Thursday, August 27, 2009

ಹಂದಿಜ್ವರ: ಯಾಕೆ ಈ ಥರ ?

ಕುಟುಂಬ ಸಮೇತ ಶಿವಮೊಗ್ಗಕ್ಕೆ ಹೊರಡಲೆಂದು ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಾಗ ಸರಿ ಸುಮಾರು ೧೦ ಗಂಟೆ. ರಾಷ್ಟ್ರದಾದ್ಯಂತ ಈಗ ಹಂದಿ ಜ್ವರ(ಎಚ್೧ಎನ್೧)ದ್ದೇ ಸುದ್ದಿ. ಸುಖಾ ಸುಮ್ಮನೆ ಸಾಯುವುದು ಎಂದರೆ ಯಾರಿಗೆ ತಾನೆ ಭಯ ಆಗುವುದಿಲ್ಲ? ಅದಕ್ಕೇ ರೈಲ್ವೆ ನಿಲ್ದಾಣಕ್ಕೆ ಬರುವ ಕೆಲವರು ಮುಖಕ್ಕೆ ಮಾಸ್ಕ್(ಮುಖಗವಸು) ಹಾಕಿಕೊಂಡಿದ್ದರು.
ರೈಲ್ವೆ ನಿಲ್ದಾಣದಲ್ಲಿರುವ ಕೆಲವು ಮೆಡಿಕಲ್ ಸ್ಟೋರ್‌ಗಳಲ್ಲಿ ೧೦ರೂ.ಗೆ ಮಾರುವ ಮಾಸ್ಕ್‌ಗಳನ್ನು ೨೦, ೩೦ರೂ.ಗೆ ಮಾರಿಕೊಳ್ಳುತ್ತಿದ್ದರು. ಅದು ವ್ಯಾಪಾರಿ ವಂಚಕತನ. ಇರಲಿ, ಆದರೆ ಮಾಸ್ಕ್ ಹಾಕಿಕೊಂಡು ನಿಲ್ದಾಣದ ಒಳಗೆ ಹೋಗುವವರನ್ನು ಮಾಸ್ಕ್ ಹಾಕಿಕೊಳ್ಳದವರು ನೋಡುತ್ತಿದ್ದ ಹಾಗೂ ಗಮನಿಸುತ್ತಿದ್ದ ರೀತಿ ನೋಡಿದರೆ ನಿಜಕ್ಕೂ ಭಯವಾಗುತ್ತಿತ್ತು. ದೇಶ ವಿದೇಶಗಳ ಎಲ್ಲ ಮೀಡಿಯಾಗಳಲ್ಲಿಯೂ ಅದು ರೋಗ ತಡೆಗೆ ಬಳಸುವ ಒಂದು ವಿಧಾನ ಎಂದು ಬೊಬ್ಬೆ ಹೊಡೆಯುತ್ತಿದ್ದರೂ ಅವರೇನೋ ತಪ್ಪು ಮಾಡುತ್ತಿದ್ದಾರೆ ಎನ್ನುವಂತೆ ಜ ವಿಚಿತ್ರವಾಗಿ ನೋಡುತ್ತಿದ್ದರು. ಹತ್ತಿರ ಹೋದರೆ ಬೆದರಿದ ಹೋರಿಗಳಂತಾಡುತ್ತಿದ್ದರು !
ಶಿವಮೊಗ್ಗದ ನಂತರ ಉಡುಪಿ, ಮಂಗಳೂರಿಗೂ ಹೋಗಬೇಕಾದ್ದರಿಂದ ನಾವು ಕುಟುಂಬವರೆಲ್ಲ ಮಾಸ್ಕ್ ತೆಗೆದುಕೊಂಡಿದ್ದೆವು. ಆದರೆ ಕಟ್ಟಿಕೊಂಡಿರಲಿಲ್ಲ. ನಾನು ಹಾಗೇ ಸುಮ್ಮನೆ ಕೆಲವರನ್ನು ಗಮನಿಸುತ್ತಲೇ ಸಾಗುತ್ತಿದ್ದೆ. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದ ಕೂಡಲೇ ಬಹುತೇಕರು ಭಯ ಭೀತಿಯಿಂದ ಓಡುತ್ತಿದ್ದರು! ಇಲ್ಲವೇ ದೂರ ಸರಿದು ಮೂಗು ಮುಚ್ಚಿಕೊಳ್ಳುತ್ತಿದ್ದರು. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದರೆ ಹಂದಿಜ್ವರ ಬರುತ್ತದೆ ಎಂಬಂತೆ ನಡೆದುಕೊಳ್ಳುತ್ತಿದ್ದರು. ಒಂದೇ ಮಾತಲ್ಲಿ ಹೇಳುಬೇಕೆಂದರೆ ಮಾಸ್ಕ್ ಹಾಕಿಕೊಂಡವರೆಲ್ಲ ಒಂದು ರೀತಿ ಅಲ್ಲಿ ಅಸ್ಪೃಶ್ಯರಾಗಿದ್ದರು!
ಹೀಗಿದ್ದಾಗಲೇ ಮಾಸ್ಕ್ ಹಾಕಿಕೊಂಡವನೊಬ್ಬ ಸಹಜವಾಗಿ ಸೀನಿಬಿಟ್ಟ. ದೂರದಲ್ಲಿ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದ ಕೆಲವರು ಕ್ಷಣಾರ್ಧದಲ್ಲಿ ನೆಲಕ್ಕೆ ಎಸೆದ ಚಂಡು ಪುಟಿದೇಳುವ ಹಾಗೆ ದೂರಕ್ಕೆ ಓಡಿದರು. ಅದನ್ನು ಕಂಡು ನಿಜಕ್ಕೂ ನಾನು ತಬ್ಬಿಬ್ಬಾದೆ. ಹಂದಿ ಜ್ವರ ಜನ ಸಾಮಾನ್ಯರಲ್ಲಿ ಅಷ್ಟೊಂದು ಭೀತಿ ಹುಟ್ಟಿಸಿದೆಯಾ? ಎಂಬ ಆತಂಕ ಒಂದೆಡೆಯಾದರೆ, ಇಷ್ಟೆಲ್ಲಾ ಜಾಗೃತಿ ಇದ್ದು, ಸಮಾಜ ಮುಂದುವರಿದಿದ್ದರೂ ಇಂಥ ನಡವಳಿಕೆಗೆ ಕಾರಣವೇನು? ಎಂಬ ಪ್ರಶ್ನೆ ಕಾಡತೊಡಗಿತು. ಆದರೆ ಉತ್ತರ ಇನ್ನೂ ಸಿಕ್ಕಿಲ್ಲ.
ಸರಕಾರಗಳು ಹಂದಿ ಜ್ವರಕ್ಕೆ ಮದ್ದಿದೆ. ಅದು ಬರದಂತೆ ತಡೆಯಲು ಕೆಲವೇ ಮುಂಜಾಗೃತ ಕ್ರಮಗಳನ್ನು ಅನುಸರಿಸಿದರೆ ಸಾಕು, ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಎಲ್ಲ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿವೆ. ಆದರೂ ಈ ರೀತಿಯ ಭಯವೇಕೆ? ಒಂದು ರೀತಿಯಲ್ಲಿ ಈ ಭಯಕ್ಕೆ ಮಾಧ್ಯಮಗಳೂ ಕಾರಣವೇ? ಎಂಬ ಅನುಮಾನ ನಿಜಕ್ಕೂ ಕಾಡುತ್ತಿದೆ. ವೈದ್ಯರು ‘ಇದೇನೂ ಅಂಥ ಭಯಾನಕ ಕಾಯಿಲೆ ಅಲ್ಲ, ಇದಕ್ಕೆ ಚಿಕಿತ್ಸೆ ಇದೆ’ ಎನ್ನುತ್ತಾರೆ. ಇಷ್ಟಾದರೂ ಮೀಡಿಯಾಗಳು ಹಂದಿ ಜ್ವರ ಭಯಾನಕ ಎನ್ನುವಂತೆ ಬಿಂಬಿಸಿ ನಿತ್ಯವೂ ವರದಿ ಮಾಡುತ್ತಿವೆ. ಇಲ್ಲಿ ಎಡವುತ್ತಿರುವುದು ಎಲ್ಲಿ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಕಾರಗಳು ಕೂಡ ಸದ್ದಿಲ್ಲದೆ ಬಂದ ಈ ಕಾಯಿಲೆಗೆ ಮದ್ದು ಹಾಗೂ ಸೂಕ್ತ ಚಿಕಿತ್ಸೆಗೆ ವೈದ್ಯರ ನೇಮಕ ಮಾಡುವ ಬದಲು ‘ನಮ್ಮ ರಾಜ್ಯದಲ್ಲಿ ಇನ್ನೂ ಯಾರೂ ಸತ್ತಿಲ್ಲ, ಜ್ವರದ ತೀವ್ರತೆ ಇಲ್ಲ.’ಎಂದು ಹೇಳಿ ಆರಂಭದಲ್ಲಿ ಕೈ ತೊಳೆದುಕೊಂಡವು. ಆದರೆ ಈಗ ?
ಯಾವುದೇ ಕಾಯಿಲೆಗಾದರೂ ಸರಿ, ಮುಂಜಾಗೃತೆ ವಹಿಸುವುದು ಒಳ್ಳೆಯದು. ಆದರೆ ಜಾಗೃತಿವಹಿಸುವ ಬದಲು ಅಂಥವರನ್ನು ನೋಡಿ ಇತರರು ಅಣಕಿಸುವಂತೆ ನೋಡುವುದು ಎಷ್ಟು ಸರಿ?
ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಸಿಂಪ್ಲಿಸಿಟಿ ಪೇಜ್ನಲ್ಲಿ ಅಗಸ್ಟ್ ೨೭ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಆದರೂ ಹಂದಿ ಜ್ವರದ ಬಗ್ಗೆ ಜನರಲ್ಲಿ ಇರುವ ಭಯ ಕೊಂಚವಾದರೂ ದೂರ ಮಾಡಲು ಇದು ಕೆಲವರಲ್ಲಾದರೂ ಅರಿವು ಮೂಡಿಸೀತು ಎಂಭ ಆಸೆಯಿಂದ ಇಲ್ಲಿ ಬಿತ್ತರಿಸಿದ್ದೇನೆ...

Monday, August 17, 2009

ನೀರಾ... ಏಕೆ ಈ ನಿರಾಸಕ್ತಿ...?

‘ನೀರಾದಿಂ ಬೆಲ್ಲ ತಯಾರಿಸಬಹುದು. ಅದು ತುಂಬಾ ಸಿಹಿ. ಕಬ್ಬಿನ ಬೆಲ್ಲಕ್ಕಿಂತ ಈ ಬೆಲ್ಲ ಅತ್ಯಂತ ಉತ್ಕೃಷ್ಟದ್ದು. ನೀರಾದಿಂದ ತಯಾರಿಸುವ ಬೆಲ್ಲ ಸಿಹಿ ಹಾಗೂ ಸ್ವಾದಿಷ್ಟಯುಕ್ತ ಕೂಡ. ಇದರಿಂದ ಕೋಟಿಗಟ್ಟಲೆ ಹಣ ಸಂಪಾದಿಸಬಹುದು. ಎಲ್ಲಿ ತೆಂಗು ಬೆಳೆಯಲಾಗುತ್ತದೆಯೋ ಅಲ್ಲಿ ಅದರ ಬೆಲ್ಲ ತಯಾರಿಸಬಹುದು. ಇದು ಬಡತನ ನಿರ್ಮೂಲನೆಗೆ ದಾರಿ ಕೂಡ. ಆ ಮೂಲಕ ಈ ಧರೆಯಿಂದಲೇ ಬಡತನವನ್ನು ದೂರ ಮಾಡಬಹುದು’. -ಮಹಾತ್ಮ ಗಾಂಧಿ .
ಹೀಗೆ ಮಹಾತ್ಮ ಗಾಂಜಿ ಅವರೇ ನೀರಾ ಇಳಿಸುವುದನ್ನು ಸಮರ್ಥಿಸಿದ್ದರು. ಅಲ್ಲದೆ ಅವರ ‘ಹರಿಜನ’ ಪತ್ರಿಕೆಯಲ್ಲೂ ದಿ.ಗಜಾನನ ನಾಯಕ್ ಅರು ೧೯೩೯ರ ಜನವರಿ೭ರ ಸಂಚಿಕೆಯಲ್ಲಿ ‘ಗರ್ಭಿಣಿಯರು ವಾರಕ್ಕೆ ಎರಡ್ಮೂರು ಬಾರಿ ನೀರಾ ಸೇವಿಸಿದರೆ ಹುಟ್ಟುವ ಮಗು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಪೂರ್ಣವಾಗಿ ಹಾಗೂ ಸೌಂದರ್ಯಯುತವಾಗಿ ಹುಟ್ಟುತ್ತವೆ’ ಎಂದು ಬರೆದಿದ್ದರು.
ಇಷ್ಟೆಲ್ಲಾ ನಿದರ್ಶನಗಳು ಕಣ್ಮುಂದೆ ಇದ್ದರೂ ನಮ್ಮ ಸರಕಾರಗಳಿಗೆ ಮಾತ್ರ ನೀರಾವನ್ನು ಅಭಿವೃದ್ಧಿಪಡಿಸುವ ಬಗ್ಗೆಯಾಗಲಿ, ಅದರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದಕ್ಕಾಗಲಿ, ರೈತರ ಬದುಕನ್ನು ಆ ಮೂಲಕ ಹಸನು ಮಾಡುವುದಕ್ಕಾಗಲಿ ಕಾಳಜಿ ಇದ್ದಂತಿಲ್ಲ. ಕರ್ನಾಟಕದಲ್ಲಿ ‘ನೀರಾ ಚಳವಳಿ’ ನಡೆದು ೯ ವರ್ಷಗಳಾಗುತ್ತಿವೆ. ೨೦೦೧ರ ಅಕ್ಟೋಬರ್ ೯ಕ್ಕೆ ಇದೇ ಚಳವಳಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯ ಇಬ್ಬರು ರೈತರು ಬಲಿಯಾದರೂ ಸರಕಾರ ಮಾತ್ರ ಕೇವಲ ಭರವಸೆಯ ‘ಮತ್ತಿನಲ್ಲಿ’ಯೇ ತೇಲಾ(ಡುತ್ತಿದೆ.) ಡಿಸುತ್ತಿದೆ.
ಬೆಂಗಳೂರಿನ ಗಾಂ ಭವನದಲ್ಲಿ ಅದೇ ೨೦೦೧ರ ಆಗಸ್ಟ್೧೩ರಂದು ‘ನುಸಿಪೀಡೆ ಹಾಗೂ ನೀರಾ’ಎಂಬ ವಿಷಯದ ಕುರಿತು ನಡೆಸಿದ ರಾಷ್ಟ್ರೀಯ ಕಾರ್ಯಾಗಾರವೇ ನೀರಾ ಚಳವಳಿಗೆ ಪ್ರಮುಖ ಪ್ರೇರಣೆಯಾಯಿತು. ಚಳವಳಿಗೆ ಆದೇ ಆ.೨೭ರಂದು ಸರಕಾರ ಸ್ಪಂದಿಸುವ ನಾಟಕವಾಡಿ ಮೊಸಳೆ ಕಣ್ಣೀರು ಸುರಿಸಿ ನೀರಾ ಇಳಿಸಲು ಅನುಮತಿ ನೀಡುವುದಾಗಿ ತಿಳಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅದರ ಫಲವಾಗಿಯೇ ಚಳವಳಿ ತೀವ್ರ ಸ್ವರೂಪ ಪಡೆಯಿತು. ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಅದೇ ವರ್ಷ ಅಕ್ಟೋಬರ್ ೯ರಂದು ನಡೆದ ಹೋರಾಟ ತೀವ್ರ ಸ್ವರೂಪ ಪಡೆದಾಗ ಸರಕಾರ ಉತ್ತರ ನೀಡಿದ್ದು ಬಂದೂಕಿನ ನಳಿಕೆಯ ಮೂಲಕ! ಅದಕ್ಕೆ ತಮ್ಮಯ್ಯ ಹಾಗೂ ಪುಟ್ಟನಂಜಯ್ಯ ಎಂಬ ಇಬ್ಬರು ಅಮಾಯಕ ರೈತರು ಬಲಿಯಾದರು. ಆದರೆ ಅವರ ಬಲಿದಾನವಾದರೂ ಸರಕಾರಗಳು ಇಂದಿಗೂ ಬಗ್ಗದಿರುವುದು ಇತ್ತೀಚಿನ ಸರಕಾರಗಳು ಎಷ್ಟರಮಟ್ಟಿಗೆ ಜನಪರ, ರೈತಪರವಾಗಿವೆ ಎಂಬುದನ್ನು ತೋರಿಸುತ್ತವೆ.
ಅಂದು ಅದೇ ಚಳವಳಿಯನ್ನು ರಾಜಕೀಯ ದಾಳವಾಗಿಸಿಕೊಂಡ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಎಚ್.ಕೆ.ಪಾಟೀಲ್ ಹಾಗೂ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ರಾಜಕೀಯವಾಗಿ ಮತ್ತಷ್ಟು ಬೆಳೆದುನಿಂತರು. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಠಲೇನಹಳ್ಳಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡಿದರು. ಆದರೆ ಅದರಿಂದ ಬಡ ರೈತರಿಗೆ ಮಾತ್ರ ಸಿಕ್ಕಿದ್ದು ಕೋರ್ಟ್‌ಗೆ ಅಲೆಯುವ ಕಾಯಕ. ಆ ರೈತರ ಮೇಲೆ ಹಾಕಲಾಗಿರುವ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ, ಜತೆಗೆ ಚಳವಳಿಯ ಆಶಯವೂ ಈಡೇರಿಲ್ಲ! ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪದ್ಮರಾಜ್ ಆಯೋಗವನ್ನು ನೇಮಕ ಮಾಡಲಾಯಿತು. ಆ ಆಯೋಗ ವರದಿ ತಯಾರಿಸಿ ಸರಕಾರಕ್ಕೆ ನೀಡಿತಾದರೂ ಅದರಲ್ಲಿ ಏನಿದೆ ಎಂಬುದು ಇಂದಿಗೂ ಬಹಿರಂಗವಾಗಲಿಲ್ಲ.
ಲಕ್ಷಾಂತರ ರೈತರ ಬದುಕನ್ನು ಹಸನುಗೊಳಿಸಿದ ಕಲ್ಪವೃಕ್ಷಕ್ಕೆ ನುಸಿ ಪೀಡೆ ಕಾಣಿಸಿಕೊಂಡ ನಂತರ ಅವರು ಕಂಡುಕೊಂಡಿದ್ದು ನೀರಾ ಉತ್ಪನ್ನವನ್ನು. ನೀರಾ ಚಳವಳಿ ಆರಂಭವಾದ ನಂತರ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವಿಶ್ವವೇ ಬೆರಗಾಗುವ ರೀತಿಯಲ್ಲಿ ನೀರಾದಿಂದ ಸಕ್ಕರೆ ತಯಾರಿಸುವ ಪ್ರಶಿಕ್ಷಣ ತರಬೇತಿ ನೀಡಲಾಯಿತು. ಆದರೆ ಅನಂತರ ಅದಕ್ಕೆ ಮಾರುಕಟ್ಟೆ ಸಮಸ್ಯೆ ಹಾಗೂ ಸರಕಾರದ ನಿರುತ್ಸಾಹ ಎದುರಾಯಿತು. ಅಂದಿನಿಂದ ತೆಂಗು ಬೆಳೆಗಾರರು ಮತ್ತೆ ಅತಂತ್ರವಾದರು.
೨೦೦೦ರಿಂದ ೨೦೦೩ರ ವರೆಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆ ಬೀದಿ ಬೀದಿಗಳಲ್ಲಿ ಚಳವಳಿ ನಡೆಸಿದರು. ನೀರಾ ಬಗ್ಗೆ ರೈತರು ಹಾಗೂ ಸರಕಾರದ ಕಣ್ಣು ತೆರೆಸಿದರು. ೨೦೦೮ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭಾರತೀಯ ಸತ್ಸಂಗ ಸಮಾಜದ ಅಧ್ಯಕ್ಷರಾದ ಶ್ರೀ ಭಕ್ತಿ ತೀರ್ಥ ಸ್ವಾಮೀಜಿ ಕೂಡ ನೀರಾಗೆ ಸಂಬಂಸಿದಂತೆ ಹೋರಾಟ ನಡೆಸಿದರು. ಕರ್ನಾಟಕ ನೀರಾ ಮಹಾಮಂಡಳಿ ರಚನೆಗೆ ಒತ್ತಾಯಿಸಿದ್ದರು. ಬಜೆಟ್‌ನಲ್ಲಿ ೧೦ ಕೋಟಿ ರೂ.ಗಳನ್ನು ನೀರಾ ಉತ್ಪಾದನೆ, ಅಭಿವೃದ್ಧಿ ಹಾಗೂ ವಹಿವಾಟಿಗಾಗಿಯೇ ಮೀಸಲಿಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರು. ರಾಜ್ಯದ ಬಹುತೇಕ ಕಡೆಗಳಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಿದರು. ಆದರೂ ಸರಕಾರ ಮಾತ್ರ ಅಕಾರದ ಅಮಲಿನಲ್ಲಿ ಬೀದಿ ಬೀದಿಯಲ್ಲಿ ಹೆಂಡದಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಮುಂದಾಗುತ್ತಿದೆಯೇ ಹೊರತು ನೀರಾ ಉತ್ಪಾದನೆಗೆ ಸಹಕಾರ ನೀಡಲೇ ಇಲ್ಲ.
ನೀರಾ ಉತ್ಪಾದನೆಯ ಹಿನ್ನೆಲೆ:
ಭಾರತದಲ್ಲಿ ಅನಾದಿ ಕಾಲದಿಂದಲೂ ನೀರಾ ತಯಾರಿಸಲಾಗುತ್ತಿದೆ. ಇದು ಆಯುರ್ವೇದದಲ್ಲಿ ಹೆಚ್ಚು ಚಿರಪರಿಚಿತವೂ ಹೌದು. ಎಲ್ಲ ರೀತಿಯ ರೋಗಗಳಿಗೂ ಇದು ಮದ್ದು. ಆದರೆ ರಾಜ್ಯದಲ್ಲಿ ೧೯೫೧ರಲ್ಲಿ ಮೊದಲ ಬಾರಿಗೆ ನೀರಾ ಉತ್ಪಾದಿಸಲಾಯಿತು. ಆಗಲೇ ಕರ್ನಾಟಕದಲ್ಲಿ ೧೬೭ ಪಟ್ಟಣ ಹಾಗೂ ೧೫೨ ಪ್ರಮುಖ ಗ್ರಾಮೀಣ ಭಾಗಗಳಲ್ಲಿ ನೀರಾ ಮಾರಾಟ ಕೇಂದ್ರಗಳು ಸ್ಥಾಪನೆಯಾದವು. ೧೭ ನೀರಾ ಮತ್ತು ಪನೆ ಬೆಲ್ಲ ಸಹಕಾರಿ ಸಂಘಗಳು ಕಾರ್ಯನಿರ್ವಹಿಸತೊಡಗಿದವು. ೧೯೫೮ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ನೀರಾ ಮತ್ತು ಪನೆ ಬೆಲ್ಲ ಸಂಯುಕ್ತ ಸಂಘಗಳು ಆಸ್ತಿತ್ವಕ್ಕೆ ಬಂದವು.
ಕೇವಲ ಹತ್ತು ವರ್ಷಗಳ ನಂತರ ಸರಕಾರ ತಂದ ೧೯೬೮ರ ಶಾಸನದಿಂದ ನೀರಾ ಉದ್ಯಮ ಸಂಪೂರ್ಣ ನೆಲ ಕಚ್ಚಿತು. ಆದರೆ ೨೦೦೧ರಲ್ಲಿ ಎಲ್ಲೆಡೆ ತೆಂಗಿಗೆ ನುಸಿಪೀಡೆ ಕಾಣಿಸಿಕೊಂಡಾಗ ಮತ್ತೆ ನೀರಾ ಕುರಿತ ಚಿಂತನೆ, ಚಳವಳಿ ಆರಂಭವಾಗಿದ್ದು.
ಉಪಯೋಗ ಹಾಗೂ ಸಾಧ್ಯತೆ:
ನೀರಾ ಬಗ್ಗೆ ಜನಪ್ರತಿನಿಗಳಿಗೆ ಹಾಗೂ ಅಕಾರಿಗಳಿಗೆ ಸರಿಯಾದ ಅರಿವು ಇಲ್ಲದಿರುವುದೇ ನಿರುತ್ಸಾಹಕ್ಕೆ ಕಾರಣ ಎನ್ನಲಾಗಿದೆ. ಅದನ್ನು ಮರದಿಂದ ಇಳಿಸಿದ ಕೆಲವೇ ಗಂಟೆಗಳಲ್ಲಿ ಇದು ಹುಳಿ ಬಂದು ಹೆಂಡವಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ನೀರಾ ನಿಜಕ್ಕೂ ಪರಿಪೂರ್ಣ ಪೇಯ. ಕೋಕಾ ಕೋಲಾ, ಪೆಪ್ಸಿಯಂತ ವಿದೇಶಿ ಹಾಗೂ ಹಾನಿಕಾರಕ ಪಾನೀಯಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಎದುರು ನಿಂತು ಬೆಳೆಯಬಲ್ಲ ಸಾಮರ್ಥ್ಯ ಇರುವುದು ಎಳೆನೀರು ಹಾಗೂ ನೀರಾಗೆ ಮಾತ್ರ! ಹೌದು, ಇವೆರಡೂ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ.
ನೀರಾ ಎಂದರೆ ಹೆಂಡ(ಸರಾಯಿ) ಎಂದಲ್ಲ. ಇದು ಎಲ್ಲ ವಯೋಮಿತಿಯ ಜನರಿಗೂ ಉಪಯುಕ್ತವಾಗುವ ಆರೋಗ್ಯದಾಯಕ ಪಾನೀಯ. ಆದರೆ ಕೆಲವರು ನೀರಾ ಹೆಸರಿನಲ್ಲಿ ಅಬಕಾರಿ ಅಕಾರಿಗಳ ಜತೆ ಸೇರಿಕೊಂಡು ಹೆಂಡವನ್ನು ಮಾರುವ ದಂಧೆ ಆರಂಭಿಸಿದ್ದಾರೆ. ಇಂಥವರು ನಿಜಕ್ಕೂ ರೈತರಲ್ಲ ಎಂಬುದು ಬಹಿರಂಗ ಸತ್ಯ. ನೀರಾ, ನೀರಿನಂತೆ ಪರಿಶುದ್ಧ, ಪಾರದರ್ಶಕ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದನ್ನು ಇಳಿಸಿದ ನಂತರ ಮೂರು ಗಂಟೆಯವರೆಗೆ ಹಾಗೆಯೇ ಇಟ್ಟರೂ ಮತ್ತಿನ ಅಂಶ ಇರುವುದಿಲ್ಲ. ೧೨ ಗಂಟೆಯ ನಂತರವಷ್ಟೇ ಶೇ.೦.೭ ರಿಂದ ಶೇ.೦.೮ರಷ್ಟು ಮತ್ತು ಬರುತ್ತದೆ. ಆದರೆ ವೈeನಿಕವಾಗಿ ಇದನ್ನು ಸಂಸ್ಕರಿಸಿದರೆ ೬ ತಿಂಗಳ ಕಾಲ ರುಚಿ ಕೆಡದಂತೆ ಹಾಗೆಯೇ ಇಡಬಹುದು ಎಂಬುದು ತಜ್ಞರ ಅಭಿಪ್ರಾಯ.
ನೀರಾ ನಿಜಕ್ಕೂ ಆರೋಗ್ಯದಾಯಕ, ರೋಗನಿರೋಧಕ ಶಕ್ತಿ ಹೊಂದಿದ ಹಾಗೂ ನರದೌರ್ಬಲ್ಯ ಹೊಂದಿದವರಿಗೆ ದಿವ್ಯ ಔಷಧ ಕೂಡ ಹೌದು. ಇದರಿಂದ ಬೆಲ್ಲ, ಕಲ್ಲು ಸಕ್ಕರೆ, ಜ್ಯೂಸ್, ಜಾಮ್, ಚಾಕೋಲೇಟ್, ಬಿಸ್ಕೆಟ್, ಸಿರಪ್ ಹಾಗೂ ಇನ್ನಿತರೆ ಸಿಹಿ ತಿಂಡಿಗಳನ್ನು ತಯಾರಿಸಬಹುದು! ಆಯುರ್ವೇದದಲ್ಲಿ ತೆಂಗಿನ ಉತ್ಪಾದನೆಗಳಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಈಗಿನ ಯಾವ ಜನಪ್ರತಿನಿಗಳಿಗೂ ಇಲ್ಲ.
ನೆರೆಯ ಕೇರಳ, ತಮಿಳು ನಾಡು, ಮಹಾರಾಷ್ಟ್ರದಲ್ಲಿ ನೀರಾ ಉದ್ಯಮ ಬೆಳೆದಂತೆ ಕರ್ನಾಟಕದಲ್ಲಿ ಬೆಳೆದಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಅಕಾರಿಗಳಿಗೆ ಹಾಗೂ ಜನಪ್ರತಿನಿಗಳಿಗೆ ಇದರ ಬಗ್ಗೆ ಇರುವ ಅರಿವಿನ ಕೊರತೆ ಹಾಗೂ ರೈತರ ಬಗ್ಗೆ ಇವರಿಗಿರುವ ನಿಷ್ಕಾಳಜಿ. ನೀರಾ ನಿಜಕ್ಕೂ ರೈತರ ಪಾಲಿನ ಆಶಾಕಿರಣ. ಇಲ್ಲಿ ಕೃಷಿಕರಿಗೆ ವಿಫುಲವಾದ ಅವಕಾಶಗಳಿವೆ. ಅವುಗಳನ್ನು ಸರಕಾರ ಕಂಡುಕೊಳ್ಳಬೇಕಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೆಂಡದ ಅಮಲಿನಲ್ಲಿ ಕುಣಿದಾಡುವುದಕ್ಕಿಂತ ವೈಜ್ಞಾನಿಕವಾಗಿ ನೀರಾದಿಂದಾಗುವ ಉಪಯೋಗಗಳನ್ನು ಪತ್ತೆ ಹಚ್ಚಬೇಕಿದೆ. ಜತೆಗೆ ಸರಕಾರದಿಂದ ಪರವಾನಗಿ ಪಡೆದು ನೀರಾ ಉತ್ಪಾದನೆಗೆ ಕೈ ಹಾಕುವಂತೆ ಮಾಡಬೇಕಿದೆ. ಜತೆಗೆ ನೀರಾ ಉತ್ಪನ್ನಗಳ ಅಭಿವೃದ್ಧಿ ಬಗ್ಗೆ ಚಿಂತಿಸಿದರೆ ರೈತರ ಬಾಳು ಕೂಡ ಹಸನಾಗುವುದರಲ್ಲಿ ಸಂಶಯವಿಲ್ಲ.
ಇಂದು ಕರ್ನಾಟಕದಲ್ಲಿ ಶೇ.೩೫ ರಿಂದ ಶೇ.೪೦ ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಮನ್ನಗಳು ವಿನಾಕಾರಣ ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರುವ ತುರ್ತು ಅಗತ್ಯವಿದೆ. ವಿಶ್ವದಲ್ಲಿ ಇಂದು ರೈತರು ಜಾಗತಿಕರಣ, ಉದಾರೀಕರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಇಳಿಯಬೇಕಿದ್ದು, ಮೌಲ್ಯರ್ವತ ವಸ್ತುಗಳನ್ನು ಉತ್ಪಾದಿಸುವ ಮೂಲಕ ಸ್ಪರ್ಧೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಳ್ಳಬೇಕಿದೆ. ಈ ಕಾರಣಕ್ಕಾಗಿಯೇ ಸರಕಾರಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಕೃಷಿ ಉತ್ಪನ್ನಗಳನ್ನು ಉದ್ಯಮವಾಗಿ ನಿರ್ಮಾಣ ಮಾಡುವ ಇಚ್ಛಾಶಕ್ತಿ ತೋರಬೇಕಿದೆ.

Sunday, August 2, 2009

ಅವಳು ಮಮತೆಯ ಮಡಿಲು...

My Dear Friend,
ಆಗಿನ್ನೂ ಮೈಸೂರಿಗೆ ಬಂದಿಳಿದು ಮೂರು ದಿನಗಳಾಗಿರಲಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಆ ಹಸಿರು ಹಾಸಿಗೆ ಮೇಲೆ ಕುಳಿತು ನಾ ಏನೋ ಗೀಚುತ್ತಿದ್ದ ಸಮಯದಲ್ಲಿ ನೀ ಬಂದು ಮಾತನಾಡಿಸಿದ ದೃಶ್ಯ ಇನ್ನೂ ಕಣ್ಣಂಚಿನಲ್ಲೇ ಇದೆ. ಪರಿಚಯ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ನೇಹದ ಚಿಗುರೊಡೆದಿತ್ತು. ಅಂದು ನಿನ್ನ ಧ್ವನಿಯಿಂದ ಹೊರ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲಿ ಝೇಂಕರಿಸುತ್ತಲೇ ಇದೆ. ಅದಕ್ಕೆ ಅಲ್ಲಿನ ಆ ಹಸಿರೇ ಸಾಕ್ಷಿ!
ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ ಹೆಮ್ಮರವಾಗಿದ್ದು ನಿನಗೂ ಗೊತ್ತು. ತುಂಟಾಟ, ತರಲೆಗಳು, ವಿಚಾರಗಳ ವಿನಿಮಯ, ಚಿಂತನೆಗಳು ನಮ್ಮೊಳಗೆ ಬ್ರೇಕಿಲ್ಲದ ಕಾರಿನಂತೆ ಓಡಿದ್ದೂ ಉಂಟು. ಗಂಡು ಹೆಣ್ಣು ಕೇವಲ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂಬ ಮಾತಿಗೆ ಅಪವಾದ ನೀನು. ನಿನ್ನೊಂದಿಗೆ ಕಳೆದ ಎರಡು ವರ್ಷಗಳು ಇನ್ನೂ ಆ ಹಸಿರಿನಂತೆಯೇ ಹಸಿರಾಗಿ ಉಸಿರಾಡುತ್ತಿವೆ. ಸ್ನೇಹದ ಹಾಳೆಗೆ ಮಮತೆಯ ಬಣ್ಣ ಹಚ್ಚಿ ಅಂದಗೊಳಿಸಿದವಳು ನೀನು. ಆ ಇಡೀ ಎರಡು ವರ್ಷಪೂರ್ತಿ ನಿನ್ನ ‘ಮಮತೆಯ ಸಿಹಿ’ ಉಂಡು ಕೊಬ್ಬಿದ ನನಗೆ ಮತ್ಯಾಕೊ ಕೊರಗು ಶುರುವಾಯಿತಲ್ಲ! ಕಾರಣ, ನೀನು ದಿಢೀರ್ ಮರೆಯಾದದ್ದೇ ಇರಬೇಕು!?
ಪ್ರತಿನಿತ್ಯ ನಿನ್ನ ಮಾತು ಕೇಳುತ್ತಲೇ ನಿನ್ನ ತುಂಟತನ, ನಿರ್ಮಲ ನಗು, ವಿಚಾರಲಹರಿಗಳಿಗೆ ತಲೆ ದೂಗುತ್ತಲೇ ಇದ್ದವನು ನಾನು. ನೀ ಹೇಳದೆ, ಕೇಳದೆ, ಒಂದು ಮಾತೂ ಉಲಿಯದೆ ನಾಪತ್ತೆಯಾಗೊದೆ? ಅಂದಿನಿಂದ ನಾನು ಧ್ವನಿಯಿಲ್ಲದ ಕೋಗಿಲೆಯಾಗಿದ್ದೆ. ಅಂದವಿಲ್ಲದ ಅರಗಿಣಿಯಾಗಿದ್ದೆ. ರೆಕ್ಕೆಪುಕ್ಕಗಳೆಲ್ಲ ಇದ್ದೂ ಕುಣಿಯಲಾಗದ ನವಿಲಾಗಿದ್ದೆ.
ಈ ಜಗತ್ತಿನಲ್ಲಿ ಪ್ರೀತಿ, ಸ್ನೇಹಕ್ಕೆ ಬರವಿಲ್ಲ(?). ಆದರೆ ನಿರ್ಮಲ ಪ್ರೀತಿ, ‘ಮುಕ್ತಮನದ ಸ್ನೇಹ’ ಅದೆಷ್ಟು ಜನರಿಗೆ ಸಿಕ್ಕಿದೆ ಹೇಳು? ಅಪ್ಪಟ ಗೆಳೆಯರೆಂದು ನಂಬಿ ಕಷ್ಟ ಸುಖಗಳೆಲ್ಲವನ್ನೂ ಬಿಚ್ಚಿಟ್ಟ ಮಾರನೆ ದಿನವೇ ಸಹಾಯ ಮಾಡುವ ಗೋಜಿಗೂ ಹೋಗದೆ ಸಮಯ ಸಾಧಕತನವನ್ನು ತೋರಿಸಿ, ಅದನ್ನೇ ಬಂಡವಾಳ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವ ಈ ದಿನಮಾನಗಳಲ್ಲಿ ನೀನು ನಿಜಕ್ಕೂ ‘ಕಡಲಾಳದ ಮುತ್ತು’. ಆ ವಿಚಾರದಲ್ಲಿ ನಾ ನಿಜಕ್ಕೂ ಆದೃಷ್ಟವಂತ; ಆಂದುಕೊಂಡಿದ್ದೆ. ನೀ ಮರೆಯಾದಾಗ ಅದೇ ಕಡಲಲ್ಲಿ ಈ ಮುತ್ತು ಕಳೆದು ಹೋಯಿತು ಎಂದುಕೊಂಡೆ. ಆ ಗಳಿಗೆಯಿಂದ ಸುಮಾರು ಐದು ವರ್ಷ ನಮ್ಮ ನಿರ್ಮಲ ಸ್ನೇಹ ನನಗೇ ಕನಸೆಂಬಂತೆ ಭಾಸವಾಗಿತ್ತು.
ಮನದಾಳದ ಎಷ್ಟೋ ನೋವು ನಲಿವುಗಳನ್ನು ಆಗ ನಿನ್ನೊಂದಿಗೆ ಬಿಚ್ಚಿಟ್ಟಿದ್ದೆ. ಆಗಾಗ ಮಾಡಿದ ತಪ್ಪಿಗೆ ಬೈಸಿಕೊಂಡಿದ್ದೆ, ಬೈದಿದ್ದೆ. ಆನಂತರ ಈ ಹಕ್ಕಿ ಮೂಕವಾಗಿತ್ತು! ನೀ ಮರೆಯಾದಾಗ ಇನ್ನೆಂದೂ ಸಿಗಲಾರೆ ಎಂಬ ಭಯ, ನಿನ್ನ ನೆನಪು ಆಗಾಗ ಕಡಲಿನಲ್ಲಿ ಭುಗಿಲೇಳುವ ಅಲೆಗಳ ಹಾಗೆ ಭೋರ್ಗರೆಯುತ್ತ ಅಪ್ಪಳಿಸುತ್ತಿದ್ದವು. ನೀನು ಬರೆದುಕೊಟ್ಟ ವಿಳಾಸದ ಆಟೋಗ್ರಾಫ್ ಡೈರಿ ಕೂಡ ನನ್ನ ದುರಾದೃಷ್ಟಕ್ಕೆ ಕಳೆದುಹೋಗಿತ್ತು. ನಿನ್ನ ಊರು ಗೊತ್ತಿದ್ದರೂ ವಿಳಾಸ ಗೊತ್ತಿರಲಿಲ್ಲ, ನೀನೆಲ್ಲಿದ್ದೆ ತಿಳಿಯಲಿಲ್ಲ. ಈಗ ನನ್ನ ಮನದಾಳದ ಸಾಗರ ಪ್ರಶಾಂತವಾಗಿದೆ. ತುಪ್ಪವೇ ಬಂದು ರೊಟ್ಟಿಗೆ ಬಿದ್ದಹಾಗೆ ನೀ ಮೊನ್ನೆ ನನ್ನ Cellಗೆ ಅದೆಲ್ಲಿಂದಲೋ "I am Kamala. how r u ?'' ಎಂಬ ಸಂದೇಶ ಕಳುಹಿಸಿದಾಗ ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ!
ನೀ ಸಿಕ್ಕಿದ್ದು ಕಾಯಿಲೆ ಬಿದ್ದ ಕೋಗಿಲೆಗೆ ಹುಶಾರಾಗಿ ಧ್ವನಿ ಬಂದಹಾಗಿತ್ತು, ನವಿಲಿಗೆ ನರ್ತಿಸಿದ ಖುಷಿ. ಹೆಣ್ಣು ಮಮತಾಮಯಿ, ಅವಳ ಹೃದಯ ಸಾಗರದಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ ಮಮತೆಗಳಿಗೆ ಅಪಾರ ಜಾಗ ಎಂದು ಕೇಳಿದ್ದೆ. ಅದು ಈಗ ಮತ್ತೆ ನಿಜವಾಯಿತು.
ನೀ ಮತ್ತೆ ಸಿಕ್ಕ ಈ ಗಳಿಗೆಯನ್ನು ನಿಜಕ್ಕೂ ನನ್ನಿಂದ ವರ್ಣಿಸಲಾಗುತ್ತಿಲ್ಲ. ನಿನ್ನ ಮಮತೆಗೆ ನಿಜಕ್ಕೂ ಈ ಹೃದಯದ ಗೆಳೆಯನ ಥ್ಯಾಂಕ್ಸ್.
Powered By Blogger