫೨ ಕೋಟಿ ರೂ. ಗಳನ್ನು ನೆರೆ ಸಂತ್ರಸ್ತರ ಪರಿಹಾರ ನಿಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರಕಾರ ಕೂಡ ೩೦೦೦ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಆದರೆ ಇದೆಲ್ಲ ಮೇಲ್ನೋಟಕ್ಕೆ ಕಾಣುವ ಸತ್ಯ! ರಾಜ್ಯ ಸರಕಾರವೇ ಸಾಮಾನ್ಯ ಖಾತೆ ಭೂಮಿಗೆ ಎಕರೆಗೆ ೮೦೦ ರೂ., ನೀರಾವರಿ ಜಮೀನಿನ ಎಕರೆ ಬೆಳೆಗೆ ೧೬೦೦ರೂ., ತೋಟಗಾರಿಕೆ ಬೆಳೆ ನಾಶಕ್ಕೆ ಎಕರೆಗೆ ೨೬೦೦ ರೂ. ಪರಿಹಾರ ನೀಡಲಾಗುವುದೆಂದು ಆದೇಶಿಸಿದೆ. ಇದರ ಜತೆಗೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ ೫೦೦೦ರೂ. ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ. ಇದೆಲ್ಲ ಯಾವ ಪುರುಷಾರ್ಥಕ್ಕೆ ? ಸರಕಾರ ನೀಡುವ ಸಾವಿರಾರು ರೂ. ಹಣದಿಂದ ಕಳೆದು ಹೋದ ಬದುಕನ್ನು ಒಬ್ಬ ರೈತ ಅಥವಾ ಸಾಮಾನ್ಯ ಪ್ರಜೆ ಮತ್ತೆ ಕಟ್ಟಿಕೊಳ್ಳಲು ಸಾಧ್ಯವೆ ?
ರಾಜ್ಯದಲ್ಲಿ ನೆರೆ ಹಾವಳಿಯಿಂದ ಈಗಾಲೇ ೨೦ ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸರಕಾರವೇ ಘೋಷಿಸಿದೆ. ಇಷ್ಟಾದರೂ ಪರಿಹಾರ ನೀಡುತ್ತಿರುವುದು ಮಾತ್ರ ಪುಡಿಗಾಸು ! ‘ಮಠ, ಮಂದಿರಗಳ ಏಳಿಗೆ’ಗೆ ಹಿಂದು ಮುಂದು ನೋಡದೆ ನೂರಾರು ಕೋಟಿ ರೂ. ನೀಡಿದ ರಾಜ್ಯ ಸರಕಾರಕ್ಕೆ ಸಮಾಜದ ಹಿತ ಕಾಯುವ ದೂರದೃಷ್ಟಿ ಮೊದಲೇ ಇರಲಿಲ್ಲ. ಈಗ ಪ್ರಕೃತಿ ವಿಕೋಪ ಸಂಭವಿಸಿದ ನಂತರ ಅದನ್ನು ಸರಿದೂಗಿಸಲು ನೇರವಾಗಿ ಜನರ ಬಳಿ ಬಂದು ದಾನ ಮಾಡಿಎಂದು ಬೇಡುವುದರ ಜತೆಗೆ ಹಲವು ಕಸರತ್ತುಗಳನ್ನು ನಡೆಸಿದೆ. ನಡೆಸುತ್ತಲೂ ಇದೆ.
ಇಷ್ಟಾದರೂ ಈಗಾಲೇ ರಾಜ್ಯ ಸರಕಾರದ ಬೊಕ್ಕಸಕ್ಕೆ ಹತ್ತಿರತ್ತಿರ ಸಾವಿರ ಕೋಟಿ ರೂ. ಹಣ ಜನ ಸಾಮಾನ್ಯರಿಂದ ಸಂಗ್ರಹವಾಗಿದೆ. ಆದರೆ ಅದಕ್ಕೆಲ್ಲಾ ಲೆಕ್ಕವೇ ಇಲ್ಲ. ಸಾಧ್ಯವಾದರೆ ಅದೆಲ್ಲವನ್ನು ಪಾರದರ್ಶಕವಾಗಿ ಲೆಕ್ಕ ನೀಡಲಿ. ನಿರ್ಗತಿಕರಿಗೆ ಹಣ ನೀಡಲು ಇನ್ನೂ ಕೆಲವರು ಹಿಂದು ಮುಂದು ನೋಡುತ್ತಿದ್ದಾರೆ. ಕಾರಣ ಸರಕಾರದ ಬೊಕ್ಕಸಕ್ಕೆ ಹೋದ ಹಣ ಸ್ಮಶಾನಕ್ಕೆ ಹೋದ ಹೆಣ ಎರಡೂ ವಾಪಸ್ ಬರುವುದಿಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂಬ ಭಯ, ಗಾಬರಿ ಅವರನ್ನು ಕಾಡುತ್ತಿದೆ.
ರಾಜ್ಯದಲ್ಲಿ ಮಾನವೀಯತೆಗೆ ಬರವಿಲ್ಲ. ಆದರೆ ಅದರ ನೆಪದಲ್ಲಿ ಹರಿಯುವ ಹಣ ನೇರವಾಗಿ ಸಂತ್ರಸ್ತರಿಗೆ ತಲುಪುವುದೋ ಇಲ್ಲವೋ ಎಂಬ ಆತಂಕ ರಾಜ್ಯದ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡಲು ಎಲ್ಲ ಮಾಧ್ಯಮಗಳು(ಮುದ್ರಣ ಹಾಗೂ ದೃಶ್ಯ) ಪ್ರತ್ಯೇಕವಾಗಿ ಹಣ, ದವಸ ಧಾನ್ಯ, ನಿತ್ಯ ಬಳಕೆಯ ಸಾಮಗ್ರಿಗಳನ್ನು ಸಂಗ್ರಹಿಸುತ್ತಲೇ ಇವೆ. ಅವುಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಲೇ ಇವೆ. ಈ ವಿಚಾರ ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತು. ಆದರೂ ರಾಜ್ಯ ಬಿಜೆಪಿ ಸರಕಾರ ಪ್ರತಿನಿತ್ಯ ಲಕ್ಷಾಂತರ ರೂ. ಮೌಲ್ಯದ ಜಾಹೀರಾತುಗಳನ್ನು ಎಲ್ಲ ಮಾಧ್ಯಮಗಳಿಗೆ ನೀಡುತ್ತಲೇ ಇದೆ.
ಸಾಲದ್ದಕ್ಕೆ ಪ್ರತಿಯೊಂದು ಇಲಾಖೆಯ ಸಚಿವರೂ ತಮ್ಮ ಮುಖಚಿತ್ರವನ್ನು ಒಳಗೊಂಡ ಹಾಗೂ ಇಲಾಖೆಯ ಅಕಾರಿಗಳ ಹೆಸರನ್ನು ಹೊಂದಿದ ಜಾಹೀರಾತನ್ನು ನೀಡುತ್ತಲೇ ಇವೆ. ಇದಕ್ಕೆ ಒಂದು ರಾಜ್ಯ ಮಟ್ಟದ ದಿನಪತ್ರಿಕೆಗೆ ಅಥವಾ ದೃಶ್ಯ ಮಾಧ್ಯಮಕ್ಕೆ ಒಂದು ದಿನಕ್ಕೆ ಲಕ್ಷಾನುಗಟ್ಟಲೆ ಹಣ ನೀಡಬೇಕು. ಆದರೆ ಆ ಹಣ ಯಾರ ಮನೆಯದು !? ಪ್ರತಿನಿತ್ಯ ಹೀಗೆ ಸರಕಾರಿ ಬೊಕ್ಕಸದಿಂದ ಅನಾವಶ್ಯಕವಾಗಿ ಮಾಧ್ಯಮ ಕೇಂದ್ರಗಳಿಗೆ ಜಾಹೀರಾತು ಹೆಸರಿನಲ್ಲಿ ಹಣ ಸರಬರಾಜು ಮಾಡುವ ಮೂಲಕ ಬಿಜೆಪಿ ಸರಕಾರ ಮಾಧ್ಯಮಗಳ ಜತೆಗೆ ಅಮೂರ್ತ ಸ್ವರೂಪದ ಸ್ನೇಹ ಸಂಬಂಧ ಬೆಳೆಸಿಕೊಳ್ಳಲು ಹವಣಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
ಪ್ರತಿನಿತ್ಯ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದಾಗೆಲ್ಲ ಒಂದಲ್ಲಾ ಒಂದು ರೀತಿ ನೆರೆ, ಪರಿಹಾರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹೀಗಿರುವಾಗಿ ಅದಕ್ಕೆ ಲಕ್ಷಾಂತರ ಮೌಲ್ಯದ ಜಾಹೀರಾತು ಅಗತ್ಯವೇ ? ಪತ್ರಿಕಾಗೋಷ್ಠಿಯಲ್ಲಿಯೇ ಈ ವಿಚಾರವನ್ನು ಹೇಳಿದರೆ ಮಾಧ್ಯಮಗಳು ಅದನ್ನು ಪ್ರಕಟಿಸುವುದಿಲ್ಲ ಎನ್ನುತ್ತವೆಯೇ? ಅವರೂ ಕೂಡ ತಮ್ಮದೇ ಆದ ರೀತಿ ನಿ ಸಂಗ್ರಹಣೆ ಮೂಲಕ ಮಾನವೀಯತೆ ಮೆರೆಯುತ್ತಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದೇ ಇಲ್ಲವೆ ?
ಕೇವಲ ಪ್ರಚಾರ ಪಡೆಯುವ ಹುನ್ನಾರವನ್ನಿಟ್ಟುಕೊಂಡು ‘ಪೇಪರ್ ಟೈಗರ್’ಗಳಾಗಲು ಸರಕಾರದ ಸಚಿವರು, ಶಾಸಕರು, ಹಿರಿಯ ಅಕಾರಿಗಳು ಯತ್ನಿಸಿದರೆ ಅದರ ಪರಿಣಾಮ ಆಗುವುದು ಜನ ಸಾಮಾನ್ಯರ ಮೇಲೆ ಎಂಬ ಸಣ್ಣ ಸತ್ಯವನ್ನು ಅವರು ಮನಗಾಣಬೇಕಿದೆ. ಅನಾವಶ್ಯಕವಾಗಿ ಜಾಹೀರಾತಿಗಾಗಿ ಸುರಿಯುವ ಲಕ್ಷಾಂತರ ರೂ. ಹಣವನ್ನು ಅದೇ ನಿರ್ಗತಿಕ, ಬಡಬಗ್ಗರ ಬದುಕಿನ ಏಳಿಗೆಗೆ, ಅವರಿಗೆ ‘ಬೆಳಕು ನೀಡಲು’ ಉಪಯೋಗಿಸಿದರೆ ಕನಿಷ್ಠ ಒಂದಷ್ಟು ಮಂದಿಯಾದರೂ ನೆಮ್ಮದಿ ಕಂಡುಕೊಂಡಾರು... ಆದರೆ ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ ಎಂಬಂತೆ ಜನಪ್ರತಿನಿಗಳು ಬರೀ ಪ್ರಚಾರ, ಮೋಜು ಮಸ್ತಿಗೆ ನಿಂತರೆ ಜನರೇ ಬುದ್ದಿ ಕಲಿಸಿಯಾರು ಎಚ್ಚರವಿರಲಿ... ನೊಂದವರು ನೋವಿನ ನಿಟ್ಟುಸಿರ ಬಿಸಿ ತಟ್ಟದೆ ಇರದು.

Friday, October 2, 2009

ಉತ್ತರ ತತ್ತರ: ಸರಕಾರಕ್ಕಾಗಲಿಲ್ಲ ಎಚ್ಚರ...!

ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಡೀ ಉತ್ತರ ಕರ್ನಾಟಕ ತತ್ತರಗೊಂಡಿದೆ. ಆದರೆ ವಿಧಾನಸೌಧದಲ್ಲಿ ಮಾತ್ರ ಒಬ್ಬರೇ ಒಬ್ಬ ಸಚಿವರೂ ಇಲ್ಲ! ಎಲ್ಲರೂ ಸುತ್ತೂರು ಮಠದಲ್ಲಿ ‘ವ್ಯಾಯಾಮ’ ಮಾಡುತ್ತ, ಚಿಂತನ ಬೈಠಕ್ ನಡೆಸಿಕೊಂಡಿದ್ದರು. ಇದ್ದಕ್ಕಿಂದ್ದಂತೆ ವರುಣ ಮಂತ್ರಾಲಯದ ಒಳಗೆ ನುಗ್ಗಿದ್ದಾನೆ. ಆಗ ಸಚಿವೋದಯರೆಲ್ಲಾ ವಿಧಾನಸೌಧದ ಕಡೆ ಮುಖ ಮಾಡಿ ನಿಂತಿದ್ದಾರೆ!!
ಬಳ್ಳಾರಿ, ಬಿಜಾಪುರ, ಕೊಪ್ಪಳ, ರಾಯಚೂರು, ಬೆಳಗಾವಿ, ಧಾವಣಗೆರೆ, ಚಿತ್ರದುರ್ಗ, ದಾರವಾಡ, ಗದಗ ಜಿಲ್ಲೆಗಳಲ್ಲಿ ಮೂರು ದಿನಗಳಿಂದಲೂ ನಿರಂತರವಾಗಿ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಮಳೆ ಸುರಿಯುತ್ತಲೇ ಇದೆ. ಅಲ್ಲಿಯ ಜನರಿಗೆ ವರುಣ ಯಮನಂತೆ ಗೋಚರಿಸುತ್ತಿದ್ದಾನೆ. ಮಾಧ್ಯಮಗಳು ಮೇಲಿಂದ ಮೇಲೆ ಅವುಗಳ ಬಗ್ಗೆ ವರದಿ ಮಾಡುತ್ತಲೇ ಇವೆ. ಆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಹೋದ್ಯೋಗಿ ಮಂತ್ರಿಗಳ ‘ಚಿಂತನ ಬೈಠಕ್’ ಮುಗಿದಿರಲಿಲ್ಲ.
ಇವರಿಗೆಲ್ಲ ಜನತೆಯ ಕಷ್ಟ ಕಾರ್ಪಣ್ಯಗಳಿಗಿಂತ ಮೋದಿಯ ‘ಪಾಠ ’ವೇ ಮುಖ್ಯವಾಗಿತ್ತು. ಪ್ರತಿಯೊಂದನ್ನೂ ರಾಜಕೀಯದ ನಾಸಿಕದಿಂದಲೇ ಮೂಸಿ ನೋಡುವ ಜನಪ್ರತಿನಿಗಳಿಗೆ ಜನತೆಯ ಆರ್ಥನಾದ ಮಾತ್ರ ಕೇಳಲೇ ಇಲ್ಲ. ಮೊದಲ ದಿನವೇ ಬಿಜಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ೨೨ಮಂದಿ ಸಾವಿಗೀಡಾದರು. ಆದರೆ ಅದು ಮುಖ್ಯಮಂತ್ರಿಗಳ ಹಾಗೂ ರಾಜ್ಯಸರಕಾರದೊಳಗಿರುವ ಮಂತ್ರಿ ಮಹೋದಯರ ಹೃದಯವನ್ನು ಕರಗಿಸಲಿಲ್ಲ. ಏಕೆಂದರೆ ಅವರೆಲ್ಲ ಜನ‘ಸಾಮಾನ್ಯರು’.
ಪ್ರತಿಪಕ್ಷದ ನಾಯಕರು ಇದನ್ನು ಗಮನಿಸಿ ಮುಖ್ಯಮಂತ್ರಿಗಳನ್ನು ಮಾತಿನ ಮೂಲಕ ತಿವಿದರೂ ಯಡಿಯೂರಪ್ಪ ಮಾತ್ರ ಎಚ್ಚೆತ್ತುಕೊಳ್ಳಲೇ ಇಲ್ಲ. ಪ್ರತಿಪಕ್ಷಗಳ ಮಾತನ್ನು ಕೇವಲ ಟೀಕೆ ಎಂತಲೇ ನೋಡುವ ಜಾಯಮಾನದ ಯಡಿಯೂರಪ್ಪ ಮಾತ್ರ ‘ಪ್ರತಿಪಕ್ಷದವರ ತಟ್ಟೆಯಲ್ಲಿ ಆನೆಯೇ ಬಿದ್ದಿದೆ. ಅದನ್ನು ಎತ್ತಿಕೊಳ್ಳಲಿ’ ಎಂದು ಕೇಂದ್ರದ ಕಡೆ ಕೈ ತೋರಿಸಿ ಪ್ರತಿ ಟೀಕೆ ಮಾಡಿದರೆ ಹೊರತು, ಜನ ಸಾಮಾನ್ಯರ ರಕ್ಷಣೆಗೆ ಮುಂದಾಗಲೇ ಇಲ್ಲ. ಅದರ ಫಲವಾಗಿ ಮಳೇ ಶುರುವಾದ ಮೂರೇ ದಿನಕ್ಕೆ ಇಡೀ ಉತ್ತರ ಕರ್ನಾಟಕದಲ್ಲಿ ೧೦೯ ಮಂದಿ ಕೊನೆಯುಸಿರೆಳೆದಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ರಾಜ್ಯದ ರೈತರ, ಜನ ಸಾಮಾನ್ಯರ ಬಗ್ಗೆ ಇರುವ ‘ಕಾಳಜಿ’ !!
ಅಂದರೆ ಸಿಎಂ ಹೋಗಿ ಮಳೆ ನಿಲ್ಲಿಸುತ್ತಾರೆ ಎಂದಲ್ಲ. ಕೊನೇ ಪಕ್ಷ ಅದಕ್ಕೆ ಸ್ಪಂದಿಸಿ ನಡುಗಡೆಗಳಲ್ಲಿ, ನೀರಿನಲ್ಲಿ ಸಿಕ್ಕಿಕೊಂಡವರನ್ನು ತಮ್ಮ ನಿರ್ದೇಶನದ ಮೂಲಕ ರಕ್ಷಿಸಬಹುದು. ನಿರಾಶ್ರಿತರಿಗೆ ಎಲ್ಲಾದರೂ ಸುರಕ್ಷಿತ ಸ್ಥಳದಲ್ಲಿ ಆಶ್ರಯ ನೀಡಬಹುದು. ಆದರೆ ಆ ಸಣ್ಣ ಕೆಲಸವನ್ನೇ ಮಾಡಲು ಇವರಿಗೆ ಮನಸಿರಲಿಲ್ಲ.
ಸರಕಾರದ ಮೇಲೆ ಟೀಕೆ ಸಾಮಾನ್ಯ. ಆದರೆ ಅದರಲ್ಲೂ ಒಂದು ಕಾಳಜಿ ಇರುತ್ತದೆ ಎನ್ನುವುದನ್ನೇ ಮರೆತ ಸಿಎಂ, ಥೇಟ್ ತೊಗಲಕ್ ರೀತಿ ವರ್ತಿಸುತ್ತಿರುವುದು ಮಾತ್ರ ನಿಜಕ್ಕೂ ನಾಚಿಕೆಗೇಡು. ನಿತ್ಯವೂ ಉತ್ತರ ಕರ್ನಾಟಕ ತತ್ತರಗೊಳ್ಳುತ್ತಿದ್ದು, ಸಾವು, ನೋವು ಸಂಭವಿಸುತ್ತಲೇ ಇದೆ. ಆದರೂ ಅತ್ತ ಕಡೆ ತಿರುಗಿ ಕೂಡ ನೋಡಲಿಲ್ಲ. ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾದರೆ, ಅವರ ಸಾಕು ದನ, ಕುರಿಗಳು ಸಾವಿಗೀಡಾದರೆ, ಜನ ಬೀದಿಗೆ ಬಂದರೆ ಇವರಿಗೆ ನಷ್ಟ, ಕಷ್ಟ ಎನಿಸುವುದೇ ಇಲ್ಲ.
ಮಾತೆತ್ತಿದರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಯಡಿಯೂರಪ್ಪ ರಾಜ್ಯಸರಕಾರದಿಂದ ಜನ ಸಾಮಾನ್ಯರ ಏಳಿಗೆಗೆ ಏನೆಲ್ಲಾ ಮಾಡಿದ್ದಾರೆ ಎಂದು ಪಟ್ಟಿ ಮಾಡಲಿ. ಪ್ರತಿಯೊಂದನ್ನು ‘ರಾಜಕೀಯ ಲಾಭ’ದ ದೃಷ್ಟಿಯಿಂದಲೇ ನೋಡುವ ಹಳದಿ ಕಣ್ಣಿನ ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರಲು ತಮ್ಮನ್ನು ಕೈ ಹಿಡಿದಿದ್ದರು ಅದೇ ಉತ್ತರ ಕರ್ನಾಟಕದ ಮಂದಿ ಎನ್ನುವುದನ್ನು ಮರೆತಂತಿದೆ.
ಅಕಾರಕ್ಕೇರುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದರು. ಅದೇ ಸಮಯದಲ್ಲಿ ಬರ ಬಂದು ರೈತರು ಸಂಕಷ್ಟದಲ್ಲಿದ್ದಾರೆಂದು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿದಾಗ ‘ಇನ್ನು ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವುದೇ ನನ್ನ ಕೆಲಸ. ಹಾರ ತುರಾಯಿಗಳನ್ನು ನನಗೆ ಹಾಕಬೇಡಿ, ಅಂಥ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಬೇಡಿ’. ಎಂದ ಸಿಎಂ ಗೆ ಈಗ ತಾವು ಹೇಳಿದ ಮಾತು ಮರೆತುಹೋದಂತಿದೆ. ಆ ಕಾರಣಕ್ಕೇ ಜಲಪ್ರಳಯದಿಂದ ನೂರಾರು ಮಂದಿ ಕೊನೆಯುಸಿರೆಳೆಯುತ್ತಿದ್ದರೂ ಯಡಿಯೂರಪ್ಪ ಮಾತ್ರ ಡಾಬಸ್‌ಪೇಟೆಯಲ್ಲಿ ಬೆಳ್ಳಿ ಕಿರೀಟ ತೊಟ್ಟುಕೊಂಡು, ಸನ್ಮಾನ ಮಾಡಿಸಿಕೊಳ್ಳಲು ಬೆಂಗಳೂರಿನಿಂದ ತೆರಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿದೆಯಾ...?
ನೆರೆಯ ಆಂಧ್ರ ಪ್ರದೇಶದಲ್ಲೂ ಕೂಡ ಪ್ರವಾಹ ಬಂದಿದೆ. ಆದರೆ ಅಲ್ಲಿನ ಸರಕಾರ ಸ್ಪಂದಿಸಿದ ರೀತಿಗೂ ಕರ್ನಾಟಕದ ಬಿಜೆಪಿ ಸರಕಾರ ಸ್ಪಂದಿಸಿದ ರೀತಿ ಎರಡನ್ನೂ ನೋಡಿದರೆ ಇದು ನಿಜಕ್ಕೂ ಮಾನವೀಯತೆ ಮರೆತ ಸರಕಾರ ಎಂದು ಎನಿಸದಿರದು.
೨೦೦೮-೦೯ನೇ ಸಾಲಿನಲ್ಲಿ ಸಿಆರ್‌ಎಫ್ ಯೋಜನೆಯಡಿ ೯೯.೫೫ ಕೋಟಿ ರೂ. (ರಾಜ್ಯದ ಪಾಲು ೩೩.೧೮ಕೋಟಿ.), ಎನ್‌ಸಿಸಿಎಫ್ ಅನುದಾನ ೧೦೯.೯೧ ಕೋಟಿ ರೂ. (ರಾಜ್ಯದ ಪಾಲು ೭೭.೩೩ ಕೋಟಿ ರೂ.) ಸೇರಿ ಪ್ರಕೃತಿ ವಿಕೋಪ ಪರಿಹಾರ ನಿಯಡಿ ೩೨೧.೮೩ ಕೋಟಿ ರೂ. ಬಳಕೆ ಮಾಡಬೇಕಿದೆ. ೨೦೦೯-೧೦ನೇ ಸಾಲಿನಲ್ಲಿ ಸಿಆರ್‌ಎಫ್, ಎನ್‌ಸಿಸಿಎಪ್ ೧೫೩.೫೧ ಕೋಟಿ ರೂ. ಬಳಕೆಯಾಗಬೇಕಿದೆ. ಆದರೆ ಈ ಹಣದಲ್ಲಿ ಒಂದು ಪೈಸೆ ಕೂಡ ಬಳಕೆ ಮಾಡಿಕೊಂದಿಲ್ಲ. ಆದರೆ ಕೇಂದ್ರದ ಕಡೆ ಕೈ ತೋರಿಸಿ ಪ್ರತಿಪಕ್ಷದ ನಾಯಕರಂತೆ ವರ್ತಿಸುವುದು ಇನ್ನೂ ನಿಂತಿಲ್ಲ. ಇದು ನಿಜಕ್ಕೂ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ವರ್ತಿಸುವವರ ಲಕ್ಷಣವೇ?
ಮಂತ್ರಾಲಯದಲ್ಲಿ ಸ್ವಾಮೀಜಿಯೊಬ್ಬರು ಜಲ ಪ್ರವಾಹಕ್ಕೆ ಸಿಕ್ಕು ೨ನೇ ಮಹಡಿ ಏರಿ ಕುಳಿತಿದ್ದಾರೆ ಎಂಬ ಸುದ್ದಿ ಬಂದ ನಂತರ ಹೋಗಿ ದಿಢೀರ್ ಸಭೆ ಕರೆದು ಬೆಂಗಳೂರಿನಿಂದ ಎರಡು ಹೆಲಿಕ್ಯಾಪ್ಟರ್ ಕಳುಹಿಸಿದ್ದಾರೆ ಮುಖ್ಯಮಂತ್ರಿ. ಇವರಿಗೆ ಸ್ವಾಮೀಜಿಗಳು ಮಾತ್ರ ಮನುಷ್ಯರಂತೆ ಕಾಣಿಸುತ್ತಾರೆಯೇ? ಜನ ಸಾಮಾನ್ಯರದ್ದು ಕೂಡ ಜೀವ ಎಂದು ಒಮ್ಮೆಯೂ ಅನ್ನಿಸುವುದಿಲ್ಲವೆ ? ಹೋರಾಟದ ಹಾದಿಯಲ್ಲೇ ಬೆಳದು ಬಂದ ಮುಖ್ಯಮಂತ್ರಿ ಯಡಿಯೂರಪ್ಪ , ಈ ರೀತಿ ಅಮಾನವೀಯವಾಗಿ ವರ್ತಿಸುವ ಬದಲು ಗೌರವಯುತವಾದ ಆ ಸ್ಥಾನಕ್ಕೆ ರಾಜೀನಾಮೆ ಗೀಚಿ, ತಾವೇ ಒಂದು ‘ಮಠ’ ಕಟ್ಟಿ ಅಲ್ಲಿಗೆ ತಾವೇ ಸ್ವಾಮೀಜಿಯಾಗಿ ಕುಳಿತುಕೊಳ್ಳುವುದು ಒಳ್ಳೆಯದು. ಆಗಲಾದರೂ ಕೆಲವರಿಗೆ ಒಳ್ಳೆಯದಾದರೂ ಆಗಬಹುದು...
Powered By Blogger